Mysore
20
overcast clouds
Light
Dark

ರೆಪೋ ದರ ಏರಿಕೆಯನ್ನು ಸ್ಥಗಿತಗೊಳಿಸಿದ ಆರ್‌ಬಿಐ

ನವದೆಹಲಿ : ರೆಪೋ ದರ ಏರಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪ್ರಕಟಿಸಿದ್ದಾರೆ. ಇದರಿಂದ ಪ್ರಮುಖ ಮಾನದಂಡ ಬಡ್ಡಿ ದರ ಶೇ. 6.5ರಲ್ಲೇ ಉಳಿಯಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಕೇಂದ್ರೀಯ ಬ್ಯಾಂಕ್‌ ಈಗಾಗಲೇ 250 ಮೂಲ ಅಂಕಗಳಷ್ಟು ಬಡ್ಡಿ ದರವನ್ನು ಏರಿಕೆ ಮಾಡಿದೆ.

ಬಡ್ಡಿ ದರ ಏರಿಕೆ ಮೂಲಕ ಆರ್ಥಿಕತೆಯನ್ನು ಬಿಗಿಗೊಳಿಸುತ್ತಿದ್ದ ಸಂದರ್ಭದಲ್ಲಿ ‘ವಿತ್ತೀಯ ನೀತಿ ಕ್ರಿಯೆಯಲ್ಲಿ ಅಕಾಲಿಕ ವಿರಾಮವು ದುಬಾರಿ ನೀತಿ ದೋಷವಾಗಿದೆ’ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ಆದರೆ ಇದರ ನಡುವೆಯೂ ಅವರು ಗುರುವಾರ ಬಡ್ಡಿ ದರ ಏರಿಕೆಗೆ ವಿರಾಮ ನೀಡುವ ಘೋಷಣೆ ಮಾಡಿದ್ದಾರೆ.

ಹೆಚ್ಚಿನ ಅನಿಶ್ಚಿತತೆಯ ಜಗತ್ತಿನಲ್ಲಿ ವಿತ್ತೀಯ ನೀತಿಯ ಭವಿಷ್ಯದ ತೀರ್ಮಾನಗಳ ಬಗ್ಗೆ ಸ್ಪಷ್ಟ ಸೂಚನೆ ನೀಡುವುದು ಪ್ರತಿಕೂಲವಾಗಿ ಪರಿಣಮಿಸಬಹುದು ಎಂದು ಆರ್‌ಬಿಐ ಗವರ್ನರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದಕ್ಕೂ ಮುನ್ನ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.44ರಷ್ಟು ಇತ್ತು. ಜನವರಿಯಲ್ಲಿ ಇದೇ ಚಿಲ್ಲರೆ ಹಣದುಬ್ಬರ ಶೇ. 6.52ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ಹಣದುಬ್ಬರ ಸ್ವಲ್ಪ ಇಳಿಕೆ ಕಂಡಿತ್ತು. ಹೀಗಿದ್ದೂ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸಹಿಷ್ಣುತಾ ಮಿತಿಯಾದ ಶೇ. 2 ರಿಂದ ಶೇ. 6ಕ್ಕಿಂತ ಹೆಚ್ಚೇ ಇದೆ.

ಅಕಾಲಿಕ ಮಳೆಯು ಆಹಾರದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರ ಜತೆಗೆ ಒಪೆಕ್‌ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದು, ಇದು ಹಣದುಬ್ಬರ ದರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಭಾರತದ ಉತ್ಪಾದನಾ ವಿಭಾಗವು ಮಾರ್ಚ್‌ನಲ್ಲಿ ಮೂರು ತಿಂಗಳುಗಳಲ್ಲೇ ವೇಗದ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಆದರೆ ಸೇವಾ ವಲಯದ ಬೆಳವಣಿಗೆಯು ಫೆಬ್ರವರಿಯಲ್ಲಿದ್ದ 12 ವರ್ಷಗಳ ಗರಿಷ್ಠ ಮಟ್ಟದಿಂದ ಮಾರ್ಚ್‌ನಲ್ಲಿ ಸ್ವಲ್ಪಮಟ್ಟಿಗೆ ನಿಧಾನಗೊಂಡಿದೆ ಎಂದು ಎಸ್‌&ಪಿ ಗ್ಲೋಬಲ್ ನಡೆಸಿದ ಖಾಸಗಿ ವ್ಯಾಪಾರ ಸಮೀಕ್ಷೆಯು ತಿಳಿಸಿತ್ತು.

ಅಮೆರಿಕ ಮತ್ತು ಯುರೋಪ್‌ನ ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಬಿಗಿಯಾದ ಆರ್ಥಿಕ ಪರಿಸ್ಥಿತಿಗಳಿಗೆ ಮತ್ತು ಆರ್ಥಿಕತೆಯಲ್ಲಿ ತೀವ್ರ ಜಾಗತಿಕ ಮಂದಗತಿಗೆ ಕಾರಣವಾಗಬಹುದು ಎಂದು ಹಲವು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಆಮದುಗಳ ಸರಾಗಗೊಳಿಸುವಿಕೆ ಮತ್ತು ಬ್ಯಾಂಕ್ ಸಾಲದ ಬೇಡಿಕೆ ಕಡಿಮೆಯಾಗಿರುವುದು ನಿಧಾನಗತಿಯ ಆರ್ಥಿಕತೆಯ ಆರಂಭಿಕ ಚಿಹ್ನೆಗಳಾಗಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇವೆಲ್ಲದರ ನಡುವೆಯೇ ಮಾರ್ಚ್ ಅಂತ್ಯದ ವೇಳೆಗೆ ಕೊರತೆಯನ್ನು ಎದುರಿಸಿದ್ದ ಬ್ಯಾಂಕಿಂಗ್ ವ್ಯವಸ್ಥೆಯ ಹಣಕಾಸು ಲಭ್ಯತೆ ಸುಧಾರಿಸಿರುವುದು ಆಶಾದಾಯ ಬೆಳವಣಿಗೆಯಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ