Mysore
21
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ತೇಜಸ್ವಿ ಸೂರ್ಯ ಗಾಂಪರ ಗುಂಪಿನ ಎಳೆಯ ಸದಸ್ಯ : ಕಾಂಗ್ರೆಸ್

ಬೆಂಗಳೂರು : ಗಾಂಪರ ಗುಂಪಿನ ಎಳೆಯ ಸದಸ್ಯ ತೇಜಸ್ವಿ ಸೂರ್ಯ ಅವರೇ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ? ಅಭಿವೃದ್ಧಿ ಎನ್ನುವುದು ಜನ ಕೇಂದ್ರಿತವಾಗಿರಬೇಕಲ್ಲವೇ?, ಬಡ ಜನರ ಬದುಕು ಹಸನಾಗುವುದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳಲಾಗದಿರುವುದೇಕೆ? ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗಾಗಿ (ಮುಸ್ಲಿಮ್, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ) ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಇತ್ತೀಚೆಗೆ ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿಗಾಗಿ 3 ಲಕ್ಷ ರೂ. ಸಹಾಯಧನ ಸೌಲಭ್ಯ ನೀಡುವ ಯೋಜನೆಯನ್ನು ಪ್ರಕಟಿಸಿತ್ತು.

ಇದನ್ನು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದ ತೇಜಸ್ವಿ ಸೂರ್ಯ ಅವರು, ಇದು ಧರ್ಮಾಧಾರಿತ ಯೋಜನೆ ಎಂದು ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಗಾಂಪರ ಗುಂಪಿನ ಎಳೆಯ ಸದಸ್ಯ ತೇಜಸ್ವಿ ಸೂರ್ಯ ಅವರೇ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ? ಅಭಿವೃದ್ಧಿ ಎನ್ನುವುದು ಜನ ಕೇಂದ್ರಿತವಾಗಿರಬೇಕಲ್ಲವೇ?ಬಡ ಜನರ ಬದುಕು ಹಸನಾಗುವುದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳಲಾಗದಿರುವುದೇಕೆ? ಪ್ರಶ್ನಿಸಿದೆ.

ದಲಿತರ ಏಳಿಗೆಗೂ ಆಕ್ಷೇಪ, ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೂ ಆಕ್ಷೇಪ ಮಾಡುವ ನಿಮ್ಮ ಉದ್ದೇಶವಾದರೂ ಏನು?, ದೇವಾಲಯಗಳ ಅರ್ಚಕರ ತಸ್ತಿಕ್ ಹಣವನ್ನೂ ಏರಿಸಿದೆ ನಮ್ಮ ಸರಕಾರ, ಇದಕ್ಕೂ ನಿಮ್ಮ ಆಕ್ಷೇಪ ಇದೆಯೇ?, ಹಾಲಿನ ದರ ಏರಿಕೆಯ ಲಾಭ ರೈತರ ಕೈ ಸೇರುವುದು ಇಷ್ಟವಿಲ್ಲವೇ?, ವಿದ್ಯುತ್ ದರ ಏರಿಸಿದ್ದು ಹಿಂದಿನ ಬಿಜೆಪಿ ಸರಕಾರ ಎನ್ನುವುದು ತಿಳಿದಿಲ್ಲವೇ?

ಗ್ಯಾಸ್ ಬೆಲೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತಾಡುವುದಿಲ್ಲವೇಕೆ? ದುಬಾರಿ ಜಿಎಸ್ ಟಿ ಬಗ್ಗೆ ತುಟಿ ಬಿಚ್ಚುವುದಿಲ್ಲವೇಕೆ?, ಜನರ ಹಣವನ್ನು ಜನರಿಗೇ ಕೊಡುವ ಬಗ್ಗೆ ಇಷ್ಟೊಂದು ಅಸಹನೆ ತೋರುವ ಬಿಜೆಪಿಗರ ಪ್ರಕಾರ ಜನರ ಹಣವನ್ನು ಉದ್ಯಮಿಗಳ ಸಾಲಮನ್ನಾ ಮಾಡಲು ಬಳಸುವುದು ಅಭಿವೃದ್ಧಿಯೇ? ಎಂದು ಕಿಡಿಕಾರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!