ಬೆಂಗಳೂರು : ರಾಜ್ಯದ ಆನೆಗಳ ಸಂಖ್ಯೆಯಲ್ಲಿ ಸುಮಾರು 350ರಷ್ಟು ಹೆಚ್ಚಳವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆ ಮಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು, ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350 ಆನೆಗಳ ಸಂಖ್ಯೆ ಹೆಚ್ಚಳವಾಗಿದೆ ಎಂದರು.
ಆನೆಗಳು ಬಲಿಷ್ಠ ವನ್ಯಜೀವಿಯಾದರೂ ಭಾರತ ಸೇರಿದಂತೆ ವಿಶ್ವಾದ್ಯಂತ ಅಪಾಯದಲ್ಲಿವೆ. ಅವಸಾನದ ಅಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಸಲುವಾಗಿ, ಆನೆಗಳಿಗೂ ನೆಮ್ಮದಿಯಿಂದ ಬದುಕಲು ಅವುಗಳ ಆವಾಸಸ್ಥಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 2012 ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಈ ಹಿಂದೆ 2017 ರಲ್ಲಿ ಆನೆ ಗಣತಿ ನಡೆದಿತ್ತು. ಬಳಿಕ 2022 ರಲ್ಲಿ ಆನೆಗಣತಿಯನ್ನು ಅಖಿಲಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು.
ಆದರೆ ಈ ಸಮೀಕ್ಷೆಯು ಮಾದರಿ ಬ್ಲಾಕ್ ಎಣಿಕೆ ಮತ್ತು ಆನೆಗಳ ಸಂಖ್ಯೆ ಸ್ವರೂಪದ ಮೌಲ್ಯಮಾಪನವನ್ನು ಒಳಗೊಂಡಿರಲಿಲ್ಲ. ಈ ವಿಧಾನ ಆನೆಗಳಗಣತಿ ಮತ್ತು ಸಂಖ್ಯಾಸ್ವರೂಪ ಅಂದರೆ ಲಿಂಗ ಮತ್ತು ವಯಸ್ಸಿನ ವರ್ಗೀಕರಣ ಮಾಡಲು ಬಹಳ ಮುಖ್ಯವಾಗಿರುತ್ತದೆ.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023 ರ ಮೇ-17 ರಿಂದ ಮೇ-19 ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಗಿದೆ ಎಂದರು. ಅದೇ ದಿನಾಂಕದಂದು ಆಂಧ್ರಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಲಾಗಿದೆ ಎಂದು ವಿವರಿಸಿದರು.
ಈ ಗಣತಿಯ ಸ್ವರೂಪ, ಕ್ಷೇತ್ರ ಸಿಬ್ಬಂದಿಗೆ ತರಬೇತಿ, ಗಣತಿಫಲಿತಾಂಶಗಳ ವಿಶ್ಲೇಷಣೆ ಹಾಗೂ ವರದಿ ತಯಾರಿಕೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಆರ್.ಸುಕುಮಾರ್ ಅವರ ನೇತೃತ್ವದ ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಆನೆಗಳ ಗಣತಿ ನಡೆಸಿದೆ ಎಂದು ಹೇಳಿದರು.
ರಾಜ್ಯದ 32 ವಿಭಾಗಗಳಿಂದ 3400 ಕ್ಕೂ ಹೆಚ್ಚು ಸಿಬ್ಬಂದಿ ಈ ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು. ಮೂರು ವಿಧಾನಗಳಲ್ಲಿ ಗಣತಿ ನಡೆಸಲಾಗಿದೆ. ನೇರ ಎಣಿಕೆ ಅಥವಾ ಬ್ಲಾಕ್ ಎಣಿಕೆ ವಿಧಾನದಲ್ಲಿ 5 ಚದರ ಕಿ.ಮೀ. ವ್ಯಾಪ್ತಿಯ ವಿವಿಧ ಮಾದರಿ ಬ್ಲಾಕ್ಗಳಲ್ಲಿ ಆನೆಗಳ ನೇರ ಎಣಿಕೆಯನ್ನು ನಡೆಸಲಾಗಿದೆ ಮತ್ತು ಇದರಲ್ಲಿ ಒಟ್ಟು ಬೀಟ್ಗಳ ಸಂಖ್ಯೆಯ ಸುಮಾರು ಶೇಕಡ 30 ರಿಂದ 50 ರಷ್ಟು ಒಳಗೊಂಡಿತ್ತು ಎಂದು ಸಚಿವರು ವಿವರಿಸಿದರು.
ಎರಡನೆಯ ವಿಧಾನದಲ್ಲಿ ಟ್ರಾಂಜೆಕ್ಟ್ ಸಮೀಕ್ಷೆ ಅಥವಾ ಲದ್ದಿ ಎಣಿಕೆ ವಿಧಾನವನ್ನು ಅನುಸರಿಸಲಾಯಿತು. ಈ ವಿಧಾನದಲ್ಲಿ 2 ಕಿ.ಮೀ ಉದ್ದದ ಟ್ರಾಂಜಾಕ್ಟ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಎಣಿಸಲಾಯಿತು. ಈ ಅಂಕಿಅಂಶಗಳÀ ಮಾದರಿಗಳ ಮೂಲಕ ಆನೆಗಳ ಸಂಖ್ಯೆಯ ಮಾಹಿತಿಯನ್ನು ಪಡೆಯಲು ಸದರಿ ದತ್ತಾಂಶವನ್ನು ಸಂಸ್ಕರಿಸಲಾಗುತ್ತಿದೆ ಮತ್ತು ಶೀಘ್ರವೇ ಫಲಿತಾಂಶ ದೊರೆಯಲಿದೆ ಎಂದು ಹೇಳಿದ್ದಾರೆ.
ಮೂರನೆಯ ವಾಟರ್ಹೋಲ್ ಎಣಿಕೆ ವಿಧಾನದಲ್ಲಿ ಆನೆಗಳು ನಿಯಮಿತವಾಗಿ ಭೇಟಿ ನೀಡುವ ಜಲಮೂಲಗಳು ಮತ್ತು ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ನೋಡಿ ಎಣಿಸುವ ಕಾರ್ಯ ನಡೆಸಲಾಯಿತು. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಅಥವಾ ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯವನ್ನು ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಎಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18975 ಚದರ ಕಿ.ಮೀ. ಪ್ರದೇಶದ ಪೈಕಿ 6104 ಚದರ ಕಿ.ಮೀ. ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರದೇಶವನ್ನು ಸಮೀಕ್ಷೆ ನಡೆಸಿರುವುದರಿಂದ ಇದು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಹೇಳಿದರು.
ಕ್ರ.ಸಂ ವಿಭಾಗಗಳು ಸಾಂದ್ರತೆ ಆನೆ ಗಣತಿಯ ಸರಾಸರಿಸಂಖ್ಯೆ ಒಟ್ಟು
1 ಬಂಡೀಪುರ ಹುಲಿ ಸಂರಕ್ಷಿತಪ್ರದೇಶ 0.96 1116 943 1289
2 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ 0.93 831 701 961
3 ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ 0.69 619 484 754
4 ಎಂ.ಎಂಹಿಲ್ಸ್(ವನ್ಯಜೀವಿವಿಭಾಗ) 0.60 706 557 854
5 ಭದ್ರಾ ಹುಲಿ ಸಂರಕ್ಷಿತ ಪ್ರದೇಶ 0.54 445 328 563
6 ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನವನ 0.46 127 79 174
7 ಶಿವಮೊಗ್ಗ (ವನ್ಯಜೀವಿವಿಭಾಗ) 0.37 127 72 181
8 ಮಡಿಕೇರಿ (ವನ್ಯಜೀವಿವಿಭಾಗ) 0.27 113 77 150
9 ಕಾವೇರಿ (ವನ್ಯಜೀವಿವಿಭಾಗ) 0.21 236 192 280
10 ಮಡಿಕೇರಿ ಪ್ರಾದೇಶಿಕವಿಭಾಗ 0.20 214 154 274
11 ಹಾಸನ ವಿಭಾಗ 0.13 66 46 86
12 ವಿರಾಜಪೇಟೆವಿಭಾಗ 0.13 58 36 80
13 ರಾಮನಗರವಿಭಾಗ 0.11 33 20 46
14 ಮೈಸೂರು ಪ್ರಾದೇಶಿಕ ವಿಭಾಗ 0.09 59 14 103
15 ಕೊಪ್ಪವಿಭಾಗ 0.09 128 85 172
16 ಕಾಳಿಹುಲಿಸಂರಕ್ಷಿತಪ್ರದೇಶ 0.08 38 26 49
17 ಮಂಗಳೂರು ವಿಭಾಗ 0.03 47 35 60
18 ಚಿಕ್ಕಮಗಳೂರು ವಿಭಾಗ 0.02 33 23 43
19 ಕುದುರೆ ಮುಖ ವಿಭಾಗ 0.01 5 3 7
20 ಕೋಲಾರ ವಿಭಾಗ 0.01 13 8 17
21 ಹಳಿಯಾಲ ವಿಭಾಗ 0.01 3 2 4
22 ಯಲ್ಲಾಪುರ 0.01 2 1 3
23 ಭದ್ರಾವತಿ ವಿಭಾಗ 0.01 8 6 11





