Mysore
17
few clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ರಾಜ್ಯ ಸರ್ಕಾರಕ್ಕೆ ಆರು ತಿಂಗಳು; ಜನರು ದೌರ್ಭಾಗ್ಯ ಎದುರಿಸುವಂತಾಗಿದೆ

• ಆರ್.ರಘು ಕೌಟಿಲ್ಯ

ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿಕೊಳ್ಳಲು ರಾಜ್ಯದಲ್ಲಿ ನೂತನ ಸರ್ಕಾರದ ಕೊಡುಗೆ ಏನಿದೆ? ಎಂದು ಪ್ರಶ್ನಿಸಿಕೊಂಡರೆ, ನೂತನ ಸರ್ಕಾರ ಬಂದಾಗಿನಿಂದ ಜನರು ಸಂಕಷ್ಟ ವನ್ನೇ ಎದುರಿಸಿದ್ದಾರೆ ವಿನಾ ಜನಜೀವನ ಸುಧಾರಿಸಿದ ಉದಾಹರಣೆಗಳಿಲ್ಲ ಎಂಬ ಉತ್ತರವಿದೆ.

ಕಳೆದ 6 ತಿಂಗಳುಗಳಿಂದ ಸರ್ಕಾರದ ಪ್ರತಿಯೊಂದು ಯೋಜನೆಯೂ ವೈಫಲ್ಯ ಕಂಡಿದೆ. ‘ಕೆಲಸ ಮಾಡಿದ್ದು ಒಂದಿಷ್ಟು, ಪ್ರಚಾರ ಮಾತ್ರ ಊರಷ್ಟು ‘ ಎನ್ನುವಂತೆ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರವನ್ನು ಮಾಡಿತೇ ವಿನಾ ಉತ್ಪನ್ನ ಆಧಾರಿತ ಅಭಿವೃದ್ಧಿಯನ್ನಾಗಲಿ ಅಥವಾ ಜನರಿಗೆ, ಯುವ ಸಮೂಹಕ್ಕೆ ಬದುಕು ಕಟ್ಟಿಕೊಡುವ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ.
ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬರದ ಛಾಯೆ ಆವರಿಸಿತ್ತು. ಮುಂಗಾರು ಅಭಾವ ತಲೆದೋರಿತ್ತು. ಇರುವ ಕಾವೇರಿ ನೀರು ನಮಗೆ ಸಾಕಾಗುತ್ತಾ ಎಂದು ಯೋಚಿಸುವ ಬೆನ್ನಲ್ಲೇ ಸರ್ಕಾರ ಮರು ಮಾತಾಡದೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ರಾಜ್ಯದ ರೈತ ರನ್ನು ಸಂಕಷ್ಟಕ್ಕೆ ಸಿಲುಕಿಸಿ ಕೃಷಿ ಚಟುವಟಿಕೆ ಕುಂಠಿತವಾಗುವಂತೆ ಮಾಡಿತು. ಕಾವೇರಿ ವಿಚಾರವಾಗಿ ನಡೆದ ರೈತ ಚಳವಳಿಗಳನ್ನೂ ಹತ್ತಿಕ್ಕಿ ರೈತರನ್ನು ಜೈಲಿಗಟ್ಟಿದ ರೈತ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ.

ಕಳೆದ 6 ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ನೆಲಕಚ್ಚಿದೆ. ಸಿಎಂ ತವರು ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ಸ್ವತಃ ಪಕ್ಷದ ಸಚಿವ ಪ್ರಿಯಾಂಕ್ ಖರ್ಗೆಯವರೇ ಹೇಳಿಕೊಂಡಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆ ಗ್ಯಾರಂಟಿ ಯೋಜನೆಗಳ ಜಾರಿಗೆ ಯಾವ ದೂರದೃಷ್ಟಿಯೂ ಇಲ್ಲದೆ ಜಾರಿಗೊಳಿಸಿ ಸಾಕಷ್ಟು ತೊಂದರೆಯನ್ನೇ ಸೃಷ್ಟಿಸಿದೆ.

‘ಶಕ್ತಿ’ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಸರ್ಕಾರ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡಿದೆ. ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಮತ್ತೊಂದೆಡೆ ವಿದ್ಯುತ್ ಬಿಲ್ ವಿಪರೀತ ಏರಿಕೆ ಮಾಡಿದೆ. ಅಲ್ಲದೆ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಮಹಿಳೆಯರಿಗೆ ಕೇವಲ ಒಂದು ತಿಂಗಳ ಕಂತು ಹಣ ಮಾತ್ರ ಬಂದಿದೆ. ನಂತರ ಅದೂ ಇಲ್ಲ. ಇನ್ನು ವಿದ್ಯಾವಂತ ನಿರುದ್ಯೋಗಿಗಳಿಗೆ ನೀಡಬೇಕಿದ್ದ ಯುವನಿಧಿ ಯೋಜನೆ ಸದ್ದಿಲ್ಲದಂತಾಗಿದೆ. ಒಟ್ಟಾರೆ ಈ ಉಚಿತ ಭಾಗ್ಯಗಳಿಂದ ಜನರು ಪರೋಕ್ಷವಾಗಿ ದೌರ್ಭಾಗ್ಯ ಎದುರಿಸುವಂತಾಗಿದೆ.

ಸರ್ಕಾರಕ್ಕೆ ಮಹಿಳಾ ಸಬಲೀಕರಣ ಮಾಡುವ ಉದ್ದೇಶ ಇದ್ದಿದ್ದರೆ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡಬಹುದಿತ್ತಲ್ಲವೇ? ಫಸಲ್ ಬಿಮಾ ಯೋಜನೆಯಡಿ ರೈತರಿಗೆ ನರೇಂದ್ರ ಮೋದಿ ಸರ್ಕಾರ ನೀಡುತ್ತಿದ್ದ 6,000 ರೂ.ಗಳಿಗೆ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ 4,000 ರೂ. ಸೇರಿಸಿ 10,000 ರೂ. ನೀಡುತ್ತಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ಸರ್ಕಾರದ 4,000 ರೂ.ಗಳನ್ನು ಕಡಿತಗೊಳಿಸಿದೆ.

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿ ಏನು? ಅದರಲ್ಲಿರುವ ಅಂಶಗಳೇನು ಎಂಬುದನ್ನು ಚರ್ಚಿಸದೆಯೇ ಅದನ್ನು ಹಿಂಪಡೆದಿದೆ. ಮಕ್ಕಳಿಗೆ ಬದುಕಲು, ವೃತ್ತಿ ಮಾರ್ಗಗಳನ್ನು ತೋರಿಸುವ ವೈಜ್ಞಾನಿಕ ಶಿಕ್ಷಣ ಪದ್ಧತಿಯನ್ನು ನಿಲ್ಲಿಸಿ ಬೇಡದ ವಿಚಾರಗಳನ್ನು ಮಕ್ಕಳ ತಲೆಗೆ ತುಂಬುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.
(ಲೇಖಕರು, ರಾಜ್ಯ ಬಿಜೆಪಿ ಮುಖಂಡರು)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!