ಪಣಜಿ : ಶಾಲಾ ಪಠ್ಯಪುಸ್ತಕಗಳಿಂದ ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರ ಪಠ್ಯವನ್ನು ಕೈಬಿಡುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ಕಾಂಗ್ರೆಸ್ಗೆ ತಿರುಗುಬಾಣವಾಗಲಿದೆ ಎಂದು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಂಜಿತ್ ‘ಪಠ್ಯದಿಂದ ಸಾವರ್ಕರ್ ಅಧ್ಯಾಯಗಳನ್ನು ಅಳಿಸಿಹಾಕುವ ಮೂಲಕ ವಿದ್ಯಾರ್ಥಿಗಳು ಸಾವರ್ಕರ್ ಬಗ್ಗೆ ಕಲಿಯುವ ಅವಕಾಶ ಕಸಿದುಕೊಳ್ಳಬಹುದು ಎಂದು ಕಾಂಗ್ರೆಸ್ ಯೋಚಿಸಿರಬಹುದು. ಆದರೆ ವಿದ್ಯಾರ್ಥಿಗಳು ತುಂಬಾ ತೀಕ್ಷ್ಣರಾಗಿದ್ದಾರೆ. ಸವರ್ಕರ್ ಕುರಿತು ಸಾಕಷ್ಟು ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿವೆ. ಸಾವರ್ಕರ್ ಅವರ ಬರಹಗಳನ್ನು ‘ಸಾವರ್ಕರ್ ಸ್ಮಾರಕ’ ವೆಬ್ಸೈಟ್ನಲ್ಲಿ ಹಾಕಲಾಗಿದೆ. ಅವುಗಳನ್ನು ನಾವು ಕನ್ನಡದಲ್ಲೂ ಪ್ರಕಟಿಸಲಿದ್ದೇವೆ’ ಎಂದಿದ್ದಾರೆ. ಅಲ್ಲದೇ ‘ಅಧ್ಯಾಯವನ್ನು ತೆಗದುಹಾಕುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ನೀವು ಇದನ್ನು ಹೆಚ್ಚು ತಡೆದಷ್ಟು ಅದು ಹೆಚ್ಚಾಗಿ ಮರುಕಳಿಸುತ್ತದೆ. ಪ್ರತಿಯೊಂದು ಪ್ರಕ್ರಿಯೆಯು ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇದು ಸಹಜ ಪ್ರಕ್ರಿಯೆ’ ಎಂದಿದ್ದಾರೆ.
ಕರ್ನಾಟಕ ಸರ್ಕಾರವು ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿನ 6 ರಿಂದ 10 ನೇ ತರಗತಿಯ ಶಾಲಾ ಮಕ್ಕಳ ಸಮಾಜ ವಿಜ್ಞಾನ ಮತ್ತು ಕನ್ನಡ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಅನುಮೋದನೆ ನೀಡಿದ್ದು ಪಠ್ಯದಿಂದ ಆರ್ಎಸ್ಎಸ್ ಸ್ಥಾಪಕ ಕೆ.ಬಿ.ಹೆಡಗೇವಾರ್ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರ ಅಧ್ಯಾಯಗಳನ್ನು ತೆಗೆದು ಹಾಕಲು ನಿರ್ಧರಿಸಿದೆ.





