Mysore
26
haze

Social Media

ಶನಿವಾರ, 28 ಮಾರ್ಚ್ 2026
Light
Dark

ಮಳೆಗಾಗಿ ಕೆಆರ್‌ಎಸ್‌ನಲ್ಲಿ ವಿಶೇಷ ಪೂಜೆ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ವರಣ ಕೃಪೆ ತೋರದ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರ ಮನವಿ ಮೇರೆಗೆ ವೈದಿಕ ಡಾ.ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ ಮಂಗಳವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮ ನಡೆಸಲಾಯಿತು.

ಮಳೆಗಾಗಿ ಪ್ರಾರ್ಥಿಸಿ ಕೆಆರ್‌ಎಸ್ ಡ್ಯಾಂನ ಕಾವೇರಿ ಮಾತೆ ಪ್ರತಿಮೆ ಮುಂಭಾಗ 12 ಮಂದಿ ವೈದಿಕ ತಂಡದಿಂದ ಪರ್ಜನ್ಯ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿಲ್ಲ. ಇದರಿಂದಾಗಿ ಬೆಳೆ ಬೆಳೆದಿರುವ ರೈತರಲ್ಲಿ ತೀವ್ರ ಆತಂಕ ಮೂಡಿದೆ. ಇದರಿಂದಾಗಿ ಪರ್ಜನ್ಯ ಹೋಮ ಸೇರಿದಂತೆ ವಿವಿಧ ಬಗೆಯ ಪೂಜೆಗಳನ್ನು ಮಾಡಲಾಯಿತು ಎಂದರು.

ಈಗಾಗಲೇ ನಾಲೆಗಳಿಗೆ ನೀರು ನಿಲ್ಲಿಸಿರುವುದರಿಂದ ಬೆಳೆಗಳು ಒಣಗುತ್ತಿವೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 81 ಅಡಿಗೆ ಕುಸಿದಿದೆ. ಹೀಗಾಗಿ ಪರ್ಜನ್ಯ ಹೋಮದ ಮೊರೆ ಹೋಗಬೇಕಾಯಿತು ಎಂದು ಹೇಳಿದರು.

ಪರ್ಜನ್ಯ ಹೋಮ ನಡೆಸಿದಾಗಲೆಲ್ಲ ಉತ್ತಮ ಮಳೆಯಾಗಿ ಡ್ಯಾಂ ಭರ್ತಿಯಾಗಿದೆ. 2021 ರಲ್ಲೂ ಮಳೆ ಕೈಕೊಟ್ಟಾಗ ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪೂಜೆ ನೆರವೇರಿಸಲಾಗಿತ್ತು. ಇದಾದ ಬಳಿಕ ಎರಡೇ ದಿನದಲ್ಲಿ ಮಳೆ ಸುರಿದು ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಪೂಜೆ ಮಾಡುವಂತೆ ವೈದಿಕ ಭಾನುಪ್ರಕಾಶ ಶರ್ಮ ಅವರಲ್ಲಿ ನಾನು ಮನವಿ ಮಾಡಲಾಗಿ ಪರ್ಜನ್ಯ ಜಪ, ಹೋಮ, ಕಳಶ ಸ್ಥಾಪನೆ, ಮಹಾ ಗಣಪತಿ ಪೂಜೆ, ಪುಣ್ಯಹಾದಿ, ಆದಿತ್ಯ ಪೂಜೆ, ಮಳೆಯ ದೇವತೆಗಳ ಆಹ್ವಾಹನೆ, ರುದ್ರಾಭಿಷೇಕ ಮೂಲಮಂತ್ರಗಳನ್ನು ಜಪಿಸುತ್ತಾ ವೈದಿಕರಿಂದ ವಿಶೇಷ ಪೂಜೆ ಮಾಡಲಾಗಿದೆ ಎಂದು ವಿವರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!