ಬೆಂಗಳೂರು : ರಾಜಕೀಯ ಸೇರಲು ಯಾವುದೇ ಕಾಲೇಜು ಇಲ್ಲ. ಪದವಿ ವ್ಯಾಸಾಂಗ ಮಗಿಯುತ್ತಿದ್ದಂತೆ ಒಂದು ವರ್ಷ ತರಬೇತಿ ನೀಡಬೇಕು. ಇದರಿಂದ ಯುವ ಸಮೂಹಕ್ಕೆ ರಾಜಕೀಯದ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
ನೂತನ ಶಾಸಕರಿಗೆ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ಯುಟಿ ಖಾದರ್ ಮಾತನಾಡುತ್ತಾ, ನನಗೂ ಮೊದಲು ಸದನದ ನಡುವಳಿಕೆ ಬಗ್ಗೆ ಗೊತ್ತಿರಲಿಲ್ಲ. ಈ ವೇಳೆ ಧೃವನಾರಯಣ ಅವರ ಬಳಿ ಕೇಳಿ ಕಲಿಯುತ್ತಿದ್ದೆ ಎಂದರು. ಮೊದಲ ಬಾರಿಗೆ ಶಾಸಕರಾಗಿರುವವರಿಗೆ ಪ್ರತಿಯೊಬ್ಬರ ನಡುವೆ ಸಹಕಾರ ಬೆಳೆಯಬೇಕು. ಆಗ ಮಾತ್ರ ಸದನದಲ್ಲಿ ಧೈರ್ಯದಿಂದ ಭಾಗವಹಿಸಲು ಸಾಧ್ಯ. ರಾಜಕೀಯದಲ್ಲಿ ಪ್ರತಿಕ್ರಿಯೆ ಹೆಚ್ಚಿರುತ್ತದೆ. ಈ ವೇಳೆ ತಾಳ್ಮೆ ಬಹಳ ಅಗತ್ಯ. ಸಿಕ್ಕ ಅವಕಾಶ ಉಪಯೋಗಿಸಿಕೊಂಡು, ಜನರ ಮನಸ್ಸಿನಲ್ಲಿ ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡಿ. ಶಾಸಕರ ಒಗ್ಗಟ್ಟು ರಾಜ್ಯದ ಶಕ್ತಿ. ಅಭಿಪ್ರಾಯ ಬೇಧದ ಹೊರತಾಗಿ, ಒಗ್ಗಟ್ಟು ಇರಬೇಕು. ಈ ಮೂಲಕ ಸಾಮರಸ್ಯ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.
ರಾಜಕೀಯದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಾಗ ಟೀಕೆ ಟಿಪ್ಪಣಿಗಳು ವ್ಯಕ್ತವಾಗುವುದು ಸಹಜ. ಇದು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು. ಸಿದ್ಧಾಂತ ಯಾವುದೇ ಇರಲಿ, ಎಲ್ಲರನ್ನೂ ಕೈಜೋಡಿಸುವಂತೆ ಮಾಡುವುದು ನನ್ನ ಕೆಲಸ ಎಂದು ಹೇಳುತ್ತಾ, ರವಿಶಂಕರ್ ಗುರೂಜಿ, ಗುರುರಾಜ ಕರ್ಜಗಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಗತಿಪರರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.





