ರಾಯಚೂರು : ಜಿ-20 ಶೃಂಗಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪೋಷಕರು ಭಾರತದಲ್ಲೇ ಉಳಿದುಕೊಂಡಿದ್ದು ರಾಯರ ದರ್ಶನ ಪಡೆದಿದ್ದಾರೆ.
ಯಶ್ವೀರ್ ಸುನಕ್ ಹಾಗೂ ಉಷಾ ಸುನಕ್ ಅವರು ಮಂತ್ರಾಲಯ ರಾಯರ ದರ್ಶನ ಪಡೆದಿದ್ದಾರೆ. ಇವರೊಂದಿಗೆ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ಬೀಗತಿಯಾಗಿರುವ ಸುಧಾಮೂರ್ತಿ ಅವರು ಕೂಡ ಜೊತೆ ಆಗಮಿಸಿದ್ದರು. ಮೊದಲು ರಾಯರ ದರ್ಶನ ಪಡೆದು, ಬಳಿಕ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಸುಧಾಮೂರ್ತಿ ಹಾಗೂ ರಿಷಿ ಸುನಕ್ ಪೋಷಕರಿಗೆ ಶ್ರೀಗಳು ಆಶಿರ್ವಚನ ಮಾಡಿದರು. ನಂತರ ಪರಿಮಳ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಆಶಿರ್ವದಿಸಿದ್ದು,ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮಂತ್ರಾಕ್ಷತೆ, ಪರಿಮಳ ಪ್ರಸಾದ ತಲುಪಿಸಲು ತಿಳಿಸಿದರು.
ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಜೊತೆ ರಿಷಿ ಸುನಾಕ್ ಅವರ ತಂದೆ-ತಾಯಿ ಕೂಡ ಭಾರತಕ್ಕೆ ಬಂದಿದ್ದಾರೆ. ಸದ್ಯ ರಿಷಿ ಸುನಾಕ್ ಅವರ ಕುಟುಂಬ ಆಧ್ಯಾತ್ಮಿಕತೆಯಲ್ಲಿ ತೊಡಗಿಕೊಳ್ಳುತ್ತಿದ್ದು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಶೃಂಗಸಭೆ ವೇಳೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ರಿಷಿ ಸುನಕ್ ದಂಪತಿ ಫೋಟೋಗಳು ವೈರಲ್ ಆಗಿದ್ದವು. ಬಳಿಕ ರಿಷಿ ಸುನಾಕ್ ಅವರ ತಾಯಿ ಉಷಾ ಸುನಕ್ ಅವರು ತಮ್ಮ ಬೀಗತಿ ಸುಧಾಮೂರ್ತಿ ಅವರೊಂದಿಗೆ ಬೆಂಗಳೂರಿನ ಶಾಸಕ ಉದಯ ಗರುಡಾಚಾರ್ ಅವರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಇದೀಗ ರಿಷಿ ಸುನಾಕ್ ಅವರ ಪೋಷಕರು ಮಂತ್ರಾಲಯದ ರಾಯರ ದರ್ಶನ ಮಾಡಿದ್ದಾರೆ.





