Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಧಿಕಾರ ನಡೆಸಲು ಮಾತ್ರ ಯಡಿಯೂರಪ್ಪಗೆ ವಯಸ್ಸಾಗಿತ್ತೇ: ಕಾಂಗ್ರೆಸ್‌ ಕಿಡಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಶುರು ಮಾಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದ್ದು, ವಯಸ್ಸಿನ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಬಿ.ಎಸ್‌ ಯಡಿಯೂರಪ್ಪ ಅವರನ್ನು ಬಿಜೆಪಿ ಟಿಶ್ಯು ಪೇಪರ್‌ ಎಂದುಕೊಂಡಿದೆಯೇ ಎಂದು ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬಿಎಸ್‌ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ, ಪದಚ್ಯುತಿಗೊಳಿಸಿದ ಬಳಿಕ ವಯಸ್ಸಿನ ಕಾರಣವನ್ನು ಬಿಜೆಪಿ ನೀಡಿತ್ತು. ಈಗ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರೀಡಂ ಪಾರ್ಕ್‌ನಲ್ಲಿ ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು. ಅಧಿಕಾರ ನಡೆಸಲು ಮಾತ್ರ ಬಿ.ಎಸ್‌ ಯಡಿಯೂರಪ್ಪ ಅವರಿಗೆ ವಯಸ್ಸಾಗಿತ್ತೇ. ಈಗ ಅವರಿಗೆ ಹದಿನೆಂಟರ ಹರೆಯವೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.

ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಬಿಎಸ್‌ ಯಡಿಯೂರಪ್ಪ ಅವರನ್ನು ಬಿಜೆಪಿ ಟಿಶ್ಯು ಪೇಪರ್ ಎಂದುಕೊಂಡಿದೆಯೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಅದಲ್ಲದೇ ಒಬ್ಬ ವಿರೋಧ ಪಕ್ಷದ ನಾಯಕನನ್ನು ಬಿಜೆಪಿಗೆ ಆಯ್ಕೆ ಮಾಡಲು ಆಗಿಲ್ಲ. ತಾನೇ ರಾಜಕೀಯದಿಂದ ದೂರ ತಳ್ಳಿದ್ದ ಬಿಎಸ್‌ ಯಡಿಯೂರಪ್ಪ ಅವರನ್ನೇ ಮತ್ತೆ ಆಶ್ರಯಿಸಿದ್ದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ. ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ