Mysore
31
few clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ನನ್ನ ಬಳಿ ಪೆನ್​ಡ್ರೈವ್​ ಇರುವುದು ಸತ್ಯ : ಲಕ್ಷ್ಮಣ ಸವದಿ

ಬೆಳಗಾವಿ : ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸಿಡಿಸಿದ್ದ ಪೆನ್​ಡ್ರೈವ್ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಕುಮಾರಸ್ವಾಮಿ ಅವರ ಪೆನ್ ಡ್ರೈವ್​ನಲ್ಲಿ ಏನಿರಬಹುದು ಎನ್ನುವ ಕುತೂಹಲ ಜನರಲ್ಲಿ ಇದ್ದರೆ, ಆಡಳಿತರೂಢ ಸರ್ಕಾರಕ್ಕೆ ಆತಂಕಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸಹ ಪೆನ್​ಡ್ರೈವ್ ಬಾಂಬ್ ಸಿಡಿಸಿದ್ದಾರೆ.

ಇಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ನನ್ನ ಬಳಿ ಪೆನ್​ಡ್ರೈವ್​ ಇರುವುದು ಸತ್ಯ. ಯಾರು ಏನೇನು ಕುತಂತ್ರ ಮಾಡುತ್ತಿದ್ದರು ಎಂಬ ಕುರಿತ ಪೆನ್​ಡ್ರೈವ್ ​ನನ್ನ ಬಳಿ ಇದೆ ಎಂದು ಹೇಳಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಠಿಸಿದ್ದಾರೆ.

ಯಾರ್ಯಾರು ಪಕ್ಷದಲ್ಲಿ ಕಾಲು ಎಳೆಯುವ ಕೆಲಸ ಮಾಡುತ್ತಿದ್ದರು. ಏನೇನು ಇತ್ತು ಎನ್ನುವುದಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ನನ್ನ ಹತ್ತಿರ ಇದೆ. ಆದರೆ, ಯಾರಾದರೂ ಸವಾಲು ಹಾಕಿದರೆ ಹಾಗೇ ತೋರಿಸುವಂತೆ ಹಠ ಹಿಡಿದರೆ ಸಂದರ್ಭ ಬಂದಾಗ ಪೆನ್​ಡ್ರೈವ್​ ತೋರಿಸುವೆ. ಅದನ್ನ ತೋರಿಸಿದ ಮೇಲೆ ಯಾರದ್ದು ಅಂತಾ ಗೊತ್ತಾಗುತ್ತೆ ಎಂದು ಹೇಳಿದರು. ಇದರೊಂದಿಗೆ ಬಿಜೆಪಿಯಲ್ಲಿದ್ದಾಗ ತಮಗೆ ಯಾರೆಲ್ಲಾ ಏನೆಲ್ಲ ಮಾಡಿದ್ದಾರೆ ಅದೆಲ್ಲ ಪೆನ್​ಡ್ರೈವ್​ನಲ್ಲಿದೆ ಎನ್ನುವ ಅರ್ಥದಲ್ಲಿ ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್​ನವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರ ಬೇನಾಮಿಗಳನ್ನು ಬೇನಾಮಿ ಎನ್ನದೇ ಇನ್ನು ಏನನ್ನಬೇಕು? ಕುಮಾರಸ್ವಾಮಿ ಪೆನ್ ಡ್ರೈವ್ ಬಿಟ್ಟ ಮರು ಕ್ಷಣವೇ ನಾನು ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಅವರು ಬುಟ್ಟಿಯಲ್ಲಿ ಹಾವಿದೆ ಹಾವಿದೆ ಅಂತಿದ್ದಾರೆ. ಹಾಗಾದರೆ ನಮ್ಮ ಬುಟ್ಟಿಯಲ್ಲೂ ಹಾವಿದೆ. ಅವರ ಪೆನ್ ಡ್ರೈವ್ ನಲ್ಲಿ ಏನಿದೆಯೋ ಅದಕ್ಕೆ ಸರಿಸಮನಾಗಿ ನಮ್ಮ ಪೆನ್ ಡ್ರೈವ್ ನಲ್ಲೂ ದಾಖಲೆ ಇದೆ ಎಂದು ಹೇಳಿದರು.

ನನಗೆ ಬಿಜೆಪಿ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್​ಗೆ ಸೇರಿದ್ದೇನೆ. ನನಗೆ ಬಿಜೆಪಿ ಮಾಡಿದ ಅವಮಾನ ರೀತಿ ಆಗಬಾರದು ಗೌರವದಿಂದ ನಡೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್‌ಗೆ ಬಂದಿದ್ದೇನೆ. ನನ್ನ ಕ್ಷೇತ್ರಕ್ಕೆ ನೀರಾವರಿ ಯೋಜನೆ ನೀಡಬೇಕು ಎಂದಿದ್ದೆ. ಕ್ಷೇತ್ರದ ಜನತೆ ಬಹಳ ದೊಡ್ಡ ಋಣ ನನ್ನ ಮೇಲಿದೆ. ಕಾಗವಾಡ ಶಾಸಕ ರಾಜು ಕಾಗೆ, ನಾನು ಸಿಎಂ ಹಾಗೂ ಡಿಸಿಎಂ ಮುಂದೆ ಮಹತ್ವದ ಬೇಡಿಕೆ ಮಂಡಿಸುತ್ತೇವೆ, ಕಾಗವಾಡ ಶಾಸಕ ರಾಜು ಕಾಗೆ, ನಾನು ಮಹತ್ವದ ಬೇಡಿಕೆ ಮಂಡಿಸುತ್ತೇವೆ. ರಾಜು ಕಾಗೆ, ನಾನು ಜೋಡೆತ್ತಾಗಿ ಕಾರ್ಯ ಮಾಡುತ್ತೇವೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!