Mysore
22
light rain

Social Media

ಸೋಮವಾರ, 23 ಫೆಬ್ರವರಿ 2026
Light
Dark

ಕಾಂಗ್ರೆಸ್ ಸೇರ್ಪಡೆ ಖಚಿತಪಡಿಸದ ಜಗದೀಶ ಶೆಟ್ಟರ್: ಬೆಂಗಳೂರಿನತ್ತ ಪ್ರಯಾಣ

ಹುಬ್ಬಳ್ಳಿ: ಬಿಜೆಪಿ ಟಿಕೆಟ್ ವಂಚಿತ ಶಾಸಕ ಜಗದೀಶ ಶೆಟ್ಟರ್ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತು ಇನ್ನೂ ಖಚಿತಪಡಿಸಿಲ್ಲ.

ಶಾಸಕ ಸ್ಥಾನಕ್ಕೆ ಶಿರಸಿಯಲ್ಲಿ ರಾಜೀನಾಮೆ ಸಲ್ಲಿಸಿ ಹುಬ್ಬಳ್ಳಿಗೆ ವಾಪಸ್ಸಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ತೆರಳಿದ ಬಳಿಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಬಗ್ಗೆ ಮತ್ತು ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದರು.

ಕಡೆ ಗಳಿಗೆಯಲ್ಲಿ ನನಗೆ ಕರೆ ಮಾಡಿದ್ದ ಪಕ್ಷದ ವರಿಷ್ಠರು ರಾಜ್ಯಸಭಾ ಸ್ಥಾನಕ್ಕೆ ಆಯ್ಕೆ ಮಾಡುವುದಾಗಿ ಹೇಳಿದ್ದರು. ಆರು ಸಲ ಶಾಸಕನಾದವನು ರಾಜ್ಯಸಭಾ ಸದಸ್ಯನಾಗಿ ಮೂಲೆಯಲ್ಲಿ ಕೂರಲು ಸಾಧ್ಯವೇ? ಒಂದು ಟಿಕೆಟ್ ಕೊಡಲು ಇಷ್ಟೆಲ್ಲಾ ಸತಾಯಿಸುತ್ತಿರುವುದು ನೋವು ತಂದಿದೆ. ನಾನು ಚುನಾವಣೆಗೆ ಸ್ಪರ್ಧಿಸುವುದಂತೂ ಖಚಿತ. ಪಕ್ಷೇತರವೋ ಅಥವಾ ಕಾಂಗ್ರೆಸ್ ನಿಂದಲೋ ಎಂಬುದನ್ನು ಬೆಂಗಳೂರಿನಲ್ಲಿ ತಿಳಿಸುವೆ ಎಂದು ಹೇಳಿದರು.

ಎಷ್ಟು ದಿನ ಹಿಡಿದಿಟ್ಟುಕೊಳ್ಳಲು ಸಾಧ್ಯ: ಶೆಟ್ಟರ್ ಅವರು ಶಿರಸಿಗೆ ತೆರಳಿದ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಶೆಟ್ಟರ್ ಬೆಂಬಲಿಗರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿರುವುದೆರ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ನಾನು ಬೆಳೆಸಿದ ಹುಡುಗರು. ದೈಹಿಕವಾಗಿ ಹಿಡಿದಿಟ್ಟುಕೊಳ್ಳಬಹುದೇ ಹೊರತು ಮಾನಸಿಕವಾಗಿ ಅಲ್ಲ. ಆದರೂ, ಎಷ್ಟು ದಿನ ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂದರು. ನಂತರ ಬೆಂಗಳೂರಿಗೆ ಹೊರಟರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!