Mysore
20
overcast clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಯೇಸು ಜನನ: ವಿಶ್ವದೆಲ್ಲೆಡೆ ಹಬ್ಬ

• ರೆವ.ಜಾನ್ ಬಾಬು, ಸಿಎಸ್‌ಐ ಕೈಸ್ಟ್ ಚರ್ಚ್‌, ಅರಸೀಕೆರೆ.

ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬರೂ ನಾಶವಾಗದೆ ಎಲ್ಲರೂ ನಿತ್ಯ ಜೀವ ಪಡೆಯ ಬೇಕೆಂದು ಆತನನ್ನು ಕೊಟ್ಟನು.

ಯೋಹಾನ 3:16 ಕ್ರಿಸ್ತಜಯಂತಿ ಇಡೀ ಲೋಕದ ಮಾನವ ಕುಲದ ಪ್ರತಿಯೊಬ್ಬ ವ್ಯಕ್ತಿಗೂ ಹಬ್ಬವಾಗಿದೆ. ಸತ್ಯವೇದವು ‘ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಎಂದು ಹೇಳುತ್ತದೆ. ಇದರ ಅರ್ಥ ಯೇಸು ಕ್ರಿಸ್ತನು ಇಹಲೋಕದ ಪ್ರತಿ ಮಾನವರ ರಕ್ಷಣೆಗಾಗಿ ಈ ಲೋಕದಲ್ಲಿ ಜನಿಸಿದನು ಎಂಬುದಾಗಿದೆ.

ಯೇಸುಕ್ರಿಸ್ತನ ಜನನವನ್ನು ಈ ಲೋಕ ‘ಕ್ರಿಸ್‌ಮಸ್ ಅಥವಾ ‘ಕ್ರಿಸ್ತ ಜಯಂತಿ’ ಎಂಬುದಾಗಿ ಆಚರಿಸುತ್ತದೆ. ಈ ಹಬ್ಬ ಕೇವಲ ಕ್ರೈಸ್ತರಿಗಾಗಿ ಅಲ್ಲ, ಬದಲಾಗಿ ಮಾನವ ಕುಲದ ಪ್ರತಿಯೊಬ್ಬರಿಗಾಗಿಯೂ ಆಗಿರುತ್ತದೆ. ಯಾವುದೋ ನಿರ್ದಿಷ್ಟವಾದ ದೇಶಗಳಿಗಾಗಿ ಅಲ್ಲ, ಇಡೀ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಆಚರಣೆಯಾಗಿದೆ. ದೇವರು ತನ್ನ ಪ್ರೀತಿಯನ್ನು ರುಜುವಾತು ಮಾಡುವುದಕ್ಕಾಗಿ ಯೇಸು ಕ್ರಿಸ್ತನ ಜನನವಾಗಿದೆ.

ಆಕಾಶದಲ್ಲಿ ಹಕ್ಕಿಗಳು ಸಂತಸದಿಂದ ಹಾರಾಡುತ್ತವೆ, ನೀರಿನಲ್ಲಿ ಜಲಚರಗಳು ಖುಷಿಯಿಂದ ನಲಿಯುತ್ತವೆ. ಭೂಮಿಯ ಮೇಲಿರುವ ಪ್ರಾಣಿಗಳೂ ಕೂಡ ನೆಮ್ಮದಿಯಿಂದ ಇವೆ. ಆದರೆ ಮಾನವನು ಈ ಲೋಕದಲ್ಲಿ ಸಂಪೂರ್ಣವಾಗಿ ಸಂತೋಷವಾಗಿರುವುದು ಕಂಡು ಬರುತ್ತಿಲ್ಲ. ಏಕೆಂದರೆ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. (ರೋಮಾಪುರ 3;23) ಮಾನವನು ದೇವರ ಮಹಿಮೆಯನ್ನು, ಸಂಬಂಧವನ್ನು, ಅನ್ನೋನ್ಯತೆಯನ್ನು ಪಾಪದ ನಿಮಿತ್ತ ಕಳೆದುಕೊಂಡಿದ್ದಾನೆ.

ಈ ದೈವೀಕ ಸಂಬಂಧವನ್ನು ಪುನಃ ಪಡೆಯಲು ಅನೇಕ ಮಾರ್ಗಗಳನ್ನು ಮಾನವನು ಹುಡುಕುತ್ತಿದ್ದಾನೆ. ಉದಾಹರಣೆಗೆ ಜ್ಞಾನ ಮಾರ್ಗ, ಧ್ಯಾನ ಮಾರ್ಗ, ತತ್ವ ಮಾರ್ಗ, ಧರ್ಮ ಮಾರ್ಗ ಮುಂತಾದವು ಯಾವ ಪ್ರಯತ್ನಗಳೂ ಕೂಡ ದೇವರೊಂದಿಗೆ ಕಳೆದುಕೊಂಡ ಸಂಬಂಧವನ್ನು ಮರಳಿ ಪಡೆಯಲು ಸಹಾಯ ಮಾಡುತ್ತಿಲ್ಲ. ಅದಕ್ಕಾಗಿ ದೇವರು ತಾನೇ ಯೇಸು ಕ್ರಿಸ್ತನ ಮೂಲಕ ಕೃಪೆಯ ಮಾರ್ಗವನ್ನು ತೋರಿದನು.

ಯೇಸು ಕ್ರಿಸ್ತನ ನಿಯೋಗ ‘ರಕ್ತಧಾರೆ ಇಲ್ಲದೆ ಪಾಪ ಪರಿಹಾರವಿಲ್ಲ’ ಎಂದು ಸತ್ಯವೇದ ತಿಳಿಸಿದೆ. ದೇವರು ತನ್ನ ಒಬ್ಬನೇ ಮಗನಾದ ಯೇಸು ಕ್ರಿಸ್ತನನ್ನು ಲೋಕಕ್ಕೆ ಕಳುಹಿಸಿಕೊಟ್ಟನು. ಯೇಸು ಜನಿಸಿದ್ದು ಮಾನವರನ್ನು ಪಾಪದಿಂದ ಬಿಡಿಸಿ ದೇವರ ರಾಜ್ಯಕ್ಕೆ ಮತ್ತೆ ಸೇರಿಸುವ ಉದ್ದೇಶದಿಂದ ಇದೇ ಕ್ರಿಸ್ತನ ನಿಯೋಗ ಆಗಿದೆ.

‘ಪಾಪವು ಕೊಡುವ ಸಂಬಳ ಮರಣ’ ಮನುಷ್ಯನನ್ನು ಇಂಥ ಮರಣದ, ನರಕದ, ಪಾಲಾಗುವುದರಿಂದ ತಪ್ಪಿಸಲು ಯೇಸು ಕ್ರಿಸ್ತನು ಜನಿಸಿ ಈ ಲೋಕದಲ್ಲಿ ಪರಲೋಕದ ಮಾರ್ಗವನ್ನು ತಿಳಿಸಿ ಮನುಷ್ಯನ ಪಾಪಗಳನ್ನು ತಾನು ಹೊತ್ತುಕೊಂಡು ಶಿಲುಬೆಯ ಮೇಲೆ ತನ್ನ ಸ್ವಂತ ರಕ್ತ ಸುರಿಸಿ ಪ್ರಾಣ ಕೊಟ್ಟು ಆತನಿಗೆ ಪಾಪದಿಂದ ಬಿಡುಗಡೆ ನೀಡಿದ್ದಾನೆ.

ಇದಿಷ್ಟೇ ಅಲ್ಲ ಕ್ರಿಸ್‌ಮಸ್ ಹಬ್ಬವು ದೇವರ ಪ್ರೀತಿ, ಕೃಪೆಯ ವಿಷಯವನ್ನು ತಿಳಿಸುತ್ತದೆ. ಪಾಪದ ನಿಮಿತ್ತ ಮಾನವನು ಕಳಕೊಂಡ ಸಮಾಧಾನ, ಸಂತೋಷ, ದೈವೀಕ ಸಂಬಂಧ, ನಿತ್ಯ ಜೀವವನ್ನು ಯೇಸು ಸ್ವಾಮಿಯ ಮೂಲಕ ನೀಡಿದ್ದಾನೆ.

ಕ್ರಿಸ್ತ ಜಯಂತಿ ಇದೊಂದು ಆಚರಣೆಯಲ್ಲ; ಬದಲಾಗಿ ದೇವರ ಪ್ರೀತಿಯ ಅನುಭವವಾಗಿದೆ. ‘ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು, ಯೇಸು ವನ್ನು ನಂಬಿ, ಪಾಪವನ್ನು ಅರಿಕೆ ಮಾಡಿದರೆ, ನಂಬಿಗಸ್ಥನು ನೀತಿವಂತನೂ ಆದ ಯೇಸು ಕ್ರಿಸ್ತನು ನಮ್ಮನ್ನು ಸಕಲ ಅನೀತಿಯಿಂದ ಪಾರುಮಾಡಿ, ಶುದ್ದಿ ಮಾಡುತ್ತಾನೆ. ಶುದ್ಧ ಮನಸ್ಸಿನಿಂದ ಯಥಾರ್ಥವಾದ ಪ್ರಾರ್ಥನೆಯನ್ನು ಮಾಡುವುದಾದರೆ, ಮಾನವರ ಜೀವನದಲ್ಲಿ ಯೇಸು ಸ್ವಾಮಿ ಬಂದು ಅವರನ್ನು ಪೂರ್ವಸ್ಥಿತಿಯಿಂದ ಬಿಡಿಸಿ ಅವರನ್ನು ನೂತನ ಸೃಷ್ಟಿಯಾಗಿ ಮಾಡುತ್ತಾನೆ.

ಸರ್ವಶಕ್ತನಾದ ದೇವರು ಯೇಸು ಸ್ವಾಮಿಯ ಮೂಲಕ ಮಾನವರಿಗೆ ತೆರೆದಿಟ್ಟಿರುವ ದೇವರ ಪ್ರೀತಿ, ದೇವರ ಕ್ಷಮೆ ಮತ್ತು ದೇವರ ಕೃಪೆಯನ್ನು ಇಂದೇ ಅನುಭವಿಸಿ ಆತನು ಸರ್ವೋತ್ತಮನೆಂದು ತಿಳಿದು ಕೊಳ್ಳುವ ಅವಕಾಶವಿದೆ. ಇದೇ ಸುಪ್ರಸನ್ನತೆಯ ಕಾಲ ಇದೇ ರಕ್ಷಣೆಯ ದಿನ, ಯಾವಾಗ ಯೇಸು ಕ್ರಿಸ್ತನು ಪ್ರತಿಯೊಬ್ಬರ ಮನಸ್ಸಿನಲ್ಲಿ ಜನಿಸುತ್ತಾನೋ ಅದು ಆತ್ಮೀಕ ಕ್ರಿಸ್‌ಮಸ್‌ ಆಗುತ್ತದೆ. ಇಂಥ ಅನುಭವವು ಪ್ರತಿಯೊಬ್ಬರಿಗೂ ಆಗಲಿ ಎಂದು ಪ್ರಾರ್ಥಿಸೋಣ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!