ಬಾಗಲಕೋಟೆ : ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಯೊಬ್ಬನಿಗೆ ಹೃದಯಾಘಾತ ಸಂಭವಿಸಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಜಮಖಂಡಿ ತಾಲ್ಲೂಕಿನ ಇನಾಂ ಹಂಚಿನಾಳ ಪುನರ್ವಸತಿ ಕೇಂದ್ರದ ನಿವಾಸಿಯಾದ ವಿದ್ಯಾರ್ಥಿ ರಾಹುಲ್ ವಿಠ್ಠಲ ಕೋಲಕಾರ (15) ಸಾವನ್ನಪ್ಪಿರುವ ದುರ್ದೈವಿ.
ರಾಹುಲ್ ವಿಠ್ಠಲ ಹುಲ್ಯಾಳ ಗ್ರಾಮದ ಶ್ರೀ ಗುರು ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ಶಾಲೆಯಲ್ಲಿ ಆತನಿಗೆ ಅರ್ಧ ವಾರ್ಷಿಕ ಪರೀಕ್ಷೆಯನ್ನು ಬರೆಯುವ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಅಲ್ಲಿರುವ ಶಿಕ್ಷಕರು ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ರಾಹುಲ್ ವಿಠ್ಠಲ ಕೋಲಕಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇನ್ನು ಸಾವಿಗೀಡಾಗಿರುವ ವಿದ್ಯಾರ್ಥಿಗೆ ಹೃದಯಸಂಬಂಧಿ ಕಾಯಿಲೆ ಇತ್ತು ಎಂದು ಹೇಳಲಾಗ್ತಿದೆ.





