ಬೆಂಗಳೂರು: ಬರುವ ಡಿಸೆಂಬರ್ಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರ ವಿಶೇಷ ದರ್ಶನ ವ್ಯವಸ್ಥೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಿಬಿಎಂಪಿಗೆ ಚುನಾವಣೆ ಬೇಗ ಆಗಬೇಕು ಎಂಬ ಉದ್ದೇಶ ಹೊಂದಿದ್ದೇವೆ.
ಅದಕ್ಕಾಗಿ ನಮ್ಮ ಪಕ್ಷದವರೇ ನ್ಯಾಯಾಲಯದ ಮೊರೆ ಹೋಗಿದ್ದು, ಆದರೆ, ಬಿಜೆಪಿಯವರು ವಾರ್ಡ್ಗಳ ವಿಂಗಡಣೆಯನ್ನು ಮನಸೋ ಇಚ್ಚೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇವೆ ಎಂದರು. ವಾರ್ಡ್ ವಿಂಗಡನೆ ವಿಚಾರವನ್ನು ಅಧಿಕಾರಗಳ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ. ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಪ್ರಾದೇಶಿಕ ವಿಂಗಡನೆ ಮಾಡಿದ್ದೆವು. ಯಾರು ಸಹ ಕೋರ್ಟ್ಗೆ ಹೋಗಿರಲಿಲ್ಲ ಎಂದು ಅವರು ತಿಳಿಸಿದರು.
ಆದರೆ, ಬಿಜೆಪಿಯವರು ರಾಜಕೀಯವಾಗಿ ವಾರ್ಡ್ಗಳ ಪುನರ್ ವಿಂಗಡನೆ ಮಾಡಿದ್ದಾರೆ. ಹಾಗಾಗಿ ಮತ್ತೆ ಹೊಸದಾಗಿ ವಾರ್ಡ್ಗಳ ಪುನರ್ ವಿಂಗಡನೆ ಮಾಡಲು ತಿಳಿಸಲಾಗಿದೆ ಬಿಬಿಎಂಪಿ ಹೊಸ ಕಾಯ್ದೆ ಪ್ರಕಾರ 243 ವಾರ್ಡ್ ಗಳಿಗೆ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಕಾಲದಲ್ಲೂ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಿದ್ದೇವೆ. ಈ ಬಾರಿಯೂ ನಾವು ಅದೇ ರೀತಿ ಚುನಾವಣೆ ಮಾಡುತ್ತೆವೆ ಎಂದು ಅವರು ಹೇಳಿದರು.
ನಿನ್ನೆ ಚಾಮುಂಡಿ ಬೆಟ್ಟಕ್ಕೆ 1ಲಕ್ಷ ಜನ ಹೋಗಿದ್ದಾರೆ. ಅವರಲ್ಲಿ 10 ಸಾವಿರ ಜನ ಹಿರಿಯ ನಾಗರೀಕರು ಆಧಾರ್ ಕಾರ್ಡ್ ತೋರಿಸಿ ದರ್ಶನ ಮಾಡಿದ್ದಾರೆ. ಎ ವರ್ಗದ 205, ಬಿ ವರ್ಗದ 396 ದೇವಸ್ಥಾನ ಗಳು ಮುಜರಾಯಿ ಇಲಾಖೆಯಲ್ಲಿವೆ. ಎ ಹಾಗೂ ಬಿ ವರ್ಗದ ದೇವಾಲಯಗಳಿಗೆ ಹೆಚ್ಚಿನ ಭಕ್ತರು ಬರುತ್ತಾರೆ. 65 ವರ್ಷ ವಯಸ್ಸು ಆಗಿರೋರಿಗೆ ಆರೋಗ್ಯ ಸಮಸ್ಯೆ ಇರುತ್ತದೆ. ಸರದಿ ಸಾಲಿನಲ್ಲಿ ನಿಲ್ಲೋದಕ್ಕೆ ಆಗೋದಿಲ್ಲ. ಹಾಗಾಗಿ ದೇವಸ್ಥಾನದ ಅರ್ಚಕರು ಒಕ್ಕೂಟದಿಂದ ಬಂದು ಮನವಿ ಮಾಡಿದ್ದರು. ನಾವು ಈ ಅವಕಾಶ ಕಲ್ಪಿಸಲು ನಿರ್ಧರಿಸಿದ್ದೇವೆ ಎಂದರು.
ದೇವಸ್ಥಾನಕ್ಕೆ ಹೋಗಿ ಬರುವ ಭಕ್ತರಿಗೆ ಸಂತೋಷದ ವಾತಾವರಣ ಇರಬೇಕು. ನೀರು ಹಾಗೂ ಶೌಚಾಲಯದ ವ್ಯವಸ್ಥೆಗೆ ಯಾವುದೇ ಸಮಸ್ಯೆ ಆಗದ ಹಾಗೆ ವ್ಯವಸ್ಥೆ ಕಲ್ಪಿಸಲು ತಿಳಿಸಿರುವುದಾಗಿ ಅವರು ಹೇಳಿದರು. ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒಂದು ದಿನಕ್ಕೆ 1 ಲಕ್ಷ 56 ಸಾವಿರ ಟ್ರಿಪ್ ಇರುತ್ತವೆ. ಅದರಲ್ಲಿ ಯಾವುದೋ ಒಂದು ಅವ್ಯವಸ್ಥೆಯಾದರೆ ಎಲ್ಲಾ ಕಡೆ ಅವ್ಯವಸ್ಥೆ ಆಗಿದೆ ಎಂದು ಭಾವಿಸಬೇಕಿಲ್ಲ. ಹೆಚ್ಚು ಪ್ರಯಾಣಿಕರು ಬಸ್ಸಿಗೆ ಬಂದರೂ ಸಿಬ್ಬಂದಿಗೆ ಒತ್ತಡ ಹಾಗೂ ಸಾರ್ವಜನಿಕರಿಗೂ ಸಹ ಒತ್ತಡ ಆಗುತ್ತದೆ. ಅಲ್ಲದೆ, ವಾಹನಗಳಿಗೂ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಅವಯಲ್ಲಿ ನಾಲ್ಕು ಸಾವಿರ ಬಸ್ ಖರೀದಿಗೆ ಆದೇಶ ಕೊಡಲಾಗಿದೆ. ಹೊಸ ಬಸ್ ಈ ವರ್ಷದಲ್ಲಿ ಬರುತ್ತವೆ.ಶೇ. 95ರಷ್ಟು ಸಾಮಾನ್ಯಹೊಸ ಬಸ್ಗಳು, ಹಾಗೂ ಶೇ.5ರಷ್ಟು ಮಲ್ಟಿ ಆ್ಯಕ್ಷಲ್ ಬಸ್ಗಳು ಹಾಗೂ ಬೇರೆ ರೀತಿ ಬಸ್ ಗಳು ಬರಲಿವೆ. ಕಳೆದ ವರ್ಷ ನಾಲ್ಕು ಕಾಪೆರ್ರೆಷನ್ಗಳು 4 ಸಾವಿರ ಕೋಟಿ ರೂ. ನಷ್ಟದಲ್ಲಿವೆ ಎಂದು ಅವರು ಹೇಳಿದರು.





