ನವದೆಹಲಿ : ಸಂಸತ್ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಆರೋಪಿ ಮಹೇಶ್ ಕುಮಾವತ್ ಎಂಬಾತನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಹೇಶ್ ಕುಮಾವತ್ ರಾಜಸ್ಥಾನದ ನಾಗೋರ್ ಜಿಲ್ಲೆಯವನಾಗಿದ್ದು, ಸಂಸತ್ನಲ್ಲಿ ಭದ್ರತಾ ವೈಫಲ್ಯವಾದ ದಿನದಂದು ಈತ ಕೂಡ ನವದೆಹಲಿಗೆ ಆಗಮಿಸಿದ್ದು, ಈತ ಕೂಡ ಈ ಸಂಚಿನ ಭಾಗವಾಗಿದ್ದನೆಂದು ದೃಢಪಟ್ಟ ನಂತರ ಆತನ ಬಂಧಿಸಿದ್ದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಂಚಿನ ಪ್ರಮುಖ ರೂವಾರಿಯಾಗಿದ್ದ ಲಲಿತ್ ಝಾ ಘಟನೆ ನಡೆದ ಬೆನ್ನಲ್ಲೇ ರಾಜಸ್ಥಾನದಲ್ಲಿ ಮಹೇಶ್ ಇರುವ ಸ್ಥಳದಲ್ಲಿ ಅಡಗಿ ಕುಳಿತಿದ್ದ. ಈ ಸಂಚಿನ ಭಾಗವಾಗಿದ್ದ ಇತರ ನಾಲ್ಕು ಮಂದಿಯ ಮೊಬೈಲ್ ಫೋನ್ ನಾಶಪಡಿಸುವಲ್ಲಿ ಮಹೇಶ್ ಕೂಡ ಲಲಿತ್ಗೆ ಜೊತೆಯಾಗಿದ್ದ. ಡಿಸೆಂಬರ್ 13ರಂದು ಸಂಸತ್ ಕಟ್ಟಡದ ಹೊರಗೆ ಪ್ರತಿಭಟಿಸಿದ್ದ ಇಬ್ಬರಲ್ಲಿ ಒಬ್ಬಳಾಗಿದ್ದ ನೀಲಂ ಜೊತೆಗೆ ಮಹೇಶ್ ನಿರಂತರ ಸಂಪರ್ಕದಲ್ಲಿದ್ದನೆಂದು ತಿಳಿದು ಬಂದಿದೆ.
ಲಲಿತ್ ಮತ್ತು ಮಹೇಶ್ ಇಬ್ಬರೂ ಗುರುವಾರವೇ ದಿಲ್ಲಿಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಶುಕ್ರವಾರ ಲಲಿತ್ ಬಂಧನವಾಗಿತ್ತು.