Mysore
20
overcast clouds
Light
Dark

ಖ್ಯಾತ ಸಾಹಿತಿ ಪ್ರೊ. ಕಮಲ ಹಂಪನಾ ನಿಧನ

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲಾ ಹಂಪನಾ ಅವರು ಶನಿವಾರ(ಜೂನ್‌.22) ನಿಧನರಾಗಿದ್ದಾರೆ.

ನಗರದ ರಾಜರಾಜೇಶ್ವರಿ ನಗರದ ತಮ್ಮ ಮಗಳ ನಿವಾಸದಲ್ಲಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಹಂಪನಾ ಅವರು ಇಹಲೋಕ ಸೇರಿದ್ದಾರೆ. ಇವರಿಗೆ 89 ವರ್ಷ ವಯಸ್ಸಾಗಿತ್ತು.

ಕಮಲಾ ಅವರು ಖ್ಯಾತ ಸಾಹಿತಿ ಹಂಪಾ ನಾಗರಾಜಯ್ಯ ಅವರ ಪತ್ನಿಯಾಗಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದರು. ಹಂಪನಾ ನಿಧನಕ್ಕೆ ರಾಜ್ಯದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

2003ರಲ್ಲಿ ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಮೂಲತಃ ದೇವನಹಳ್ಳಿಯ ಸಿ. ರಂಗಧಾಮನಾಯಕ್‌- ಲಕ್ಷಮ್ಮ ದಂಪತಿ ಪುತ್ರಿಯಾಗಿದ್ದ ಇವರು, ತುಮಕೂರು ಹಾಗೂ ಮೈಸೂರಿನಲ್ಲಿ ಶಿಕ್ಷಣ ಮುಗಿಸಿದರು. ನಂತರ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ವಿಜಯನಗರ ಸರ್ಕಾರಿ ಪ್ರಥಮ ದರ್ಜೆಯಲ್ಲಿ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಜತೆಗೆ ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ, ಪ್ರಾಕೃತ ಶಾಸ್ತ್ರ ಅಧ್ಯಯನ ಪ್ರಾಧ್ಯಾಪಕರಾಗಿ, ಕನ್ನಡ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಹಂಪನಾ ಪ್ರಮುಖ ಕೃತಿಗಳು: ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದ್ದಿತ್ತು, ಚಂದನಾ, ಬಣವೆ-ಕಥಾ ಸಂಕಲನಗಳು, ತುರಂಗ ಭಾರತ-ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ ಸೇರಿದ ಹಲವಾರು ಸಂಶೋಧನಾ ಕೃತಿಗಳು, ಸಾಹಿತ್ಯಗಳು, ಅನುವಾದ ಮತ್ತು ಕಾದಂಬರಿಗಳನ್ನು ರಚಿಸಿದ್ದಾರೆ.

ಹಂಪನಾ ಅವರಿಗೆ ಸಂದ ಪ್ರಶಸ್ತಿಗಳು: ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಮ್ಟೆ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ನಾಡೋಜಾ ಗೌರವ ಡಾಕ್ಟರೇಟ್‌, ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರಶಸ್ತಿ, ಅನುಪಮಾ ನಿರಂಜನಾ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗಳು ಹಂಪನಾ ಅವರಿಗೆ ಸಂದಿವೆ.