Mysore
20
overcast clouds
Light
Dark

ವೋಟರ್ ಸ್ಲಿಪ್ ತಂದಿಲ್ಲ ಎಂದು ರಾಜಮನೆತನದವರನ್ನೇ ವಾಪಸ್ ಕಳಿಸಿದ ಅಧಿಕಾರಿಗಳು

ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲೆಡೆ ಭರ್ಜರಿ ಮತದಾನ ನಡೆಯುತ್ತಿದೆ ಮತ ಚಲಾಯಿಸುವ ಮೂಲಕ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ. ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಅವರು ವೋಟರ್ ಚೀಟಿಯನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಗೆ ಆಗಮಿಸಿದ್ದು ಮತ್ತೆ ಮನೆಗೆ ತೆರಳಿ ವೋಟರ್ ಸ್ಲಿಪ್ ತೆಗೆದುಕೊಂಡು ಬಂದ ಅಪರೂಪದ ಘಟನೆ ನಡೆದಿದೆ.
ಮತದಾನ ಮಾಡಲು ಬರುವವರು ವೋಟರ್ ಐಡಿ ಜೊತೆ ವೋಟರ್ ಸ್ಲಿಪ್ ಕೂಡ ತೆಗೆದುಕೊಂಡು ಬರಬೇಕು. ಆದ್ರೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ವೋಟರ್ ಸ್ಲಿಪನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಯ ಬಳಿ ಬಂದಿದ್ರು. ಈ ವೇಳೆ ಚುನಾವಣಾ ಅಧಿಕಾರಿಗಳು ಅವರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ.
ಆಗ ಅವರು ತಮ್ಮ ಮೊಬೈಲ್‌ನಲ್ಲಿದ್ದ ಸಾಫ್ಟ್ ಕಾಪಿಯನ್ನು ತೋರಿಸಿದ್ದಾರೆ. ಆದರೆ ಇದಕ್ಕೆ ಮತಗಟ್ಟೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಎಷ್ಟೇ ದೊಡ್ಡವರಾದರೂ ಕಾನೂನು ಎಲ್ಲರಿಗೂ ಒಂದೇ ಎಂದು ಈ ಮೂಲಕ ಮತಗಟ್ಟೆ ಅಧಿಕಾರಿಗಳು ಸಾರಿದ್ದಾರೆ. ಹೀಗಾಗಿ ವೋಟರ್ ಸ್ಲಿಪ್ ತರಲು ಮತಗಟ್ಟೆಯಿಂದ ಪ್ರಮೋದಾದೇವಿ ಒಡೆಯರ್ ವಾಪಸ್ ತೆರಳಿದರು. ಮತಗಟ್ಟೆಯ ಮುಂಭಾಗದಲ್ಲೇ ಕಾರಿನಲ್ಲಿ ಕುಳಿತು ಮೊಬೈಲ್​ನಲ್ಲಿದ್ದ ಸಾಫ್ಟ್‌ ಕಾಪಿ ಪ್ರಿಂಟ್ ಪಡೆದು ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಮತ ಚಲಾಯಿಸಿದರು.‌
ಮತದಾನದ ಬಳಿಕ ಮಾತನಾಡಿದ ಅವರು, ಮೊದಲೆಲ್ಲಾ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಕಚೇರಿಯಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ‌ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತ ಹೇಳಿದರು. ಆಫೀಸಿನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ‌ ತಡವಾಯ್ತು. ಸಾಫ್ಟ್ ಕಾಪಿಯಲ್ಲಿ ಹಾಕಿದ್ದಾರೆ.
ಡಿಜಿಟಲ್ ಕಾಪಿ ಅಲೋ ಮಾಡಲ್ಲ ಅಂತ ಗೊತ್ತಿರಲಿಲ್ಲ. ಯುವಕರು ಮತದಾನದ ಮೂಲಕ ತಮ್ಮ ಭಾವನೆ ವ್ಯಕ್ತ ಪಡಿಸಬೇಕು. ಅಲ್ಲದೆ ನಮ್ಮ ಧ್ವನಿ ಕೇಳಲ್ಲ ಅಂದರೆ ಏನೂ ಮಾಡಲು ಆಗುವುದಿಲ್ಲ. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿ ಇದ್ದರು ಅದನ್ನು ಇಲ್ಲಿ ಬಂದು ವ್ಯಕ್ತಪಡಿಸಿ. ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ