Mysore
17
overcast clouds

Social Media

ಗುರುವಾರ, 08 ಜನವರಿ 2026
Light
Dark

ಇಂದು ಅಲ್ಲಿಗೆ ಹೋದರೆ ತೋಪು ಬಿಕೋ ಎನ್ನುತ್ತಿತ್ತು

• ಮಧುಕರ ಮಳವಳ್ಳಿ

ನಮ್ಮೂರು ಮಳವಳ್ಳಿಯಿಂದ ಸುಮಾರು 4 ರಿಂದ 5 ಮೈಲಿ ಇರುವ ಮಾರೇಹಳ್ಳಿ ಲಕ್ಷ್ಮೀ ನರಸಿಂಹ ದೇವಸ್ಥಾನದ ತೋಪಿಗೆ ಹೋಗಿದ್ದೆ.

ನನ್ನ ಬಾಲ್ಯದಲ್ಲಿ ಮದುವೆಯ ಸುಗ್ಗಿ ಅಂತ ಮಾರ್ಚಿನಿಂದ ಜೂನ್‌ವರೆಗೆ ಕರೆಯುತ್ತಿದ್ದರು. ಆ ಹಿಪ್ಪೆಮರಗಳ ನೆರಳಿನಲ್ಲಿ ಅದೆಷ್ಟು ಗಂಡು-ಹೆಣ್ಣು ದಂಪತಿಗಳಾಗಿದ್ದಾರೆ. ಹಿಂದೆ ಈಗಿನಂತೆ ಮದುವೆಗೆ ಛತ್ರಗಳು, ಕಲ್ಯಾಣಮಂಟಪಗಳು ಇರಲಿಲ್ಲ. ದಲಿತ ವರ್ಗದವರಿಗೆ ಅದು ವರವಾಗಿತ್ತು. ಮಕ್ಕಳಾದ ನಾವು ಶನಿವಾರ, ಭಾನುವಾರ ಮತ್ತು ಬೇರೆ ದಿನಗಳಲ್ಲಿ ಕದ್ದು ಅಲ್ಲಿಗೆ ಹೋಗುತ್ತಿದ್ದೆವು. ಕಾರಣ ಮದುವೆಯ ಊಟ. ವಿಶೇಷವಾಗಿ ಬೂಂದಿ, ರವೆ ಪಾಯಸ ಮತ್ತು ಶಾವಿಗೆ ಪಾಯಸ, ಯಾರಾದರೂ ಲಡ್ಡು ಮಾಡಿದ್ದರೆ, ಅದೇ ನಮ್ಮ ಮೊದಲ ಆದಕ್ಕೆ ಆಗಿತ್ತು… ಪಲಾವ್ ಮಾಡಿರುವ ಮದುವೆಯಲ್ಲಿ ನಮ್ಮ ಕೊನೆಯ ಊಟವೆಂದು ಫಿಕ್ಸ್ ಮಾಡುತ್ತಿದ್ದವು. ನಮ್ಮನ್ನು ಗಮನಿಸಿ, ನಮ್ಮ ಬಟ್ಟೆಗಳನ್ನು ನೋಡಿ, ಯಾವ ಜಾತಿ ಅಂತ ಕೇಳಿ, ನಾವು ಥಟ್ ಅಂತ ನಮ್ಮ ಜಾತಿ ಹೇಳಿದರೆ, ಅವರು ‘ಈಗ ಎದ್ದು ಹೋಗಿ ಆಮೇಲೆ ಬನ್ನಿ’ ಎನ್ನುವಾಗ ಆ ಪಲಾವ್ ಮೇಲೆಯೇ ನಮ್ಮ ಕಣ್ಣು. ಇದರ ನಡುವೆ ನಮ್ಮ ಕೇರಿಯ ಮದುವೆ ಆದರೆ ಮಜಾನೇ ಬೇರೆ. ಮಕ್ಕಳಾದ ನಮಗೆ ಆ ಪೆಟ್ರೋಮ್ಯಾಕ್ಸ್ ಬೆಳಕು ಅಚ್ಚರಿ ಉಂಟು ಮಾಡ್ತಾ ಇತ್ತು. ಆ ಹಿಪ್ಪೆಮರಗಳು ಸುಂದರತೆ ಮತ್ತು ಭಯ ಉಂಟುಮಾಡಿದರೆ, ಬ್ಯಾಟರಿಯನ್ನು ಬಳಸಿ ಹಾಕುತ್ತಿದ್ದ ಮೈಕ್‌ಸೆಟ್‌ನ ಹಾಡುಗಳು ನಮ್ಮನ್ನು ಪುಳಕಗೊಳಿಸುತ್ತಿದ್ದವು.

ಹಾಗೆ ಮುಂಜಾನೆ ಹೊತ್ತಿಗೆ ಸುತ್ತ ಮುತ್ತಲಿನ ಹಳ್ಳಿಯ ಜನರು ಎತ್ತಿನಗಾಡಿಯಲ್ಲಿ ಬಂದು ತಮಗೆ ಬೇಕಾದ ಜಾಗ ಗುರುತಿಸಿಕೊಂಡು, ಅಡುಗೆ ಶುರು ಮಾಡುತ್ತಿದ್ದರು. ಮತ್ತೆ ನಾವು ಗೆಳೆಯರು ಅವತ್ತಿನ ಮದುವೆಗಳನ್ನು ಲೆಕ್ಕಹಾಕಿ, ಸಂಜೆಗೆ ಆ ಒಲೆಗಳ ಇದ್ದಿಲು ನಮಗೆ ಎಂದು ಭಾಗಮಾಡಿಕೊಳ್ಳತ್ತಿದ್ದೆವು. ಎಲ್ಲ ಮುಗಿದು ಹೊರಟ ಮೇಲೆ ಆ ಕೆಂಡಗಳಿಗೆ, ಮಣ್ಣುಹಾಕಿ ಕೆಂಡ ಆರಿದ ನಂತರ ಇದ್ದಿಲನ್ನು ಚೀಲಗಳಲ್ಲಿ ತುಂಬಿಕೊಂಡು ಮಾಮೂಲಿ ಸಾಬರಿಗೆ ಮಾರಿ ಪಿಚ್ಚರ್ ನೋಡಲು ಹಣ ಹೊಂದಿಸಿಕೊಳ್ಳುತ್ತಿದ್ದೆವು. ಮತ್ತೆ, ಆ ಹಿಪ್ಪೆಬೀಜಗಳು ಕೂಡ ನಮ್ಮದೇ ಆಗಿತ್ತು.

ಮತ್ತೆ ಶ್ರಾವಣ ಶನಿವಾರಗಳಂದು ದೇವಸ್ಥಾನದಲ್ಲಿ ಕೊಡುವ ಪ್ರಸಾದದ ಕಡೆ ನಮ್ಮ ನಡೆ. ಆ ಪುಳಿಯೋಗರೆ, ಸಿಹಿ ಪೊಂಗಲ್, ಮೊಸರನ್ನದ ರುಚಿಯೇ ಬೇರೆ, ನವೆಂಬರ್ ಕಾಲದ ಕಾರ್ತಿಕ ಹುಣ್ಣಿಮೆಯಲ್ಲಿ ವಾರದಲ್ಲಿ ಒಂದೋ ಎರಡೋ ಮದುವೆಗಳು ಆಗುತ್ತಿದ್ದವು. ಹಿಪ್ಪೆ ಬೀಜಗಳನ್ನು ಆಯ್ದುಕೊಳ್ಳಲು ಹೋಗುತ್ತಿದ್ದ ನಾನು, ಗೆಳೆಯರಿಗೆ ವಿಷಯ ತಿಳಿಸಿ ಶಾಲೆಗೆ ಚಕ್ಕರ್ ಹಾಕಿ ಅಲ್ಲಿ ಊಟಕ್ಕೆ ಹಾಜರಾಗುತ್ತಿದ್ದೆವು. ಹಾಗೆಯೇ ಈ ತೋಪಿನಲ್ಲಿ ನಡೆಯುವ ಮತ್ತೊಂದು ವಿಶೇಷವೆಂದರೆ ಜೂನ್-ಜುಲೈ ತಿಂಗಳಿನಲ್ಲಿ ಜಾತ್ರೆ. ಇಡೀ ಜಾತ್ರೆಯ ಜನ ಒಟ್ಟಿಗೆ ಅ ಹಿಪ್ಪೆ ತೋಪಿನಲ್ಲಿ ಕುಳಿತು ಊಟ ಮಾಡುವುದೇ ಚಂದವಾಗಿತ್ತು. ಹೊಸ ಮದುವೆಯ ಜೋಡಿಗಳ ತಿರುಗಾಟ, ಮುಂದಿನ ಬಾರಿ ಮದುವೆ ಆಗಲು ಹವಣಿಸುತ್ತಿರುವ ಗಂಡು-ಹೆಣ್ಣುಗಳ ಕಳ್ಳ ಕಣೋಟಗಳು, ಮಕ್ಕಳು ಊಟ ಮುಗಿಸಿ ತಮಗೆ ಬೇಕಾದ ಆಟದ ಸಾಮಾನು ಖರೀದಿಗೆ ಕಾಯುವುದು ನಡೆದಿರುತ್ತಿತ್ತು.

ಆದರೆ ಆ ತೋಪು ಈಗ ಬದಲಾಗಿದೆ. ಸರ್ಕಾರದ ರೀತಿ-ನೀತಿಗಳಿಂದ ಈ ದೇವಸ್ಥಾನ ಪುರಾತತ್ವ ಇಲಾಖೆ ಸೇರಿ ಆ ತೋಪಿನಲ್ಲಿ ಯಾವುದೇ ಮದುವೆಗಳು ನಡೆಯುತ್ತಿಲ್ಲ. ಜಾತ್ರೆ ಕೂಡ ಆಕರ್ಷಣೆ ಕಳೆದುಕೊಂಡಿದೆ. ಆ ತೋಪಿನ ಸುತ್ತಲೂ ಕಬ್ಬಿಣದ ಬೇಲಿ ಹಾಕಲಾಗಿದೆ.
madhukaramalavalli@gmail.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!