Mysore
23
overcast clouds
Light
Dark

ವನರಂಗದಲ್ಲಿ ತೆರೆಯಲಿದೆ ಹಾಡಿಯ ಬಾಗಿಲು

• ಶ್ರೀವಿದ್ಯಾ ಕಾಮತ್

ನೀವು ಕಾಕನಕೋಟೆ ಕಾಡಿಗೆ ಹೋಗಿದ್ದೀರಾ? ಹಾಡಿಯ ಜನರ ಹಾಡುಗಳನ್ನು ಕೇಳಿದ್ದೀರಾ? ‘ಅಯ್ಯೋ, ಈ ಚಳಿಯಲ್ಲಿ, ಅದೂ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವಾಗ, ಅಷ್ಟು ದೂರದ ಕಾಕನಕೋಟೆಗೆ
ಹೋಗುವುದು ಕಬಿನಿ ಹಿನ್ನೀರಿನಲ್ಲಿ ಸುತ್ತುವುದು ಸಾಧ್ಯವೇ? ಎಂದು ಮರುಗುವುದು ಬೇಡ.

ಮೈಸೂರಿನ ಭಾರತೀಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರೂ, ರಂಗಾಯಣದ ಹಿರಿಯ ಕಲಾವಿದರೂ ಆದ ಎಸ್.ರಾಮನಾಥ್, ಹೆಚ್.ಡಿ.ಕೋಟೆ ಪ್ರದೇಶದ ಕಾಕನಕೋಟೆಯ ಒಂದು ಕಿರುಚಿತ್ರಣವನ್ನು ಮೈಸೂರಿಗರಿಗಾಗಿ ರಂಗಾಯಣದ ವನರಂಗದಲ್ಲಿ ಸೃಷ್ಟಿ ಮಾಡಿದ್ದಾರೆ. ಮಕ್ಕಳ ಪರೀಕ್ಷೆಯ ಒತ್ತಡದ ನಡುವೆ, ಹೊಸವರ್ಷಕ್ಕೊಂದು ಹೊಸ ಆರಂಭ ‘ಕಾಕನಕೋಟೆ’ ನಾಟಕದ ಮೂಲಕ ಆರಂಭವಾಗಿದೆ.

ಸುಮಾರು 15 ವರ್ಷಗಳ ಹಿಂದೆ ಆರಂಭವಾದ ರಂಗ ಶಿಕ್ಷಣ ಕೇಂದ್ರ, ಪ್ರತಿ ವರ್ಷವೂ ರಂಗಭೂಮಿ ಆಸಕ್ತ ಯುವಕ ಯುವತಿಯರಿಗೆ, ನಟನೆ, ವಸ್ತ್ರವಿನ್ಯಾಸ, ರಂಗ ಸಜ್ಜಿಕೆ ಹೀಗೆ ರಂಗಭೂಮಿಯಲ್ಲಿ ಮುಂದುವರಿಯಲು ಬೇಕಾದ ಎಲ್ಲ ಸಿದ್ಧತೆಗಳಿಗೂ ಗಟ್ಟಿಯಾದ ಬುನಾದಿಯನ್ನು ಹಾಕಿಕೊಡುತ್ತ ತರಬೇತಿಯನ್ನು ನೀಡುತ್ತಾ ಬಂದಿದೆ. ಈ ವರ್ಷವೂ, ರಂಗಭೂಮಿಯ ಕನಸುಹೊತ್ತ 18 ಕಲಾವಿದರ ತಂಡವನ್ನು ತರಬೇತುಗೊಳಿಸಿ, ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರವರ ಮೇರು ಕೃತಿ, ‘ಕಾಕನಕೋಟೆ’ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

ಕಾಕನಕೋಟೆ ನಾಟಕ ಈಗಾಗಲೇ 7 ಭರ್ಜರಿ ಪ್ರದರ್ಶನಗಳನ್ನು ಕಂಡಿದೆ. ರಂಗಾಯಣದ ವನರಂಗ ಪ್ರೇಕ್ಷಕರಿಂದ ಭರ್ತಿಯಾಗಿ, ಕೆಲವರಿಗೆ ಟಿಕೆಟ್ ಸಿಗದೇ ಅವರು ಹಿಂದಿರುಗಿದ ಉದಾಹರಣೆಯೂ ಇದೆ. ನಾಟಕದ
ಹಲವು ವಿಶೇಷತೆಗಳನ್ನು ಹೊಂದಿದ್ದು, ಅವುಗಳಲ್ಲಿ ಮುಖ್ಯವಾದವು ಹೆಚ್.ಕೆ.ದ್ವಾರಕಾನಾಥರವರ ಕೈಗಳ ಜಾದುವಿನಿಂದ ಮೂಡಿಬಂದಿರುವ ‘ಕಾಕನಕೋಟೆ’ಯನ್ನೇ ನೆನಪಿಸುವಂತಹ ರಂಗಸಜ್ಜಿಕೆ, ಅನುಷ್ ಶೆಟ್ಟಿಯವರ ನೇತೃತ್ವದಲ್ಲಿ ಸಂಯೋಜನೆಗೊಂಡು, ರಂಗದಮೇಲಿನ ಪಾತ್ರಧಾರಿಗಳೇ ಹೊಮ್ಮಿಸುವ ಹಾಡಿಯ ಕುರುಬರು ಹಾಡುವ ಜಾನಪದ ಸಂಗೀತ, ಪೇಟೆಯ ಹುಡುಗರನ್ನು, ಹಾಡಿಯ ಜೇನು ಕುರುಬರನ್ನಾಗಿಸುವ ಅಮಿತಶೆಟ್ಟಿಯವರ ಆಕರ್ಷಕ ವಸ್ತ್ರವಿನ್ಯಾಸ, ಶಾಂಭವಿಯವರ ಕುರುಬರ ಶೈಲಿಯ ನೃತ್ಯ ಸಂಯೋಜನೆ, ಇವಷ್ಟೇ ಅಲ್ಲದೆ, ನಾಯಿಯೊಂದು ನಾಟಕದ ಪಾತ್ರಧಾರಿಯಾಗಿರುವುದು ನಾಟಕದ ವೈಶಿಷ್ಟ್ಯವನ್ನು ಸಾರುತ್ತದೆ.

ತಂಡದ ಜೊತೆ ಅಭ್ಯಾಸದ ಸಮಯದಿಂದಲೂ ಒಗ್ಗಿಹೋಗಿದ್ದ ನಾಯಿಯೊಂದು, ತಾನೂ ಹಾಡಿಯ ನಾಯಿಯಂತೆ ಬಂದು, ಪಾತ್ರಧಾರಿಗಳೊಡನೆ ಕಲೆತು, ಬೆರೆತು, ರಂಜಿಸಿ, ತನ್ನಷ್ಟಕ್ಕೆ ತಾನಿದ್ದು ಹೋಗುತ್ತದೆ.

‘ಇಂತಹ ನಾಟಕವೊಂದು, ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಮಾಡಿಸುವುದು ಸುಲಭದ ಮಾತಲ್ಲ. ಯಾವುದೇ ರೀತಿಯ ಅನುಭವವಿಲ್ಲದವರಿಂದ ಇಂತಹ ನಾಟಕವನ್ನು ಮಾಡಿಸುವುದು, ಸಂಗೀತದ ಸಂಪೂರ್ಣ ಜವಾಬ್ದಾರಿಯನ್ನು ಪಾತ್ರಧಾರಿಗಳೇ ಪೂರೈಸುವಂತೆ ತರಬೇತಿ ನೀಡುವುದು ವಿಶಿಷ್ಟವಾದ ಪ್ರಯೋಗ ಎಂದು ನಾಟಕವನ್ನು ನೋಡಿದ, ಪ್ರಖ್ಯಾತ ರಂಗಭೂಮಿ ನಟ ಮತ್ತು ರಂಗ ಶಿಕ್ಷಕರೂ ಆದ ಸಂತೋಷ್ ದಿಂಡಿಗನೂರುರವರು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ಮಕ್ಕಳು ಮತ್ತು ಕುಟುಂಬದೊಡನೆ ಬಹಳ ವರ್ಷಗಳ ನಂತರ ನಾಟಕ ನೋಡಿದೆ. ರಂಗಭೂಮಿಯ ಮೊದಲ ಪರಿಚಯವಾದ ನನ್ನ ಮಕ್ಕಳು ಮತ್ತು ನನ್ನ ಪತಿ, ಆಗಾಗ್ಗೆ ಇಂತಹ ನಾಟಕಗಳನ್ನು ನೋಡೋಣ ಎನ್ನುತ್ತಿದ್ದಾರೆ ಎಂದು ಐಟಿ ಉದ್ಯಮಿಯಾದ ಅಶ್ವಿನಿ ನಾಡಿಗರವರು ಹೇಳುತ್ತಾರೆ.

ಇದೇ ಶನಿವಾರ (ಫೆ.4 ಮತ್ತು ಫೆ.11ರ ಶನಿವಾರ) ಸಂಜೆ 6.30ಕ್ಕೆ ಹಾಡಿಯ ಬಾಗಿಲು ಮತ್ತೆ ತೆರೆಯುತ್ತದೆ. ರಂಗಾಯಣದ ವನರಂಗ ವೇದಿಕೆಯಲ್ಲಿ, ಜೇನುಕುರುಬರು ನಮಗೆಲ್ಲ ಕಾಯುತ್ತಿರುತ್ತಾರೆ. ಮೈಸೂರಿನ ಮಹಾರಾಜ ರಣಧೀರ ಕಂಠೀರವರ ಉದಾರ ಮನೋಭಾವ ಮತ್ತು ಮೇರು ವ್ಯಕ್ತಿತ್ವವನ್ನ ಬಿಂಬಿಸುವ ಈ ನಾಟಕವನ್ನು ಮೈಸೂರಿಗರೆಲ್ಲರೂ ಒಮ್ಮೆ ನೋಡಲೇಬೇಕು. ಬನ್ನಿ, ಸಿಗೋಣ!
Srividya.sahitya@gmail.com

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ