Mysore
20
broken clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಮಣಿಪುರದಲ್ಲಿಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ : ನಾಲ್ವರ ಬಂಧನ

ಇಂಫಾಲ್ : ಜುಲೈನಲ್ಲಿ ಮಣಿಪುರದಲ್ಲಿ ನಡೆದ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ನಾಲ್ವರನ್ನು ಬಂಧಿಸಿದೆ. ಅಲ್ಲದೇ ಇಬ್ಬರನ್ನು ವಶಕ್ಕೆ ಪಡೆದಿದ್ದು, ಅವರ ಫೋಟೋ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಬಂಧನಕ್ಕೊಳಗಾದ ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ.ಬಂಧಿತ ನಾಲ್ವರನ್ನು ಅಸ್ಸಾಂನ ಗುವಾಹಟಿಗೆ ರವಾನಿಸಲಾಗಿದೆ.

ಆರೋಪಿಗಳನ್ನು ಪಾವೊಮಿನ್ಲುನ್ ಹಾಕಿಪ್, ಮಲ್ಸಾವ್ನ್ ಹಾಕಿಪ್, ಲಿಂಗ್ನಿಚಾಂಗ್ ಬೈಟ್ ಮತ್ತು ತಿನ್ನೆಖೋಲ್ ಎಂದು ಗುರುತಿಸಲಾಗಿದೆ. ಲಿಂಗ್ನೀಚಾಂಗ್ ಬೈಟ್ ಕೊಲೆಯಾದ ವಿದ್ಯಾರ್ಥಿನಿಯ ಸ್ನೇಹಿತ. ಶಂಕಿತರಲ್ಲಿ ಒಬ್ಬಾಕೆ ಚುರಾಚಂದ್‌ಪುರ ಮೂಲದ ದಂಗೆಕೋರ ಗುಂಪಿನ ವ್ಯಕ್ತಿಯೊಬ್ಬನ ಪತ್ನಿ ಎಂದು ಹೇಳಲಾಗಿದೆ. ಮಣಿಪುರ ಪೋಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಕ್ರ್ಯಾಕ್ ಘಟಕವು ಶಂಕಿತರನ್ನು ಇಂಫಾಲ್‌ನಿಂದ 51 ಕಿಮೀ ದೂರದಲ್ಲಿರುವ ಬೆಟ್ಟದ ಜಿಲ್ಲೆ ಚುರಚಂದ್‌ಪುರದಿಂದ ಸೆರೆಹಿಡಿದಿದೆ.

ಪ್ರಕರಣ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು, ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪರಾಧಿಗಳನ್ನು ಬಂಧಿಸಲಾಗಿದೆ. ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಚುರಚಂದ್‌ಪುರದಿಂದ ಬಂಧಿಸಿರುವುದು ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.

ಜುಲೈ 6 ರಂದು ಮಣಿಪುರದ ಇಬ್ಬರು ಯುವಕರು ನಾಪತ್ತೆಯಾಗಿದ್ದರು. ಸೆಪ್ಟೆಂಬರ್ 25 ರಂದು ಈಶಾನ್ಯ ರಾಜ್ಯದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದವು. ಕಾಣೆಯಾಗಿದ್ದ ಫಿಜಾಮ್ ಹೇಮಾನ್‌ಜಿತ್ ಮತ್ತು ಹಿಜಾಮ್ ಲಿಂಥೋಯಿಂಗಂಬಿ ಅವರ ಪಾರ್ಥಿವ ಶರೀರವನ್ನು ತೋರಿಸುವ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಇದರಿಂದ ಮಣಿಪುರದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!