Mysore
22
scattered clouds

Social Media

ಬುಧವಾರ, 01 ಏಪ್ರಿಲ 2026
Light
Dark

ಅಭಿ​ವೃದ್ಧಿ ಬಿಟ್ಟು ಹಿಂದೂ ಧರ್ಮ ವಿರೋ​ಧಿ​ಸುವ ಹೊಸ ಸರ್ಕಾ​ರ : ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಹೊಸ ಸರ್ಕಾರದ ಸಚಿವರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೇಳುವುದನ್ನು ಬಿಟ್ಟು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮೋಸದ ಕಾರ್ಡಿಗೆ ಗೆಲುವಾಗಿದೆಯೇ ಹೊರತು, ಕಾಂಗ್ರೆಸ್‌ ಪಕ್ಷಕ್ಕಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಸುವರ್ಣ ಸಹಕಾರಿ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯ​ಕ್ರ​ಮ​ದ​ಲ್ಲಿ ಮಾತನಾಡಿದ ಅವರು, 65 ವರ್ಷಗಳಿಂದ ಆ ಪಕ್ಷ ಜನರನ್ನು ವಂಚಿಸುವ ಮೂಲಕ ಆಡಳಿತ ನಡೆಸಿಕೊಂಡು ಬಂದಿದೆ. ಗ್ಯಾರಂಟಿ ಕಾರ್ಡ್‌ನ ಘೋಷಣೆಯಿಂದ ಕಾಂಗ್ರೆಸ್‌ನವರು ಹುಲಿ ಸವಾರಿ ಮಾಡುವಂತಾಗಿದೆ.

ಅವರ ಮುಖದಲ್ಲಿ ಗೆಲುವಿನ ನಗುವೇ ಕಾಣಿಸುತ್ತಿಲ್ಲ. ವಂಚನೆಯ ಗ್ಯಾರಂಟಿ ಕಾರ್ಡ್‌ನಿಂದ ನಮ್ಮ ಪಕ್ಷದ ಸುಮಾರು 50 ಸ್ಥಾನಗಳಿಗೆ ಸೋಲುಂಟಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಅದರ ಪ್ರಭಾವ ಮತದಾರರ ಮೇಲೆ ಪರಿಣಾಮವಾಗಿಲ್ಲ ಎಂದರು. ಸರ್ಕಾರ ರಚನೆಯಾಗಿ ಐದಾರು ದಿನಗಳು ಕಳೆದಿದ್ದು, ಹಿಂದಿನ ಸರ್ಕಾರದಲ್ಲಿ ಟೆಂಡರ್‌ ಆಗಿರುವುದಕ್ಕೆ ತಡೆ ನೀಡಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಟೆಂಡರ್‌ ಆಗಿರುವ ಸುಮಾರು .100 ಕೋಟಿಗಳ ಕಾಮಗಾರಿಗೆ ಹಿನ್ನಡೆ ಆಗುವ ಸಾಧ್ಯತೆಯಿದೆ ಎಂದರು. ಪಿಎಸ್‌ಐ ಹಗರಣ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕು.

ತಾಲೂಕಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಕಾಂಗ್ರೆಸ್‌ ಮುಖಂಡರ ಹೇಳಿಕೆಯನ್ನು ಖಂಡಿಸಿ, ಅಧಿಕಾರಿಗಳನ್ನು ಬ್ಲಾಕ್‌ ಮೈಲ್‌ ಮಾಡುವ ಯತ್ನ ಕೈಬಿಡಬೇಕು. ಇಲ್ಲಿಗೆ ನಾನು ಶಾಸಕನಾಗಿದ್ದೇನೆ. ಈ ಕ್ಷೇತ್ರದ ಜನತೆಯ ನಾಡಿಮಿಡಿತವನ್ನು ಅರಿತಿರುವ ನಾನು ಈ ಕ್ಷೇತ್ರಕ್ಕೆ ಈ ಮೊದಲು ಯಾರೂ ಮಾಡಿರದಷ್ಟುಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ರಾಜಕೀಯವನ್ನು ವ್ರತವಾಗಿ ಸ್ವೀಕರಿಸಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಕರ್ತರ ಶ್ರಮದಿಂದ ದಾಖಲೆಯ 5ನೇ ಬಾರಿಗೆ ಗೆಲುವು ಸಾಧಿಸಿದ್ದೇವೆ. ಪ್ರಾಮಾಣಿಕ ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್‌ನವರು ಗೆದ್ದೇ ಗೆಲ್ತೀವಿ ಎಂಬ ಭ್ರಮೆಯಲ್ಲಿದ್ದರು ಎಂದೂ ಟೀಕಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!