Mysore
21
scattered clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಚೆಕ್‌ ಪೋಸ್ಟ್‌ನಲ್ಲಿ ತೀವ್ರ ಶೋಧ, 30 ಟನ್‌ ಅಕ್ಕಿ, 1.41 ಲಕ್ಷ ರೂ. ನಗದು, 55 ಲೀಟರ್‌ ಮದ್ಯ ವಶ

ರಾಮನಗರ : ಜಿಲ್ಲೆಯ ಗಡಿಭಾಗ ಕೋಲೂರು ಗ್ರಾಮದ ಬಳಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಇಲಾಖೆ ತಪಾಸಣೆಯನ್ನು ಚುರುಕುಗೊಳಿಸಿದ್ದು, ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 30 ಟನ್‌ ಅಕ್ಕಿ ಮತ್ತು 1.41 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 30 ರ ಮಧ್ಯಾಹ್ನ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಕ್ಯಾಂಟರ್‌ನಲ್ಲಿಅಕ್ರಮವಾಗಿ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಅಕ್ಕಿಯ ಬಗ್ಗೆ ಕ್ಯಾಂಟರ್‌ ಚಾಲಕ ದಾಖಲೆ ನೀಡಲು ವಿಫಲಗೊಂಡಿದ್ದಾನೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಚಾಲಕ ಪರಾರಿಯಾಗಿದ್ದು, ಅಕ್ಕಿ ಚೀಲಗಳ ಸಮೇತ ಕ್ಯಾಂಟರ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಪಡಿತರ ಅಕ್ಕಿ ಕಾಳಸಂತೆ : ಕ್ಯಾಂಟರ್‌ನಲ್ಲಿ 50 ಕೆ.ಜಿ.ತೂಕದ 600 ಚೀಲ ಅಕ್ಕಿ ಇದ್ದು, ಇದರ ಬೆಲೆ ಸುಮಾರು 16.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಳವಳ್ಳಿಯಿಂದ ಬೆಂಗಳೂರಿಗೆ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದು, ಮೇಲ್ನೋಟಕ್ಕೆ ಪಡಿತರ ಅಕ್ಕಿ ಎಂದು ಶಂಕಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟಮಾಡಲು ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್‌ ಚಾಲಕ ತಮಿಳುನಾಡು ಮೂಲದ ಸತೀಶ್‌ ಮತ್ತು ಕ್ಯಾಂಟರ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

55 ಲೀಟರ್‌ ಮದ್ಯ ವಶ : ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 55 ಲೀಟರ್‌ ಮದ್ಯವನ್ನು ಚನ್ನಪಟ್ಟಣ ತಾಲೂಕಿನ ವಿವಿಧೆಡೆ ದಾಳಿಮಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣಾ ಹಿನ್ನಲೆ, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಹೈ ಅಲರ್ಟ್‌ ಆಗಿದ್ದಾರೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ದಾಳಿಮಾಡಿರುವ ಪೊಲೀಸರು ಇದುವರೆಗೆ 55 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

1.41 ಲಕ್ಷ ರೂ ನಗದು ವಶಕ್ಕೆ : ಯಾವುದೇ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 1.41 ಲಕ್ಷ ರೂ. ಹಣವನ್ನು ಚುನಾವಣಾ ಕರ್ತವ್ಯದಲ್ಲಿ ನಿತರವಾಗಿದ್ದ ವಿಶೇಷ ತಂಡ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕೋಲೂರು ಚೆಕ್‌ಪೋಸ್ಟ್‌ ಬಳಿ ನಡೆದಿದೆ.

ವ್ಯಕ್ತಿ ವಿರುದ್ಧ ಪ್ರಕರಣ ದಾಖಲು : ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿರುವ ವಿಶೇಷ ಕಾರ್ಯಾಚರಣೆ ತಂಡ ಚೆಕ್‌ಪೋಸ್ಟ್‌ ಬಳಿ ಅಶೋಕ್‌ ಲೈಲ್ಯಾಂಡ್‌ ಗೂಡ್ಸ್‌ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ, ವಾಹನದಲ್ಲಿದ್ದ ಯುಕನ ಬಳಿ 1.41 ಲಕ್ಷ ರೂ. ಪತ್ತೆಯಾಗಿದೆ. ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣ ಹೊಂದಿದ್ದ ತಾಲೂಕಿನ ಮಳೂರು ಪಟ್ಟಣ ಗ್ರಾಮದ ರಕ್ಷಿತ್‌ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೂಕ್ತ ದಾಖಲೆ ಇಲ್ಲದ 36 ಲಕ್ಷ ರೂ. ವಶ : ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ ತಾಲೂಕಿನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 36 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿರುವ ಘಟನೆ ಮಾರ್ಚ್ 30 ರಂದು ಲಕ್ಕವಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗದಿಂದ ರಂಗೇನಹಳ್ಳಿ ಕಡೆಗೆ ತೆರಳುತ್ತಿದ್ದ ಕಾರನ್ನು ಎಂ.ಎನ್‌.ಕ್ಯಾಂಪ್‌ ಬಳಿ ಚುನಾವಣೆ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆಗೆ ಒಳಪಡಿಸಿದಾಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆಯಾಗಿದೆ. ಈ ಬಗ್ಗೆ ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!