Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

ರಾಜಕಾರಣ ಸಾಕಾಗಿದೆ : ಮತ್ತೆ ವೈರಾಗ್ಯದ ಮಾತನಾಡಿದ ಡಿಕೆ ಸುರೇಶ್‌

ರಾಮನಗರ : ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು. ಯಾರೂ ಸೂಕ್ತ ಅಂತ ಅವರು ತೀರ್ಮಾನ ಮಾಡಿದರೆ ಅವರಿಗೆ ಬೆಂಬಲ ಕೊಡ್ತೀನಿ. ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ ಎಂದು ಸಂಸದ ಡಿಕೆ ಸುರೇಶ್‌ ಹೇಳಿದ್ದಾರೆ. ಈ ಮೂಲಕ ಮತ್ತೊಂದು ಬಾರಿ ಡಿಕೆ ಸುರೇಶ್‌ ರಾಜಕೀಯದ ವೈರಾಗ್ಯದ ಮಾತನಾಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಉದ್ದೇಶ ಎಂದ ಅವರು, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ ಬಿಟ್ಟು ಬೇರೆ ಏನೂ ಬರಲ್ಲ. ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯ ಇದೆ, ನಾನು ಅಭಿವೃದ್ಧಿ ಕಡೆ ಗಮನಕೊಟ್ಟಿದ್ದೀನಿ ಎಂದರು.

ಡಿಕೆ ಸುರೇಶ್ ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಹೊಂದಾಣಿಕೆ ಮಾಡಿಕೊಳ್ಳಲಿ, ಯಾರು ಬೇಕಾದ್ರೂ ನಿಲ್ಲಲಿ. ನನಗಿರೋದು ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನು ಯಾರಿಗೆ ಹಾಕಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಸಾರ್ವಜನಿಕರ ವಿತರಣೆಗೆ ಅಕ್ಕಿ ಇರುವುದು ಆದರೆ, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚುಕೊಳ್ತಿದೆ. ಎಷ್ಟೋ ಸಾರಿ ಅಕ್ಕಿ ಕೆಟ್ಟುಹೋಗಿ ನಷ್ಟ ಆಗಿದೆ. ರಾಜ್ಯ ಸರ್ಕಾರ ಉಚಿತವಾಗಿ ಏನೂ ಅಕ್ಕಿ ಕೇಳ್ತಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲೇ ಕೊಡಿ ಅಂತ ಕೇಳ್ತಿದ್ದೇವೆ. ನಾವು ಅಕ್ಕಿ‌ ಕೇಳ್ತಿರೋದು ಬಡವರು, ಹಸಿದವರ ದೃಷ್ಟಿಯಿಂದ ಅನ್ನ ಕೊಡಿ ಅಂತಿದ್ದೇವೆ. ಇದು ಕೇಂದ್ರದ ಕಾರ್ಯಕ್ರಮವೂ ಇರಬಹುದು, ರಾಜ್ಯದ ಕಾರ್ಯಕ್ರಮವೂ ಇರಬಹುದು ಎಂದರು.

ಆಹಾರ ಭದ್ರತಾ ಕಾಯ್ದೆ ತಂದಿದ್ದೆ ಯುಪಿಎ ಸರ್ಕಾರ. ಆ ಕಾಯ್ದೆ ತರದಿದ್ದರೆ ದೇಶದ ಜನರಿಗೆ ಇವರು 5 ಕೆಜಿ ಅಕ್ಕಿ ಕೊಡುವುದಕ್ಕೆ ಆಗುತ್ತಿತ್ತಾ? ಹಿಂದೆ ಸಿದ್ದರಾಮಯ್ಯನವರು ಉಚಿತ ಅಕ್ಕಿ ಕೊಟ್ಟಿದ್ದರು. ಆಗಲೂ ಬಡವರ ಹಸಿವನ್ನ ನೀಗಿಸಿದ್ದೇವು. ಈಗಲೂ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತೆ. ಬಿಜೆಪಿಗೆ ಮತಹಾಕಿದರೂ ಅಕ್ಕಿ, ಜೆಡಿಎಸ್‌ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತದೆ. ಆದರೆ, ಹಸಿದ ವರ್ಗಕ್ಕೆ ಕೇಂದ್ರ ಅನ್ಯಾಯ ಮಾಡ್ತಿದೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ಬಡವರಿಗೆ ಅಕ್ಕಿಕೊಡಿ ಎಂದು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆಗೆ ಶಾಮಿಯಾನ ಹಾಕಿಕೊಡ್ತೀವಿ ಎಂದ ಮಾಜಿ ಸಚಿವ ಆರ್‌ ಅಶೋಕ್‌ಗೆ ಡಿಕೆ ಸುರೇಶ್ ಟಾಂಗ್ ನೀಡಿದ್ದು, ಆರ್‌ ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ. ಅವರು ಶಾಮಿಯಾನ ಹಾಕಿಸಿಕೊಟ್ಟರೆ ಸಂತೋಷ. ಅಲ್ಲೇ ಕೂತು ನಾವು ಪ್ರತಿಭಟನೆ ಮಾಡ್ತೀವಿ. ಎಲ್ಲ ಕಡೆಗಳಲ್ಲೂ ಶಾಮಿಯಾನ ಹಾಕಿಸಿಕೊಡಲಿ. ಬಿಜೆಪಿ ಸಂಸದರು ರಾಜ್ಯದ ಯಾವುದೇ ಸಮಸ್ಯೆ ಬಗ್ಗೆ ಅವರು ಧ್ವನಿ ಎತ್ತಿಲ್ಲ. ನಮ್ಮ ರಾಜ್ಯದ ಜಿಎಸ್‌ಟಿ, ಕೃಷ್ಣಾ ಯೋಜನೆ, ಪ್ರವಾಹ ಪರಿಹಾರದ ಬಗ್ಗೆ ಮಾತನಾಡಲ್ಲ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಅಗ್ತಿದೆ. ರಾಜ್ಯದ ಬಿಜೆಪಿ ಸಂಸದರು ಈ ಬಗ್ಗೆ ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಅವಧಿ ಯೋಜನೆಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸರ್ಕಾರದ ಕೆಲಸ ನನಗೆ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿರೋದನ್ನ ನಾನು ಹೇಳುತ್ತೇನೆ. ನಾನು ಹಿಂದೆಯೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೆ. ಲೋಕಾಯುಕ್ತರ ವರದಿ ಕೊಟ್ಟಿದ್ದಾರೆ. ಕಾಮಗಾರಿ ನಡೆಯದೇ ಹಣ ಡ್ರಾ ಮಾಡಿರೋದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಾದ್ರೂ ಕೊಡ್ತಿನಿ. 10 ದಿನದ ಮುಂಚೆ ಕೆಲಸ ಮಂಜೂರಾಗುತ್ತೆ‌, 15 ದಿನಕ್ಕೆ ಹಣ ಡ್ರಾ ಆಗುತ್ತೆ. ಅದನ್ನು ಪರಿಶೀಲನೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಿತ್ತು. ಈಗ ಅದರ ಬಗ್ಗೆ ಕ್ರಮ ಆಗಿದೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!