ಅಯೋಧ್ಯೆ: ರಾಮಮಂದಿರ ಥೀಮ್ನಲ್ಲಿ ತಯಾರಾದ ಬನಾರಸಿ ಸೀರೆಗಳಿಗೆ ಈಗ ವಿದೇಶಗಳಲ್ಲೂ ಬೇಡಿಕೆ ಇದೆ. ವಿಶೇಷವಾದ ನೇಯ್ಗೆಯ ಕಲೆಯಿಂದ ತಯಾರಾದ ಈ ಸೀರೆಗಳನ್ನು ಇಟಲಿ ಮತ್ತು ಸಿಂಗಾಪುರಕ್ಕೆ ಕಳುಹಿಸಲಾಗುತ್ತಿದೆ.
ಇದೀಗ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗುತ್ತಿದ್ದು, ಈ ಸೀರೆಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಲೋಹ್ತಾ ಕೊರುಟಾದ ನಿವಾಸಿ ಸರ್ವೇಶ್ ಕುಮಾರ್ ಶ್ರೀವಾಸ್ತವ ಅವರು ಈ ಬನಾರಸಿ ಸೀರೆಗಳನ್ನು ವಿಶೇಷ ನೇಯ್ಗೆ ಕಲೆಯೊಂದಿಗೆ ಸಿದ್ಧಪಡಿಸುತ್ತಿದ್ದಾರೆ. ಸರ್ವೇಶ್ ಪ್ರಕಾರ, ಪ್ರಸ್ತುತ ಈ ಸೀರೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಇಟಲಿ, ಸಿಂಗಾಪುರ ಹೊರತುಪಡಿಸಿ ಗುಜರಾತ್, ಮಹಾರಾಷ್ಟ್ರ, ಬೆಂಗಳೂರು ಹಾಗೂ ಚೆನ್ನೈನಿಂದ ವಿಶೇಷ ಆರ್ಡರ್ಗಳು ಬಂದಿವೆ. ಇತ್ತೀಚೆಗಷ್ಟೇ ಅವರು ರಾಮಮಂದಿರ ವಿನ್ಯಾಸವಿರುವ ಸೀರೆಯನ್ನು ಇಟಲಿಗೆ ಕಳುಹಿಸಿದ್ದಾರೆ.
ಈ ಬನಾರಸಿ ಸೀರೆಯಲ್ಲಿ ರಾಮಮಂದಿರ ಹಾಗೂ ಸೀರೆಯ ಕೊನೆಯಲ್ಲಿ ಸರಯೂ ವಿನ್ಯಾಸವನ್ನು ಮಾಡಲಾಗಿದೆ. ಪ್ಯೂರ್ ರೇಷ್ಮೆಯಿಂದ ಮಾಡಿದ ಸೀರೆಯ ಸಂಪೂರ್ಣ ಕೆಲಸವನ್ನು ಕೈಮಗ್ಗದಲ್ಲಿ ಮಾತ್ರ ತಯಾರಿಸಲಾಗುತ್ತದೆ.
ಇದನ್ನು ತಯಾರಿಸಲು ಎರಡು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ. 18 ಮಂದಿ ಕುಶಲಕರ್ಮಿಗಳು ಒಂದು ಸೀರೆಯನ್ನು ಸಿದ್ಧಪಡಿಸುತ್ತಾರೆ.
ಒಂದು ಸೀರೆಯ ಬೆಲೆ 35 ಸಾವಿರ ರೂಪಾಯಿಗಳಿವೆ. ಸೀರೆಯಂತೆ ದುಪ್ಪಟ್ಟಾಗಳನ್ನು ಕೂಡ ಮಾಡಿದ್ದಾರೆ. ದುಪ್ಪಟ್ಟಾದ ಎರಡೂ ಬದಿಯಲ್ಲಿ ರಾಮಮಂದಿರದ ವಿನ್ಯಾಸವನ್ನು ಮಾಡಿದ್ದಾರೆ.
ಒಂದು ದುಪ್ಪಟ್ಟಾ ಬೆಲೆ 50 ಸಾವಿರ ರೂಪಾಯಿ ಇದ್ದು, ಇದನ್ನು ತಯಾರಿಸಲು ಮೂರು ತಿಂಗಳು ಬೇಕಾಗುತ್ತದೆ ಎಂದು ಸರ್ವೇಶ್ ಹೇಳಿದರು.