ಜೈಪುರ : ಕಾಂಗ್ರೆಸ್ ಪಕ್ಷ ಎಂದರೆ ‘ಲೂಟ್ ಕಿ ದುಕಾನ್’ (ಲೂಟಿಯ ಅಂಗಡಿ) ಮತ್ತು ‘ಝೂತ್ ಕಾ ಬಜಾರ್’ (ಸುಳ್ಳಿನ ಮಾರುಕಟ್ಟೆ) ಎಂದು ವಾಗ್ದಾಳಿ ನಡೆಸಿದರು.
ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುತ್ತದೆ ಎಂಬುದು ಎಂಬುದು ಸ್ಪಷ್ಟವಾಗಿದೆ, ಭ್ರಷ್ಟಾಚಾರ, ಅಪರಾಧ ಮತ್ತು ತುಷ್ಟೀಕರಣದ ರಾಜಕೀಯದ ವಿಚಾರಕ್ಕೆ ಬಂದಾಗ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಹೊಸ ಛಾಪನ್ನು ರೂಪಿಸಿಕೊಂಡಿದೆ ಎಂದು ಪ್ರಧಾನಿ ಆರೋಪಿಸಿದರು.
ಇಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿರಬೇಕಿತ್ತು. ಆದರೆ, ಇಂದು ಅದು ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿದೆ. ‘ಮಹಿಳೆಯರ ಮೇಲಿನ ಅಪರಾಧದ ವಿಷಯದಲ್ಲಿ, ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನವು ಅಗ್ರಸ್ಥಾನದಲ್ಲಿದೆ. ಇಲ್ಲಿ ರಕ್ಷಕರು ಭಕ್ಷಕರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಇಡೀ ಸರ್ಕಾರವು ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ರಕ್ಷಿಸುವಲ್ಲಿ ನಿರತವಾಗಿದೆ’ ಎಂದು ದೂರಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿದರೆ ಅದು ದೇಶವನ್ನು ಟೊಳ್ಳು ಮಾಡುತ್ತದೆ ಮತ್ತು ಅಧಿಕಾರದಿಂದ ಹೊರನಡೆದಾಗ ಅದು ನಿಂದಿಸುವ ಮೂಲಕ ದೇಶಕ್ಕೆ ಹಾನಿಯುಂಟುಮಾಡುತ್ತದೆ. ಅವರ ನಾಯಕರು ವಿದೇಶಕ್ಕೆ ಹೋಗಿ ಭಾರತವನ್ನು ನಿಂದಿಸುತ್ತಾರೆ ಎಂದು ಹೇಳಿದರು.
‘ಕಾಂಗ್ರೆಸ್ಗೆ ಒಂದೇ ಒಂದು ಅರ್ಥವಿದೆ. ಅದು ‘ಲೂಟ್ ಕಿ ದುಕಾನ್’ ಮತ್ತು ‘ಝೂತ್ ಕಾ ಬಜಾರ್’ ಎಂದ ಅವರು, ‘ನಫರತ್ ಕಾ ಬಜಾರ್’ನಲ್ಲಿ ‘ಮೊಹಬ್ಬತ್ ಕಿ ದುಕಾನ್’ (ಧ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಅನ್ನು ತೆರೆಯುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಸ್ಪಷ್ಟ ತಿರುಗೇಟು ನೀಡಿದರು.
ರಾಜಸ್ಥಾನ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಿದೆ ಮತ್ತು ಹೀಗಿರುವಾಗ ಅಧಿಕಾರದಲ್ಲಿರುವವರನ್ನು ಪದಚ್ಯುತಗೊಳಿಸಲು ಸಮಯ ತೆಗೆದುಕೊಳ್ಳುವುದಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲು ಎಷ್ಟು ಖಚಿತವಾಗಿದೆ ಎಂದರೆ ಅದರ ಸರ್ಕಾರವು ಈಗಾಗಲೇ ‘ಬೈ-ಬೈ ಮೋಡ್’ ಅನ್ನು ಪ್ರವೇಶಿಸಿದೆ ಎಂದು ಮೋದಿ ಹೇಳಿದರು.