Mysore
20
overcast clouds
Light
Dark

ಕಾವೇರಿ ಕಿಚ್ಚು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಜಂಟಿ ಪ್ರತಿಭಟನೆ

ಬೆಂಗಳೂರು : ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರ ಹಿತವನ್ನು ಕಡೆಗಣಿಸಿ ನೆರೆಯ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ರಣಕಹಳೆ ಮೊಳಗಿಸಿವೆ.

ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡ ನಂತರ ಮೊದಲ ಬಾರಿಗೆ ಬಿಜೆಪಿ, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯಭಾಗದಲ್ಲಿರುವ ಗಾಂಧೀ ಪ್ರತಿಮೆ ಬಳಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಸಂಸದರಾದ ತೇಜಸ್ವಿನಿ ಸೂರ್ಯ, ಮುನಿಸ್ವಾಮಿ, ಶಾಸಕರಾದ ಬಿ.ವೈ.ವಿಜಯೇಂದ್ರ, ಎಸ್.ಆರ್.ವಿಶ್ವನಾಥ್, ಕೆ.ಸಿ.ರಾಮಮೂರ್ತಿ, ಎಂ.ಕೃಷ್ಣಪ್ಪ, ರವಿಸುಬ್ರಹ್ಮಣ್ಯ, ವಿಧಾನಪರಿಷತ್‍ನ ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

ಜೆಡಿಎಸ್ ವತಿಯಿಂದ ಶಾಸಕ ಎ.ಮಂಜು, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸದಸ್ಯರಾದ ಶ್ರೀಕಂಠೇಗೌಡ, ಕೃಷ್ಣಪ್ಪ ಸೇರಿದಂತೆ ಹಲವರು ಪ್ರತಿಭಟನೆಗೆ ಕೈಜೋಡಿಸಿದರು.

ಕಾವೇರಿ ನೀರು ನಮ್ಮದು. ನೀರು ನಿಲ್ಲಿಸಿ ರೈತರನ್ನು ಉಳಿಸಿ ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಬೆಂಗಳೂರು ಅಭಿವೃದ್ಧಿ ವಿರೋಧಿ ಡಿ.ಕೆ.ಶಿವಕುಮಾರ್ ಗೂ ಧಿಕ್ಕಾರ ಎಂದು ಪ್ರತಿಭಟನಾನಿರತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡಿನ ಏಜೆಂಟ್‍ನಂತೆ ವರ್ತಿಸುತ್ತಿದೆ. ಬರುವ ದಿನಗಳಲ್ಲಿ ನಾಡಿನ ಜನರ ಹಿತದೃಷ್ಟಿಯಿಂದ ಜೆಡಿಎಸ್-ಬಿಜೆಪಿ ಹೋರಾಟ ನಡೆಸುತ್ತಿದೆ. ನಿಮ್ಮ ರಾಜಕೀಯ ದೊಂಬರಾಟಕ್ಕೆ ಅವಕಾಶ ನೀಡಲ್ಲ. ಕರ್ನಾಟಕದಲ್ಲಿ ಮಳೆ ಮುಗಿದಿದೆ ಮತ್ತು ತಮಿಳುನಾಡಿನಲ್ಲಿ ಈಗ ಶುರುವಾಗಿದೆ. ಕಾವೇರಿ ಹೋರಾಟಕ್ಕೆ ಕುಮಾರಸ್ವಾಮಿ ಬಂದು ದೊಡ್ಡ ಶಕ್ತಿ ತಂದಿದ್ದಾರೆ. ವಾಸ್ತವ ಸ್ಥಿತಿಯನ್ನು ತಿಳಿದು ನೀರು ನಿಲ್ಲಿಸಬೇಕು ಎಂದು ಹೇಳಿದರು.

ನಾಡಿನ ಜನರ ಹಿತಕ್ಕಿಂತ ಕಾಂಗ್ರೆಸ್‍ಗೆ ತಮಿಳುನಾಡಿನಲ್ಲಿ ಮೈತ್ರಿ ಕುದುರಿಸಿಕೊಳ್ಳುವುದೇ ಮುಖ್ಯವಾಗಿದೆ. ಕಾವೇರಿಯಿಂದ ನೀರು ಬಿಡದಿದ್ದರೆ ನಾವು ಇಂಡಿಯಾ ಮೈತ್ರಿಕೂಟ ತೊರೆಯುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಒತ್ತಡ ಹಾಕಿ ನೀರು ಹರಿಸಲು ಸೂಚನೆ ನೀಡಿದೆ. ಇವರು ಅಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ರೈತರು ಪ್ರತಿ ದಿನ ಹೋರಾಟ ಮಾಡುತ್ತಿದ್ದಾರೆ. ಇವತ್ತು ಜಂಟಿಯಾಗಿ ಪ್ರತಿಭಟನೆ ಮಾಡ್ತಿರೋದು ರಾಜಕಾರಣಕ್ಕೆ ಅಲ್ಲ. ಸಿಎಂ ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ಈಗಲೂ ಎಚ್ಚೆತ್ತುಕೊಳ್ಳುವ ಪರಿಜ್ಞಾನ ಸರ್ಕಾರಕ್ಕೆ ಇಲ್ಲ. ಸರ್ವಪಕ್ಷ ಸಭೆ ಕರೆದಾಗ ನಾವು ಹೇಳಿದ್ದನ್ನು ಇವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಪ್ರತಿದಿನ 5 ಸಾವಿರ ಕ್ಯೂಸೆಕ್ ಹೇಳಿದರು. ಸುಪ್ರೀಂಕೋರ್ಟ್ ತೀರ್ಪು ಬರೋವರೆಗೂ ಕಾಯಬೇಕಿತ್ತು. 10 ರಿಂದ 15 ದಿನದ ನೀರನ್ನು ಉಳಿಸಿಕೊಳ್ಳಬಹುದಿತ್ತು. ನೀರಾವರಿ ಸಚಿವರಿಂದ ಬೆಂಗಳೂರಿನಲ್ಲಿ ವ್ಯವಹಾರ ಮಾಡೋಕೆ ಸಮಯ ಇಲ್ಲ. ಅಂತಹವರನ್ನ ನೀರಾವರಿ ಸಚಿವರನ್ನಾಗಿ ಮಾಡಿದ್ದಾರೆ. ಬೆಳಗ್ಗೆ ಪ್ರಾಧಿಕಾರದ ಸಭೆ ಇರುವಾಗ ಒಳಹರಿವು ಹೆಚ್ಚಾಗಿದೆ ಅಂತಾ ಜವಾಬ್ದಾರಿ ಸ್ಥಾನದಲ್ಲಿ ಇರೋರು ಹೇಳ್ತಾರಾ? ಮೆಟ್ಟೂರು ಜಲಾಶಯದಲ್ಲಿ ಒಳಹರಿವು, ಹೊರ ಹರಿವಿನ ಮಾಹಿತಿ ತರಿಸಿದ್ದೇನೆ. ಒಳಹರಿವು 6400 ಕ್ಯೂಸೆಕ್ ಇದೆ. ಕಳೆದ ಕೆಲ ದಿನ ಭಾಗಮಂಡಲದಲ್ಲಿ ಮಳೆ ಆಗಿದ್ದಕ್ಕೆ ಸ್ವಲ್ಪನೀರು ಬರ್ತಿದೆ. ಸ್ಥಳ ಪರಿಶೀಲನೆಗೆ ಹೋಗ್ತಿಲ್ಲ. ನೀರಾವರಿ ಸಚಿವರ ಹೇಳಿಕೆ ಮತ್ತಷ್ಟು ಮಾರಕ ಆಗಲಿದೆ. ಲಘುವಾದ ನಡವಳಿಕೆಯಿಂದ ಮುಂದಿನ ದಿನದಲ್ಲಿ ಸಮಸ್ಯೆ ಆಗಲಿದೆ ಎಂದು ಎಚ್ಡಿಕೆ ಹೇಳಿದರು.

ಪ್ರತಿಭಟನೆಯ ನಡುವೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಅಂತಿದ್ದಾರೆ. ಇದರ ಮೂಲಕ ಕೇಂದ್ರ ಸರ್ಕಾರದ ಮೇಲೆ ಹಾಕ್ತಿದ್ದಾರೆ. ಆದರೆ, ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ನೀರುಬಿಟ್ಟಿದ್ದಾರೆ. ಆರಂಭದಲ್ಲಿಯೇ 10 ಸಾವಿರ ಕ್ಯೂಸೆಕ್ ನೀರು ಬಿಟ್ಟುರು. ನೀರು ಬಿಟ್ಟ ಮೇಲೆ ಸಭೆ ಮಾಡಿದರು. ನಿನ್ನೆ ಮತ್ತೆ ನೀರು ಬಿಡಬೇಕು ಎಂದು ಕಾವೇರಿ ನದಿ ನೀರು ಸಮಿತಿ ಹೇಳಿರುವುದು ದುರ್ದೈವದ ಸಂಗತಿ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸತತವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸರಿಯಾಗಿ ವಾದ ಮಾಡದೇ ವ್ಯತಿರಿಕ್ತವಾಗಿ ಆದೇಶ ಪಡೆದಿದ್ದಾರೆ. ನಿನ್ನೆ ಮತ್ತೆ 3 ಸಾವಿರ ಕ್ಯೂಸೆಕ್ ಬಿಡಿ ಅಂತಾ ಆರ್ಡರ್ ಬಂದಿದೆ. ಡಿ.ಕೆ. ಶಿವಕುಮಾರ್ ಅವರು ಈ ಆರ್ಡರ್ ಖುಷಿ ಬಂದಿದೆ ಅಂತಾರೆ. ಇಲ್ಲಿನ ವಸ್ತುಸ್ಥಿತಿ ಅವಲೋಕಿಸುವಂತೆ ಸ್ಥಳ ಪರಿಶೀಲನೆ ಮಾಡುವಂತೆ ಅರ್ಜಿ ಹಾಕಬೇಕು. ಕ್ಷೇತ್ರ ಅಧ್ಯಯನ ಆಗಬೇಕು ಎಂದರು.

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಕೊಡಲಿಲ್ಲ. ಈಗ ನಮ್ಮ ಜಲಾಶಯಗಳು ಖಾಲಿಯಾಗಿವೆ. ಮುಂದೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರಮೋದಿ ಮಧ್ಯೆ ಪ್ರವೇಶಿಸಿ, ಬಿಕ್ಕಟ್ಟು ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪದೇ ಪದೇ ಹೇಳುತ್ತಿದ್ದಾರೆ. ಹಿಂದಿನ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಮಧ್ಯೆ ಪ್ರವೇಶಿಸಿದರೂ ಫಲಪ್ರದವಾಗಿದೆ.

ಈ ವಿಷಯ ಗೊತ್ತಿದ್ದೂ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮೋದಿ ಪ್ರವೇಶದ ಬಗ್ಗೆ ಪ್ರಸ್ತಾಪಿಸಿ, ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ