Mysore
20
overcast clouds
Light
Dark

ಇಲಿ ಕೊಂದವನ ವಿರುದ್ಧ ಚಾರ್ಜ್‌ಶೀಟ್ : ಮರಣೋತ್ತರ ಪರೀಕ್ಷೆಯೇ ಆಧಾರ

ಉತ್ತರ ಪ್ರದೇಶ : ಇಲಿಯೊಂದನ್ನು ಇಟ್ಟಿಗೆಗೆ ಕಟ್ಟಿ ಹಾಕಿ ನೀರಿನಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಉತ್ತರ ಪ್ರದೇಶದ ಬದೌನ್ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ದ ಚಾರ್ಜ್‌ ಶೀಟ್ ದಾಖಲಿಸಿದ್ಧಾರೆ. 30 ವರ್ಷದ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಆರೋಪ ಪಟ್ಟಿ ದಾಖಲು ಮಾಡಿದ್ದಾರೆ. 2022ರ ನವೆಂಬರ್‌ನಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ ಎಂದು ಚಾರ್ಜ್ ಶೀಟ್‌ನಲ್ಲಿ ನಮೂದಿಸಲಾಗಿದೆ.

ಇಂಥಾದ್ದೊಂದು ವಿಚಿತ್ರ ಹಾಗೂ ವಿಲಕ್ಷಣ ಪ್ರಕರಣದ ಅಡಿ ವ್ಯಕ್ತಿಯೊಬ್ಬನ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಇದೇ ಮೊದಲ ಬಾರಿಗೆ ಆರೋಪ ಪಟ್ಟಿ ದಾಖಲು ಮಾಡಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ಧಾರೆ.

ವೃತ್ತಿಯಲ್ಲಿ ಕುಂಬಾರನಾಗಿರುವ ಆರೋಪಿ ಮನೋಜ್ ಕುಮಾರ್, ಪುಟ್ಟದೊಂದು ಮನೆಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದಾನೆ. ಕಳೆದ ವರ್ಷ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 429ರ ಅಡಿ ಪ್ರಕರಣ ದಾಖಲಾಗಿತ್ತು. ಕಿಡಿಗೇಡಿತನದಿಂದ ಪ್ರಾಣಿಯನ್ನು ಕೊಂದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (1) ರ ಅಡಿಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈತ ಇಟ್ಟಿಗೆಯೊಂದಕ್ಕೆ ಇಲಿಯನ್ನು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಲ್ಲುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಸತ್ತ ಇಲಿಯನ್ನು ಇಟ್ಟಿಗೆಯಲ್ಲಿ ಕಟ್ಟಿದ್ದ ದಾರದ ಸಮೇತ ಆರೋಪಿ ವಿಡಿಯೋದಲ್ಲಿ ತೋರಿಸಿದ್ದ. ಸಾಮಾಜಿಕ ಜಾಲತಾಣದ ವಿಡಿಯೋ ಆಧರಿಸಿ ಆರೋಪಿ ವಿರುದ್ಧ ಸ್ಥಳೀಯ ಪ್ರಾಣಿ ಹಕ್ಕು ಕಾರ್ಯಕರ್ತರು ನವೆಂಬರ್ 2022ರಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದರಾದರೂ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತ್ತು.

ಇದಾದ ಬಳಿಕ ವಿಡಿಯೋದಲ್ಲಿ ಕಂಡ ಇಲಿಯ ಶವವನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅದರ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಕೂಡಾ ಇಲಿಯನ್ನು ಮುಳುಗಿಸಿ ಕೊಲ್ಲಲಾಗಿದೆ ಎಂಬ ವರದಿ ಬಂದಿತ್ತು. ಈ ಮರಣೋತ್ತರ ಪರೀಕ್ಷಾ ವರದಿ, ವಿಡಿಯೋ ಸಾಕ್ಷ್ಯಾಧಾರ, ಸ್ಥಳೀಯರ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಆರೋಪಿ ವಿರುದ್ದ ಆರೋಪ ಪಟ್ಟಿ ಸಿದ್ದಪಡಿಸಿದ್ದಾರೆ. ಇದೀಗ ಈ ಚಾರ್ಜ್‌ಶೀಟ್‌ ಅನ್ನು ವೃತ್ತ ನಿರೀಕ್ಷಕರು ಪರಿಶೀಲಿಸಿದ ಬಳಿಕ ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಆರೋಪಿ ವಿರುದ್ದ ದೂರು ನೀಡಿದ್ದ ಪ್ರಾಣಿ ಹಕ್ಕು ಕಾರ್ಯಕರ್ತ ವಿಕೇಂದ್ರ ಶರ್ಮಾ, ಇಲಿಗಳು ಮನುಷ್ಯರಿಗೆ ಹಲವು ವಿಧದಲ್ಲಿ ಕಿರಿಕಿರಿ ಉಂಟು ಮಾಡುತ್ತವೆ. ಆದರೆ, ಅದನ್ನು ಕೊಂದ ರೀತಿ ಮಾತ್ರ ತುಂಬಾನೇ ಕ್ರೂರವಾದದ್ದು. ಹೀಗಾಗಿ ಈ ಕೃತ್ಯ ಪ್ರಾಣಿಗಳ ವಿರುದ್ದ ಕ್ರೌರ್ಯದ ಅಡಿ ಬರುತ್ತದೆ ಎಂದು ಹೇಳಿದ್ದಾರೆ. ಈ ರೀತಿಯ ಪ್ರಕರಣ ದಾಖಲು ಮಾಡುವ ಮೂಲಕ ಪ್ರಾಣಿಗಳ ವಿರುದ್ಧ ಕ್ರೌರ್ಯ ಎಸಗುವವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಶರ್ಮಾ ಅವರು ಹೇಳುತ್ತಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ