Mysore
23
clear sky

Social Media

ಗುರುವಾರ, 16 ಏಪ್ರಿಲ 2026
Light
Dark

ಕಾಡು ಪ್ರಾಣಿಗಳ ಹಾವಳಿಗೆ ಇಲ್ಲೊಂದು ಪರ್ಯಾಯ ಬೆಳೆ

ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರವಾಗಿ ಬೆಳೆಹಾನಿ, ಪ್ರಾಣಹಾನಿಯನ್ನು ಅನುಭವಿಸುತ್ತಲೇ ಬಂದಿರುವ ಕಾಡಂಚಿನ ಗ್ರಾಮಗಳ ರೈತರು ಇದೀಗ ಪರ್ಯಾಯ ಬೆಳೆಗಳತ್ತ ದೃಷ್ಟಿ ಹಾಯಿಸಿದ್ದು, ಕಾಡುಪ್ರಾಣಿಗಳಿಂದ ಪಾರಾಗುವ ಆಶಾಭಾವನೆ ಮೂಡಿದೆ.

ಕಾಡಂಚಿನ ರೈತರು ಈಗ ‘ಚಿಯಾ’ ಎಂಬ ದಕ್ಷಿಣ ಮೆಕ್ಸಿಕೋ ಮೂಲದ ಬೆಳೆ ಬೆಳೆಯುವತ್ತ ಗಮನಹರಿಸಿ ದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳು, ಚಾಮರಾಜನಗರ ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಮಿತಿಮೀರಿದ ಕಾಡಾನೆ ಹಾಗೂ ಕಾಗ ಹಂದಿಗಳು ಜಮೀನಿಗೆ ನುಗ್ಗಿ ಜೋಳ, ರಾಗಿ, ಬಾಳೆ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ವಾರ್ಷಿಕ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಬೇಸತ್ತ ಅನ್ನದಾತರು ಪರ್ಯಾಯ ಬೆಳೆಗಳತ್ತ ಗಮನ ಹರಿಸುತ್ತಿದ್ದಾರೆ. ಮೈಸೂರಿನಲ್ಲಿರುವ ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ ಟಿಆ‌ರ್ಐ) ಅಧಿಕಾರಿಗಳು ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಚಿಯಾ ಬೆಳೆಗೆ ಉತ್ತೇಜನ ನೀಡಿದ್ದರು. ಅಲ್ಲಿ ಯೋಜನೆ ಸಫಲತೆ ಕಂಡ ಬಳಿಕ ಚಾಮರಾಜನಗರದ ರೈತರೂ ಮಾಹಿತಿ ಪಡೆದು ‘ಚಿಯಾ’ ಬೆಳೆಯತ್ತ ಮುಖ ಮಾಡಿದ್ದಾರೆ. ‘ಚಿಯಾ’ ಎಳ್ಳು ಮಾದರಿಯಲ್ಲಿರುವುದರಿಂದ ಕಾಡು ಪ್ರಾಣಿಗಳು ಇದನ್ನು ತಿನ್ನಲು ಬರುವುದಿಲ್ಲ. ಹೀಗಾಗಿ ಅವುಗಳಿಂದ ಈ ಬೆಳೆಗೆ ಯಾವುದೇ ಹಾನಿಯಾಗುವುದಿಲ್ಲ.

ಎಲ್ಲೆಲ್ಲಿ ಬೆಳೆದಿದ್ದಾರೆ?

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ಹುಣಸೂರು, ನಂಜನಗೂಡು ತಾಲ್ಲೂಕುಗಳ ಕಾಡಂಚಿನ ಗ್ರಾಮಗಳು, ಚಾಮರಾಜನಗರದ ಕಾಡಂಚಿನ ಗ್ರಾಮಗಳಾದ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಪಡಗ (ರಂಗಸಂದ್ರ), ದೊಡ್ಡ ಮೂಡಳ್ಳಿ, ಚಿಕ್ಕ ಮೂಡಳ್ಳಿ, ಕೋಳಿಪಾಳ್ಯ, ವೀರಯ್ಯನ ಪುರ, ಮೂಕನ ಪಾಳ್ಯ, ಅಟ್ಟುಗೂಳಿಪುರ * ಅಖಂ ವ್ಯಾಪ್ತಿಯ ಕುಳ್ಳೂರು ಸೇರಿದಂತೆ ಸುಮಾರು 20 ರಿಂದ 25 ಹೆಕ್ಟೇರ್ ಪ್ರದೇಶದಲ್ಲಿ ರೈತರು ‘ಚಿಯಾ’ ಬೇಸಾಯ ಮಾಡುತ್ತಿದ್ದಾರೆ.

ಕಡಿಮೆ ಖರ್ಚು, ಆದಾಯ ಹೆಚ್ಚು: ‘ಚಿಯಾ’ ಬೆಳೆಗೆ ಕಡಿಮೆ ವೆಚ್ಚ ತಗುಲುತ್ತಿದ್ದು, ರೈತರಿಗೆ ಹೊರೆಯಾಗುವುದಿಲ್ಲ. ಅಲ್ಲದೇ ಇದರಿಂದ ಆದಾಯವೂ ಹೆಚ್ಚಾಗಿದೆ. ಔಷಧಿ ಗುಣಲಕ್ಷಣ ಗಳು ಹಾಗೂ ಪೌಷ್ಟಿಕಾಂಶ ಹೊಂದಿರುವ ‘ಚಿಯಾ’ ಬೆಳೆಯನ್ನು ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿ ಯಿಂದ ಬೆಳೆಯಬಹುದಾಗಿದೆ. ಜಿಲ್ಲೆಯ ಯುವ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಪಡೆದು ಬೆಳೆ ಬೆಳೆಯಲು ಮುಂದಾಗಿದ್ದಾರೆ. ಅತಿಯಾದ ನೀರಿನ ಅವಲಂಬನೆ ಇಲ್ಲದ ಬೆಳೆಯುವ ಬೆಳೆ ಇದಾಗಿದ್ದು, ವೈಜ್ಞಾನಿಕವಾಗಿ ‘ಚಿಯಾ’ ಎಂದು ಕರೆಸಿಕೊಳ್ಳುವ ಈ ಬೆಳೆಗೆ ಸ್ಥಳೀಯರು ‘ಗೇಲ್’ ಎಂದು ಹೆಸರಿಟ್ಟಿದ್ದಾರೆ.

ಚಿಯಾ ಗುಣಲಕ್ಷಣಗಳು: ಚಿಯಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಬೇಡಿಕೆ ಇರುವ ಸಿರಿಧಾನ್ಯವಾಗಿದ್ದು, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. ಒಂದು ಎಕರೆ ಪ್ರದೇಶಕ್ಕೆ 3 ರಿಂದ 4 ಸಾವಿರ ರೂ. ವೆಚ್ಚ ತಗುಲಲಿದೆ. ಪೈರು ಬೆಳೆಸಿ ನಾಟಿ ಅಥವಾ ಬೀಜವನ್ನು ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದರೆ ಸಾಕು, ದಟ್ಟ ಹಸಿರು ಬಣ್ಣದ ಗಿಡದಲ್ಲಿ ಬೀಜಗಳಾಗುತ್ತವೆ. ನಂತರ ಬೀಜಗಳನ್ನು ಬೇರ್ಪಡಿಸಿ ಮಾರಾಟ ಮಾಡಲಾಗುತ್ತದೆ. ನಾಟಿ ಮಾಡಿದ ನಂತರ 90ರಿಂದ 100 ದಿನಗಳಲ್ಲಿ ಕೊಯ್ಲಿಗೆ ಬೆಳೆ ಸಿದ್ಧವಾಗುತ್ತದೆ. ಎಕರೆಗೆ 3 ರಿಂದ 4 ಕ್ವಿಂಟಾಲ್ ಇಳುವರಿ ಸಿಗಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 10ರಿಂದ 35 ಸಾವಿರ ರೂ. ವರೆಗೂ ಮಾರಾಟವಾಗುತ್ತದೆ. ಜಿಲ್ಲೆಯಲ್ಲಿ ಅಂದಾಜು 200 ಎಕರೆ ವ್ಯಾಪ್ತಿಯಲ್ಲಿ ‘ಚಿಯಾ’ ಬೆಳೆ ಬೆಳೆಯಲಾಗಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿ ಹೆಚ್ಚಾಗುವ ಸಾಧ್ಯತೆಯಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!