ಬೆಂಗಳೂರು – ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನ ಸಿಎಂ ಘೋಷಣೆ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಂಪೂರ್ಣ ಬೆಂಬಲವಿದೆ. ಮುಖ್ಯಮಂತ್ರಿ ಆಯ್ಕೆಗೆ ತನ್ನದೇ ಆದ ಪ್ರಕ್ರಿಯೆ ಇದೆ. ರಾಜ್ಯದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಮೊದಲ ಗುರಿ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೊದಲು ನಾವು ಜನರ ವಿಶ್ವಾಸ ಗೆದ್ದು ಚುನಾವಣೆಯಲ್ಲಿ ಬಹುಮತ ಪಡೆಯಬೇಕು ನಂತರ ಶಾಸಕರ ಅಭಿಪ್ರಾಯ ಪರಿಗಣಿಸಿ ಸಿಎಂ ಬಗ್ಗೆ ನಿರ್ಧಾರ ಮಾಡಲಾಗುವುದು. ಇದು ಪ್ರಜಾಪ್ರಭುತ್ವ ಪ್ರಕ್ರಿಯೆ ಎಂದರು.
ಕಾಂಗ್ರೆಸ್ ಪಕ್ಷದ ಸಂದೇಶ ಸರಳವಾಗಿದೆ. ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಮ್ಮ ಉದ್ದೇಶ. ರಾಜಕೀಯ ಹೊರತುಪಡಿಸಿ ಚುನಾವಣೆಯಲ್ಲಿ ಅನೇಕ ಸವಾಲುಗಳಿವೆ. ಕಾಂಗ್ರೆಸ್ ಈ ಸವಾಲು ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ-ಡಿಕೆಶಿ ನಡುವೆ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ, ಎಲ್ಲ ರಾಜ್ಯಗಳಲ್ಲಿ ನಾಯಕರ ನಡುವೆ ಪೈಪೋಟಿ ಇರುವುದು ಸಹಜ. ಅದೇ ರೀತಿಯಾಗಿ ಕರ್ನಾಟಕದಲ್ಲೂ ಪೈಪೋಟಿ ಇದೆ ಎಂದು ವ್ಯಾಖ್ಯಾನಿಸಿದರು.
ನೀವು ಪಿಎಂ ರೇಸ್ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ, ಎಐಸಿಸಿ ಅಧ್ಯಕ್ಷರು ಇದ್ದಾರೆ, ಅನೇಕ ಜನ ಹಿರಿಯ ನಾಯಕರು ಇದ್ದಾರೆ. ಸದ್ಯಕ್ಕೆ ಪಿಎಂ ಸ್ಥಾನದ ವಿಚಾರ ಅಪ್ರಸ್ತುತ. ಮೊದಲು ಕರ್ನಾಟಕದಲ್ಲಿ ಒಬ್ಬರನ್ನು ಸಿಎಂ ಮಾಡೋಣ. ಆಮೇಲೆ ಪಿಎಂ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿನ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ.ದುರಾಡಳಿತ ಇದ್ದಾಗ ನೋಡಲು ಬೇರೆ ಏನೂ ಇರುವುದಿಲ್ಲ, ಜನರು ಅನಿವಾರ್ಯವಾಗಿ ಉತ್ತಮ ಸರ್ಕಾರ ಬೇಕು ಎಂದು ಬಯಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ದುರಾಡಳಿತ ಇದ್ದಾಗ, ಏನೂ ಕಾಣದೇ ಇರುವಾಗ, ಜನರು ಅನಿವಾರ್ಯವಾಗಿ ಒಳ್ಳೆಯ ಸರ್ಕಾರ ಬೇಕು ಎಂದು ಯೋಚಿಸುತ್ತಾರೆ. ಕಳೆದ 4 ವರ್ಷಗಳಲ್ಲಿ ಅವರು ಅನುಭವಿಸಿದ ದುರಾಡಳಿತಕ್ಕೆ ಕಾಂಗ್ರೆಸ್ ಅನ್ನು ಗೌರವಾನ್ವಿತ ಪರ್ಯಾಯವಾಗಿ ನೋಡಲು ಜನರು ತುಂಬಾ ಆಸಕ್ತಿ ಹೊಂದಿದ್ದಾರೆ’ ಎಂದು ತರೂರ್ ಹೇಳಿದರು.ಜನರ ಅಗತ್ಯತೆಗಳನ್ನು ಈಡೇರಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಮತ್ತು ಜನರ ಅಗತ್ಯಗಳನ್ನು ಈಡೇರಿಸಲು ಕಾಂಗ್ರೆಸ್ ಈಗಾಗಲೇ ನಿರ್ದಿಷ್ಟ ಭರವಸೆಗಳನ್ನು ನೀಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಐಟಿ ಹೂಡಿಕೆ ಕುಸಿಯುತ್ತಿದೆ ಎಂದು ಟೀಕಿಸಿದರು.
ಬೆಂಗಳೂರಿಗೆ ಅಂತಹ ದೊಡ್ಡ ಸಾಮರ್ಥ್ಯವಿದೆ. ಕೆಲವು ವರ್ಷಗಳ ಹಿಂದೆ ಐಟಿ ಹೂಡಿಕೆಗೆ ಹೆಚ್ಚು ಒಲವು ತೋರಿದ್ದ ನಗರದಲ್ಲಿ ಕಳೆದ 3-4 ವರ್ಷಗಳಿಂದ ಹೂಡಿಕೆಗಳು ಕುಸಿಯುತ್ತಿರುವುದು ತುಂಬಾ ದುಃಖಕರವಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಅಮುಲ್ ಉತ್ಪನಗಳ ಮಾರಾಟದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಕೆಎಂಎಫ್ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತದೆ ಎಂದರು.