Mysore
31
clear sky

Social Media

ಮಂಗಳವಾರ, 17 ಮಾರ್ಚ್ 2026
Light
Dark

ಸೂರ್ಯಗ್ರಹಣದಂದು ಸೂರ್ಯನತ್ತ ತ್ರಿವಳಿ ರಾಕೆಟ್‌ ಉಡಾವಣೆ

ನವದೆಹಲಿ : ಈ ಬಾರಿಯ ಸೂರ್ಯಗ್ರಹಣ ತುಸು ಹೆಚ್ಚೇ ಮಹತ್ವ ಹೊಂದಿದೆ. ಎಕೆಂದರೆ ಅಂದು ಅಂದರೆ ಅಕ್ಟೋಬರ್‌ 14 ರಂದು ಶನಿವಾರ ಅಮೆರಿಕದ ನಾಸಾ ಸಂಸ್ಥೆಯ ಖಗೋಳ ವಿಜ್ಞಾನಿಗಳು ಸೂರ್ಯನತ್ತ ತ್ರಿವಳಿ ರಾಕೆಟ್‌ಗಳನ್ನು ಹಾರಿಸಲಿದ್ದಾರೆ. ಇಲ್ಲಿ ಹೆಮ್ಮೆಯ ಸಂಗತಿಯೆಂದರೆ ಭಾರತೀಯ ಮೂಲದ ವಿಜ್ಞಾನಿ ಡಾ. ಆರೋಹ್ ಬರ್ಜತ್ಯಾ ಈ ಯೋಜನೆಯ ಸಾರಥ್ಯ ವಹಿಸಿದ್ದಾರೆ.

ಪ್ರಸ್ತುತ ಅವರು ಇಂಜಿನಿಯರಿಂಗ್ ಭೌತಶಾಸ್ತ್ರದ ಪ್ರಾಧ್ಯಾಪಕ ಮತ್ತು ಫ್ಲೋರಿಡಾದ ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾನಿಲಯದ ಬಾಹ್ಯಾಕಾಶ ಮತ್ತು ವಾತಾವರಣದ ಉಪಕರಣ ಪ್ರಯೋಗಾಲಯದ ನಿರ್ದೇಶಕರಾಗಿದ್ದಾರೆ. ಡಾ ಆರೋಹ್ ಬರ್ಜತ್ಯಾ ಅವರು ಬಹು-ಸಂಸ್ಥೆಗಳ ನಾಸಾ ರಾಕೆಟ್ ಮಿಷನ್ ಅನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ಅಯಾನುಗೋಳ ಎಂದೂ ಕರೆಯಲ್ಪಡುವ ನಮ್ಮ ಮೇಲಿನ ವಾತಾವರಣದ ಮೇಲೆ ಗ್ರಹಣಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ವಾರ್ಷಿಕ ಸೂರ್ಯಗ್ರಹಣದ ಸಮಯದಲ್ಲಿ ಈ ಮಹತ್ವದ ಯೋಜನೆ ಕೈಗೊಳ್ಳಲಾಗಿದೆ.

ಅಕ್ಟೋಬರ್ 14, 2023 ರಂದು ಘಟಿಸುವ ಗ್ರಹಣವು ವಾರ್ಷಿಕ ಸೂರ್ಯಗ್ರಹಣವಾಗಿದ್ದು, ಅದನ್ನು ಬೆಂಕಿಯ ಉಂಗುರ ಎಂದೂ ಕರೆಯುತ್ತಾರೆ. ಪ್ರಮುಖವಾಗಿ ಅಮರಿಕ, ಮೆಕ್ಸಿಕೊ ಮತ್ತು ದಕ್ಷಿಣ ಮತ್ತು ಮಧ್ಯ ಅಮೆರಿಕದ ಹಲವು ದೇಶಗಳಲ್ಲಿ ಗೋಚರಿಸುತ್ತದೆ.

ವಿಜ್ಞಾನಿ ಆರೋಹ್ ಬರ್ಜತ್ಯಾ ಅವರ ಈ ರಾಕೆಟ್ ಯೋಜನೆಯ ಪ್ರಧಾನ ವಿಷಯ ಎಕ್ಲಿಪ್ಸ್ ಪಾತ್ ಸುತ್ತಲ ವಾತಾವರಣದ ಪ್ರಕ್ಷುಬ್ಧತೆಗಳನ್ನು ಅಧ್ಯಯನ ಮಾಡುವುದಾಗಿದೆ. ಈ ಯೋಜನೆಯಲ್ಲಿ ಒಟ್ಟು ಮೂರು ರಾಕೆಟ್‌ಗಳನ್ನು ನ್ಯೂ ಮೆಕ್ಸಿಕೊದ ಲಾಸ್ ಕ್ರೂಸಸ್‌ನಲ್ಲಿರುವ ನಾಸಾದ ವೈಟ್ ಸ್ಯಾಂಡ್ಸ್ ಪರೀಕ್ಷಾ ಕೇಂದ್ರದಿಂದ ಕಳುಹಿಸಲಾಗುತ್ತದೆ. ಅದೇ ಕ್ಷಣದಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ, ಆಕರ್ಷಣೀಯ ಬೆಂಕಿಯ ಉಂಗುರ ನಿರ್ಮಾಣವಾಗುತ್ತದೆ. ಗ್ರಹಣದ ಸಮಯದಲ್ಲಿ ಮೇಲಿನ ವಾತಾವರಣವು ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿಶೇಷವಾಗಿ ಬೆಳಕಿನಲ್ಲಿ ಹಠಾತ್ ಕಡಿತವಾದ ಕ್ಷಣದಲ್ಲಿ ಏನೆಲ್ಲ ಮಾರ್ಪಾಡುಗಳು ಸಂಭವಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲಾಗುವುದು.

ಸೂರ್ಯಗ್ರಹಣ ಸಂಭವಿಸಿದಾಗ ಅದು ಭೂಮಿಯ ಮೇಲಿನ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುತ್ತದೆ. ಈ ಬದಲಾವಣೆಗಳು ಗಾಳಿಯಲ್ಲಿ ಮತ್ತು ನೆಲದ ಮೇಲೆ ರೇಡಿಯೊ ಸಂವಹನದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!