Mysore
22
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ಪರಿಷತ್‌ನಲ್ಲೂ ಪಾಸಾದ ನೋಂದಣಿ-ಭೂ ಕಂದಾಯ ತಿದ್ದುಪಡಿ ವಿಧೇಯಕ

ಬೆಂಗಳೂರು : ಕಂದಾಯ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೇವಲ ಎರಡೇ ತಿಂಗಳಲ್ಲಿ ಭೂ ಪರಿವರ್ತನೆ ಹಾಗೂ ನೋಂದಣಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲ ರೀತಿಯ ಭ್ರಷ್ಟಾಚಾರವನ್ನೂ ಕೊನೆಗೊಳಿಸಿ, ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸಚಿವ ಕೃಷ್ಣಭೈರೇಗೌಡ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ಅವರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಭೂ ಕಂದಾಯತಿದ್ದುಪಡಿ) ವಿಧೇಯಕ ಹಾಗೂ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಗುರುವಾರ ವಿಧಾನ ಪರಿಷತ್ ನಲ್ಲೂ ಮಂಡಿಸಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಮರಿತಿಬ್ಬೇಗೌಡ, “ನೋಂದಣಿ ಅಧಿಕಾರಿ ಒಳ್ಳೆಯ ವ್ಯಕ್ತಿಯೇ ಆಗಿದ್ದರೂ, ಜನ ಅನುಮಾನದಿಂದಲೇ ನೋಡುವಂತಾಗಿದೆ. ಇದಕ್ಕೆ ಕಾರಣ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ. ಈ ಭ್ರಷ್ಟಾಚಾರವನ್ನು ತಡೆದು ಜನರಿಗೆ ಸುಗಮ ಮತ್ತು ಸರಳ ಸೇವೆಯನ್ನು ಒದಗಿಸುವ ಸಲುವಾಗಿ ಸಚಿವ ಕೃಷ್ಣಭೈರೇಗೌಡ ತೆಗೆದುಕೊಂಡಿರುವ ಕ್ರಮ ಮತ್ತು ಸರ್ಕಾರದ ನಡೆ ನಿಜಕ್ಕೂ ಶ್ಲಾಘನೀಯ” ಎಂದು ಪ್ರಶಂಶಿಸಿದ್ದಾರೆ

“ಯಾರದ್ದೋ ಆಸ್ತಿಯನ್ನು ಮತ್ಯಾರೋ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳುವ, ಇನ್ಯಾರಿಗೋ ಮಾರಾಟ ಮಾಡಿಕೊಳ್ಳುವ ದೊಡ್ಡ ಮೋಸದ ಜಾಲ ಇಂದು ರಾಜ್ಯಾದ್ಯಂತ ಸಕ್ರೀಯವಾಗಿದೆ. ಬೆಂಗಳೂರಿನಂತಹ ನಗರದಲ್ಲಿ ನೀವು ಒಂದು ವರ್ಷ ವಿದೇಶಕ್ಕೆ ಹೋಗಿ ಹಿಂತಿರುಗಿದರೆ, ವಾಪಾಸ್ ಬರುವ ವೇಳೆಗೆ ನಿಮ್ಮ ಭೂಮಿ ಮತ್ತೊಬ್ಬರಿಗೆ ನೋಂದಣಿಯಾಗಿರುತ್ತದೆ. ಈ ಮೋಸದ ಜಾಲದ ಹಿಂದೆ ಹಲವು ಅಧಿಕಾರಿಗಳ ಕೈವಾಡವೂ ಇದೆ.

ಆದರೆ, ಈ ವಂಚನೆಗೆ ಒಳಗಾದ ಆಸ್ತಿ ಮಾಲೀಕರು ತನ್ನ ಜೀವಿತಾವಧಿಯ ಕೊನೆವರೆಗೂ ಸಿವಿಲ್ ನ್ಯಾಯಾಲಯಗಳ ಮೆಟ್ಟಿಲು ಹತ್ತಿಳಿದರೂ ತ್ವರಿತ ನ್ಯಾಯದ ಆಶ್ವಾಸನೆ ನೀಡಲು ಸಾಧ್ಯವಿಲ್ಲದಂತಾಗಿದೆ. ಅಂತಹ ಜನರಿಗೆ ತ್ವರಿತ ನ್ಯಾಯ ಒದಗಿಸಲು ಮತ್ತು ಭ್ರಷ್ಟ ಅಧಿಕಾರಿಗಳನ್ನು ಕಾನೂನು ಅಡಿ ಶಿಕ್ಷಿಸಲು, ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ತಿದ್ದುಪಡಿ ವಿಧೇಯಕ ಉಪಯೋಗವಾಗುತ್ತದೆ” ಎಂದು ಮರಿತಿಬ್ಬೇಗೌಡ ಅಭಿಮತ ವ್ಯಕ್ತಪಡಿಸಿದರು. ಅಲ್ಲದೆ, ಕಂದಾಯ ಇಲಾಖೆ ಆಡಳಿತದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕು ಎಂದು ಸಲಹೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!