Mysore
23
few clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಮನೆಯಲ್ಲಿಯೇ ಇವೆ ಚಳಿಗೆ ಪರಿಹಾರಗಳು

• ರಮ್ಯ ಅರವಿಂದ್

ಚರ್ಮದ ಕಾಂತಿಯ ರಕ್ಷಣೆಗೆ ನಾವು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಅದರಲ್ಲಿಯೂ ಚಳಿಗಾಲ ಬಂತು ಎಂದರೆ ಸಾಕು ಚರ್ಮ ಒಡೆಯುವುದನ್ನು ತಡೆಗಟ್ಟುವುದು ದೊಡ್ಡ ಸವಾಲು. ಇದಕ್ಕಾಗಿ ಸಾವಿರಾರೂ ರೂ. ವ್ಯಯಿಸಿ ವಿವಿಧ ಕ್ರೀಮ್‌ಗಳನ್ನು ಖರೀದಿಸಿ ಬಳಸುತ್ತೇವೆ. ಕೆಲ ಬಾರಿ ಅವು ಅಡ್ಡಪರಿಣಾಮ ಬೀರಿರುವ ಉದಾಹರಣೆಗಳಿವೆ ಆದರೆ ಯಾವುದೇ ಅಡ್ಡ ಪರಿಣಾಮಗಳು ಬೀರದ ಮನೆಯಲ್ಲಿಯೇ ಸಾಕಷ್ಟು ಪರಿಹಾರಗಳು ಇದ್ದು, ಅವುಗಳನ್ನು ಬಳಸಿದರೆ ನಾವು ನಮ್ಮ ಚರ್ಮ ಒಡೆಯುವುದನ್ನು ತಪ್ಪಿಸಬಹುದಾಗಿದೆ.

ಜೇನುತುಪ್ಪ
ಜೇನುತುಪ್ಪದಲ್ಲಿ ಚರ್ಮದಲ್ಲಿ ತೇವಾಂಶ ಕಡಿಮೆಯಾಗುವುದನ್ನು ತಡೆಯುವ ಸಾಮರ್ಥ್ಯವಿದೆ. ಜೇನಿನಲ್ಲಿರುವ ಕ್ಯೂಮೆಕ್ಟಂಟ್‌ಗಳು ಚರ್ಮದಿಂದ ತೇವಾಂಶ ಕಡಿಮೆಯಾಗಿ ಚರ್ಮ ಒಡೆಯುವುದನ್ನು ತಡೆಯುತ್ತವೆ. ಅಲ್ಲದೆ ತಂಪಾಗಿ ಬೀಸುವ ಗಾಳಿಯಿಂದ ನಿಮ್ಮ ಚರ್ಮ ಒಡೆಯುವುದರಿಂದ ಜೇನುತುಪ್ಪವು ಅದನ್ನು ಪೋಷಿಸಿ ನೈಸರ್ಗಿಕ ಎಕ್ ಫೋಲಿಯೇಟರ್ ಆಗಿ ಕೆಲಸ ಮಾಡಲಿದೆ. ಅಲ್ಲದೆ ನಿಮ್ಮ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಿ ಚರ್ಮದ ಕಾಂತಿಯನ್ನು ಕಾಪಾಡುತ್ತದೆ. ಬಳಸುವುದು ಹೇಗೆ?: ಹೊರಗಡೆ ಹೋಗಿ ಬಂದ ಬಳಿಕ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಒಂದು ಚಮಚ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಕೆಲ ಕಾಲ ಅದನ್ನು ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು. ಆನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಬೇಕು.

ಆಲೂಗಡ್ಡೆ
ಆಲೂಗಡ್ಡೆಯೂ ನಿಮ್ಮ ಚರ್ಮದ ರಕ್ಷಣೆಗೆ ಉತ್ತಮ ಮನೆ ಮದ್ದು. ಇದು ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ ಚರ್ಮಕ್ಕೆ ಕೋಮಲಾಂಶ ನೀಡುವಲ್ಲಿ ಸಹಕಾರಿಯಾಗಿದೆ. ಮೊದಲು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ನಂತರ ತುರಿದುಕೊಳ್ಳಬೇಕು. ನಂತರ ಆ ಆಲೂಗಡ್ಡೆ ತುರಿಯನ್ನು ಮುಖಕ್ಕೆ ಹಾಕಿ ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದರ ಜತೆಗೆ ಐಸ್ ಕ್ಯೂಬ್ ಇದ್ದರೆ ಅದರಲ್ಲಿಯೂ ಮಸಾಜ್ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಮುಖ ಚರ್ಮ ಮತ್ತಷ್ಟು ಮೃದುವಾಗಲಿದೆ. ಜತೆಗೆ ಕಾಂತಿಯೂ ಹೆಚ್ಚಾಗಲಿದೆ. ಚಳಿಗಾಲದಲ್ಲಿ ನಿಮ್ಮ ಮುಖ ಒಡೆಯುವುದೂ ತಪ್ಪಲಿದೆ.

ಕೊಬ್ಬರಿ ಎಣ್ಣೆ
ನಮಗೆಲ್ಲ ತಿಳಿದಿರುವಂತೆ ಒಡೆದ ಚರ್ಮಕ್ಕೆ ಉತ್ತಮ ಮನೆ ಮದ್ದು ಎಂದರೆ ಅದು ಕೊಬ್ಬರಿ ಎಣ್ಣೆ. ಕೊಬ್ಬರಿ ಎಣ್ಣೆ ದೇಹಕ್ಕೆ ಒಂದು ಉತ್ತಮ ಮಾಯಿಶ್ಚರೈಸರ್ ಇದ್ದಂತೆ. ದೇಹದ ಒಡೆದ ಚರ್ಮಗಳ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಬೇಕು. ನಂತರ ಕೆಲ ಕಾಲ ಅದನ್ನು ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಅದು ದೇಹಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ನೀಡಿದಂತೆ ಆಗಬಹುದು.

ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಲು ಆಗದಿದ್ದರೆ ಸ್ನಾನದ ಕೊನೆಯಲ್ಲಿ ಒಂದು ಲೋಟ ನೀರಿಗೆ ಒಂದಷ್ಟು ತೆಂಗಿನೆಣ್ಣೆಯ ಹನಿಗಳನ್ನು ಹಾಕಿಕೊಂಡು ಕೈ, ಕಾಲು, ಬೆನ್ನು, ಹೊಟ್ಟೆಗೆ ಹಚ್ಚಿಕೊಂಡರೆ ತುರಿಕೆ ಹಾಗೂ ಕೆರೆತದಂತಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳ ಬಹುದು.

ಹೆಚ್ಚಿನ ಬಿಸಿ ನೀರು ಕೂಡ ಚರ್ಮಕ್ಕೆ ಹಾನಿ: ಕೆಲವೊಮ್ಮೆ ಹೆಚ್ಚಿನ ಬಿಸಿ ನೀರು ಕೂಡ ನಿಮ್ಮ ಚರ್ಮ ಒಡೆಯಲು ಮತ್ತು ಒಣಗಲು ಕಾರಣವಾಗಬಹುದು. ಆದ್ದರಿಂದ ಸ್ನಾನ ಮಾಡಲು ಆದಷ್ಟು ಬೆಚ್ಚಗಿನ ನೀರನ್ನು ಬಳಸಿದರೆ ಅದು ದೇಹಕ್ಕೆ ಒಳ್ಳೆಯದು. ಹೆಚ್ಚಿನ ಜನರು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಇಚ್ಛೆ ಪಡುತ್ತಾರೆ. ಆದರೆ ಅದು ಚರ್ಮವನ್ನು ಸುಡುವುದರಿಂದ ಚರ್ಮದಲ್ಲಿನ ತೇವಾಂಶ ಕಡಿಮೆಯಾಗಿ ಚರ್ಮ ಒಡೆಯಲು ಆರಂಭಿ ಸುತ್ತದೆ. ಅಲ್ಲದೆ ಅದು ಚರ್ಮಕ್ಕೆ ಹಾನಿಯೂ ಕೂಡ. ಬಿಸಿ ನೀರು ಚರ್ಮದ ಮಾಯಿಶ್ಚರೈಸ್ ಅನ್ನು ತೆಗೆದುಹಾಕುತ್ತದೆ. ಅಲ್ಲದೆ ಅಷ್ಟು ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದರಿಂದಲೂ ಕೂದಲಿನ ಬುಡ ದುರ್ಬಲವಾಗಿ ಕೂದಲು ಉದುರುವ ಸಮಸ್ಯೆಯೂ ಕಾಡಲಿದೆ. ಆದ್ದರಿಂದ ಸ್ಥಾನ ಮಾಡುವಾಗ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ.
(abhigna.ramya@gmail.com)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!