ಲಂಡನ್: ಭಾರತವನ್ನು 200 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಈಗ ಭಾರತ ಮೂಲದವರೇ ಆದ ರಿಷಿ ಸುನಕ್ ಅಧಿಪತಿ. ಆದರೆ, ಪ್ರಧಾನಿ ಜವಾಬ್ದಾರಿಗೆ ಹೆಗಲು ನೀಡಿರುವ ಸುನಕ್ ಮುಂದೆ ಸವಾಲುಗಳ ಶಿಖರವು ಇನ್ನಷ್ಟು ಹೆಚ್ಚಿದೆ. ಅವುಗಳನ್ನು ನಿಭಾಯಿಸುವ ಜಾಣತನ ಮುಂದಿನ ಅವರ ರಾಜಕೀಯ ಗುರಿಗಳ ಮೇಲೆ ನಿರ್ಧರಿಸಲಾಗಿದೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಆರ್ಥಿಕ ವಿಷಯದಲ್ಲಿ ನಿಪುಣರು. ಮಾಜಿ ಪಿಎಂ ಬೋರಿಸ್ ಜಾನ್ಸನ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಸಂಧರ್ಭದಲ್ಲಿ ಕೋವಿಡ್ ಬಿಕ್ಕಟ್ಟಿನ ಸಮಸ್ಯೆಯಲ್ಲೂ ಬ್ರಿಟನ್ ಆರ್ಥಿಕತೆ ಪಾತಾಳಕ್ಕೆ ಕುಸಿಯದಂತೆ ಶಿಸ್ತು ಬದ್ಧತೆಯಿಂದ ಮಾಡಿದ ಕೆಲಸ ಅವರಿಗೀಗ ಪ್ರಧಾನಿ ಪಟ್ಟ ತಂದುಕೊಟ್ಟಿದೆ.
ತೆರಿಗೆ ಪದ್ಧತಿ, ವಿದ್ಯುತ್ ದರ ನೀತಿವಿಧಾನ, ಸೇರಿದಂತೆ ಹಲವು ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸುವ ಹಾಗೂ ಸ್ವಪಕ್ಷೀಯರ ವಿರೋಧವನ್ನು ತಣಿಸುವ ಮೂಲಕ ಪಕ್ಷ ಹಾಗೂ ದೇಶವನ್ನು ಮುನ್ನಡೆಸುವ ಸವಾಲು ಅವರ ಮುಂದಿದೆ.