ಬೆಂಗಳೂರು : ಇಂಡಿಯಾ ಒಕ್ಕೂಟಕ್ಕೆ ಮಾತುಕತೆ ಮಾಡಲು ಆಗುತ್ತದೆ. ಆದರೆ ಕಾವೇರಿ ವಿಚಾರಕ್ಕೆ ಮಾತಾಡಲು ಸಾಧ್ಯವಿಲ್ಲವೇ ಎಂದು ಸರ್ಕಾರದ ವಿರುದ್ಧ ಕರವೇ ಸಂಘಟನೆಯ ಪ್ರವೀಣ್ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಪರ ಹೋರಾಟಗಾರರಿಗೆ ನೋಟಿಸ್ ನೀಡಿದ ಹಿನ್ನೆಲೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಸರ್ಕಾರ ಪೊಲೀಸರ ಮೂಲಕ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಕನ್ನಡ ಹೋರಾಟಗಾರು ಗೂಂಡಗಳಲ್ಲ, ಅವರು ಯಾವುದೇ ಬಸ್ಗಳಿಗೆ ಬೆಂಕಿ ಹಾಕಿಲ್ಲ. ಅಂಗಡಿಗಳ ಮೇಲೆ ದಾಳಿ ಮಾಡಿಲ್ಲ. ಆದರೂ ಸರ್ಕಾರ ನೋಟಿಸ್ ನೀಡಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಕಾವೇರಿ ನಮ್ಮ ಮಹಾರಾಜರ ಶ್ರಮದಿಂದ ಕಟ್ಟಿದ್ದು, ಕಾವೇರಿ ಕೊಳ್ಳದಲ್ಲೇ ಅನೇಕ ತಾಲೂಕುಗಳು ಬರದಲ್ಲಿ ಬಳಲುತ್ತಿವೆ. ಆದರೆ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡಲಾಗುತ್ತಿದೆ. ನಮಗೆ ಕುಡಿಯಲು ನೀರಿಲ್ಲ. ತಮಿಳರು ಸಮುದ್ರಕ್ಕೆ ನೀರು ಹರಿಸುತ್ತಿದ್ದಾರೆ. ಈ ವೇಳೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತಿದ್ದೇನೆ. ಬಣ ರಾಜಕೀಯದಿಂದ ಈ ವಿಚಾರ ಮುನ್ನೆಲೆಗೆ ಬರುತ್ತಿಲ್ಲ. ಶೀಘ್ರ ಸುಗ್ರವಾಜ್ಞೆ ಜಾರಿಗೆ ತಂದು, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಬೇಕು ಎಂದಿದ್ದಾರೆ.
ನಾವು ನಿಯಮ ಮೀರಿ ಬಂದ್ ಮಾಡುತ್ತಿಲ್ಲ. ಕೊವೀಡ್ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ನಾವು ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದು ಗೊತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಇದರ ಬೆಲೆ ತೆರಬೇಕಾಗುತ್ತದೆ. ಏನೇ ಆದರೂ ಹೋರಾಟವನ್ನು ಕೈಬಿಡುವುದಿಲ್ಲ ಹೋರಾಟವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.