Mysore
16
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಹಿಂದಿ ರಾಷ್ಟ್ರ ಭಾಷೆ: ಸುಪ್ರೀಂಕೋರ್ಟ್ ನ್ಯಾ. ದೀಪಂಕರ್‌ ದತ್ತಾ ಹೇಳಿಕೆ

ನವದೆಹಲಿ : ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಸಾಕ್ಷಿದಾರರಿಗೆ ಉತ್ತರ ಪ್ರದೇಶದ ನ್ಯಾಯಾಲಯದ ಮುಂದೆ ಹಿಂದಿಯಲ್ಲಿ ಸಾಕ್ಷ್ಯ ನುಡಿಯುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

”ಭಾರತವು ವಿವಿಧ ಜಾತಿ, ಧರ್ಮ, ಭಾಷೆಗಳನ್ನು ಹೊಂದಿರುವ ದೇಶ. ಪ್ರದೇಶವಾರು ಭಿನ್ನ ಭಾಷೆಗಳು ಅಸ್ತಿತ್ವದಲ್ಲಿವೆ. 22 ಅಧಿಕೃತ ಭಾಷೆಗಳಿವೆ. ಆದರೆ ಹಿಂದಿ ರಾಷ್ಟ್ರ ಭಾಷೆ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಸಾಕ್ಷಿದಾರರು ಹಿಂದಿಯಲ್ಲಿ ಹೇಳಿಕೆಗಳನ್ನು ನೀಡಬೇಕು,” ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ದೀಪಂಕರ್‌ ದತ್ತಾ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ್ದಾರೆ.

ಉತ್ತರ ಪ್ರದೇಶದ ಫರೂಕಾಬಾದ್‌ನ ವಾಹನ ಅಪಘಾತ ಪರಿಹಾರ ಪ್ರಾಧಿಕಾರದಲ್ಲಿ (ಎಂಎಸಿಟಿ) ಬಾಕಿ ಇರುವ ಪ್ರಕರಣಗಳನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿರುವ ಎಂಎಸಿಟಿಗೆ ವರ್ಗಾಯಿಸಬೇಕು ಎಂದು ಕೋರಿ ಪ್ರಮೋದ್‌ ಸಿನ್ಹಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ದೀಪಂಕರ್‌ ದತ್ತಾ ಅವರು ಈ ಆದೇಶ ಹೊರಡಿಸಿದರು.
‘ಹಿಂದಿ ರಾಷ್ಟ್ರಭಾಷೆ’ ಎಂದು ಹೇಳಿರುವ ನ್ಯಾಯಮೂರ್ತಿಯ ಅಭಿಪ್ರಾಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಸಂವಿಧಾನದಲ್ಲಿ ಎಲ್ಲಿಯೂ ‘ರಾಷ್ಟ್ರಭಾಷೆ’ ಬಗ್ಗೆ ಉಲ್ಲೇಖವಿಲ್ಲ. ಹಿಂದಿ ಸೇರಿದಂತೆ 22 ಭಾಷೆಗಳನ್ನು ಅಧಿಕೃತ ಭಾಷೆ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಹಿಂದಿ ರಾಷ್ಟ್ರಭಾಷೆ ಎಂದು ಸ್ವತಃ ನ್ಯಾಯಮೂರ್ತಿಯೇ ಹೇಳಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದಾರೆ.
”ಸಿಲಿಗುರಿಯಲ್ಲಿ ಅಪಘಾತ ನಡೆದಿರುವ ಕಾರಣ ಡಾರ್ಜಿಲಿಂಗ್‌ನ ಎಂಎಸಿಟಿಯಲ್ಲಿ ವಿಚಾರಣೆ ನಡೆದರೆ ಅನುಕೂಲವಾಗುತ್ತದೆ. ಈ ಪ್ರಕರಣದಲ್ಲಿ ಎಲ್ಲಾ ಸಾಕ್ಷಿದಾರರು ಸಿಲಿಗುರಿಯವರೇ ಆಗಿರುವುದರಿಂದ ಫರೂಕಾಬಾದ್‌ನ ಎಂಎಸಿಟಿಯಲ್ಲಿ ವಿಚಾರಣೆ ಎದುರಿಸಲು ಅವರಿಗೆ ‘ಹಿಂದಿ’ ಭಾಷೆಯ ಸಮಸ್ಯೆ ಎದುರಾಗಬಹುದು. ಹಾಗಾಗಿ, ಸಿಲಿಗುರಿಗೆ ಪ್ರಕರಣವನ್ನು ವರ್ಗಾಯಿಸಬೇಕು,” ಎಂದು ಪ್ರಮೋದ್‌ ಸಿನ್ಹಾ ಅರ್ಜಿಯಲ್ಲಿ ಕೋರಿದ್ದರು.

ಅರ್ಜಿದಾರರಿಗೆ ಸೂಚಿಸಲು ಸಾಧ್ಯವಿಲ್ಲ

ಉತ್ತರ ಪ್ರದೇಶದ ಫತೇಹಗಡದ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿಯಲ್ಲಿ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 166ರ ಅಡಿ ಸಿನ್ಹಾ ಅವರು ಪರಿಹಾರ ಅರ್ಜಿ ಸಲ್ಲಿಸಿದ್ದರು. ಸಿನ್ಹಾ ಅವರ ಅಪಘಾತಕ್ಕೀಡಾದ ವಾಹನದ ಮಾಲೀಕರು. ಸಿಲಿಗುರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಪರಿಹಾರ ಅರ್ಜಿಯನ್ನು ನಿರ್ಧರಿಸುವ ಪ್ರಕ್ರಿಯೆಯು ಡಾರ್ಜಿಲಿಂಗ್‌ನ ಎಂಎಸಿಟಿಯಲ್ಲಿ ನಡೆಯಬೇಕು ಎನ್ನುವುದು ಪ್ರಕರಣದ ವರ್ಗಾವಣೆಗೆ ಮಾಡಿರುವ ಮನವಿಯ ಪ್ರಾಥಮಿಕ ಅಂಶ ಎಂದು ಕೋರ್ಟ್ ಪರಿಗಣಿಸಿತು.

ಆದರೆ, ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಹಕ್ಕುದಾರನು ಎಲ್ಲಿ ಅಪಘಾತ ಸಂಭವಿಸಿದೆಯೋ ಆ ವ್ಯಾಪ್ತಿಯಲ್ಲಿ ಬರುವ ಎಂಎಸಿಟಿಯ ಮುಂದೆಯೇ ಸೆಕ್ಷನ್ 166ರ ಅಡಿ ಅರ್ಜಿ ಸಲ್ಲಿಸಬೇಕು ಎಂದು ಕಾಯ್ದೆಯ ನಿಯಮಗಳು ಕಡ್ಡಾಯಗೊಳಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಇದಕ್ಕೆ ವಿರುದ್ಧವಾಗಿ, ಸೆಕ್ಷನ್ 166ರ ಉಪ ಸೆಕ್ಷನ್ (2), ಹಕ್ಕುದಾರರು ತಾವು ವಾಸಿಸುವ ಪ್ರದೇಶದ ವ್ಯಾಪ್ತಿಯ ಅಥವಾ ಪ್ರತಿವಾದಿ ವಾಸಿಸುವ ಸ್ಥಳೀಯ ಮಿತಿಯಲ್ಲಿನ ಎಂಎಸಿಟಿಯನ್ನು ಸಂಪರ್ಕಿಸುವ ಅವಕಾಶ ಹೊಂದಿದ್ದಾರೆ. ದೂರುದಾರರು ಫರೂಕಾಬಾದ್‌ ಎಂಎಸಿಟಿಯನ್ನು ಸಂಪರ್ಕಿಸುವ ಆಯ್ಕೆ ಮಾಡಿಕೊಂಡಿದ್ದರು. ಈ ಆಯ್ಕೆಗೆ ಕಾನೂನು ಅವರಿಗೆ ಅವಕಾಶ ನೀಡಿದೆ. ಹೀಗಾಗಿ ಈ ಸಂಬಂಧ ಅರ್ಜಿದಾರರು ಯಾವುದೇ ಅಹವಾಲು ಸಲ್ಲಿಸುವಂತೆ ಇಲ್ಲ ಎಂದು ಪೀಠ ತಿಳಿಸಿದೆ. ವಿಶೇಷವೆಂದರೆ ದತ್ತಾ ಅವರೂ ಪಶ್ಚಿಮ ಬಂಗಾಳದವರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!