ಶಿವಮೊಗ್ಗ- ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಗಲಭೆ ಪೀಡಿತ ಶಿಕಾರಿಪುರಕ್ಕೆ ಅಕಾರಿಗಳ ಜೊತೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿಕಾರಿಪುರದಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ಕೆಲವು ಕ್ರಿಮಿನಲ್ ಹಿನ್ನಲೆಯುಳ್ಳವರು ಭಾಗಿಯಾಗಿದ್ದಾರೆಂದು ಕಂಡುಬಂದಿದೆ. ಜನತೆಯು ಸಹನೆಯಿಂದ ವರ್ತಿಸಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಸುಮ್ಮನಿರುವುದಿಲ್ಲ.ಲಂಬಾಣಿ ಸೇರಿದಂತೆ ಮತ್ತಿತರ ಸಮುದಾಯದವರು ತುಂಬ ಅಮಾಯಕರು. ಕೆಲವರು ಅವರ ಅಮಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಶಾಂತಿ ರೀತಿಯಿಂದ ವರ್ತಿಸಬೇಕು. ಯಾರೊಬ್ಬರೂ ಅತಿರೇಖಕ್ಕೆ ಒಳಗಾಗಬಾರದೆಂದು ಅವರು ಮನವಿ ಮಾಡಿದರು.
ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದ ಪೊಲೀಸರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಮೂವರಿಗೆ ತೀವ್ರತರವಾದ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆ ಮಾಡುವವರ ಮೇಲೆ ಈ ರೀತಿ ನಡೆದಿರುವುದು ತುಂಬ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕಾರಿಪುರದಲ್ಲಿ ಯಡಿಯೂರಪ್ಪನವರು ಯಾವುದೇ ಸಮುದಾಯಕ್ಕೂ ಎಂದಿಗೂ ಅನ್ಯಾಯ ಮಾಡಿಲ್ಲ. ಅವರು ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಂದು ಸಮುದಾಯಗಳನ್ನು ಅಭಿವೃದ್ಧಿ ಮಾಡಿದ್ದಾರೆ.
ವಿಶೇಷವಾಗಿ ಲಂಬಾಣಿ ಸಮುದಾಯದ ಧರ್ಮಗುರುಗಳ ಹುಟ್ಟೂರು ಸೂರುಗೊಂಡನಕೊಪ್ಪವನ್ನು ಅಭಿವೃದ್ಧಿಪಡಿಸಿ ಪ್ರತಿ ವರ್ಷ ಜನ್ಮ ದಿನಾಚರಣೆ, ಆರ್ಥಿಕ ನೆರವು, ಲಂಬಾಣಿ ತಾಂಡ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ರೀತಿಯಲ್ಲಿ ಆ ಸಮುದಾಯವನ್ನು ಸ್ವಾವಲಂಬಿಗೊಳಿಸುವ ಕೆಲಸ ಮಾಡಿದ್ದಾರೆ.
ಲಂಬಾಣಿ ಸಮುದಾಯಕ್ಕೆ ಯಾವುದೇ ಸಂದರ್ಭದಲ್ಲಿ ಅನ್ಯಾಯವಾಗುವಂತಹ ಕ್ರಮವನ್ನು ನಮ್ಮ ಸರ್ಕಾರ ತೆಗೆದುಕೊಂಡಿಲ್ಲ. ಸಚಿವ ಸಂಪುಟ ನಿರ್ಣಯದಂತೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ತಪ್ಪುಗಳ ಗ್ರಹಿಕೆಯಿಂದಾಗಿ ಈ ರೀತಿ ಗಲಭೆ ಉಂಟಾಗಿದೆ. ದಯಮಾಡಿ ಯಾರೊಬ್ಬರು ಪ್ರಚೋದನೆಗೊಳಗಾಗಬಾರದು. ನಿಮ್ಮ ರಕ್ಷಣೆಗೆ ಸರ್ಕಾರ ಬದ್ದವಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮುಕ್ತ ಮನಸ್ಸಿನಿಂದ ಚರ್ಚೆಗೆ ಸಿದ್ದ ಎಂದು ಹೇಳಿದ್ದಾರೆ. ಎಂಥ ಸಂದರ್ಭದಲ್ಲೂ ಕೂಡ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅಭಯ ನೀಡಿದರು.
ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಅನಿವಾರ್ಯ : ಗೃಹ ಸಚಿವ ಆರಗ ಜ್ಞಾನೇಂದ್ರ
