Mysore
31
few clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಪಾಕ್ ಸೇನೆಯಿಂದ ಪುಂಡಾಟ : ಬಿಎಸ್‍ಎಫ್ ಯೋಧ ಹುತಾತ್ಮ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಮಗಢ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ಬಿಎಸ್‍ಎಫ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ವೇಳೆ ಭಾರತೀಯ ಸೇನೆ ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಶತ್ರು ಸೇನೆಯನ್ನು ಹಿಮ್ಮೆಟ್ಟಿಸಿದೆ.

ಪಾಕ್ ಸೇನೆ ನಡೆಸಿದ ದಾಳಿಯಿಂದ ಬಿಎಸ್‍ಎಫ್ ಸಿಬ್ಬಂದಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಪಾಕ್ ದಾಳಿಯಿಂದ ರಾಮಗಢ ಪ್ರದೇಶದ ಸುತ್ತಮುತ್ತ ಗ್ರಾಮಸ್ಥರು ಭಯಗೊಂಡು ಬಂಕರ್‍ ಗಳಲ್ಲಿ ಆಶ್ರಯ ಪಡೆದಿದ್ದಾರೆ.

ಪಾಕಿಸ್ತಾನ ಹಾಗೂ ಭಾರತ 2021 ರ ಫೆ.25 ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಮ್ಮು ಗಡಿಯಲ್ಲಿ 24 ದಿನಗಳಲ್ಲಿ ನಡೆದ ಮೂರನೇ ಕದನ ವಿರಾಮ ಉಲ್ಲಂಘನೆ ಇದಾಗಿದೆ. ಅಲ್ಲದೇ ಈ ಮೂಲಕ ಒಟ್ಟಾರೆ ಆರನೇ ಉಲ್ಲಂಘನೆ ಇದಾಗಿದೆ.

ಅಕ್ಟೋಬರ್ 28 ರಂದು ಪಾಕಿಸ್ತಾನ ರೇಂಜರ್‍ ಗಳು ಸುಮಾರು ಏಳು ಗಂಟೆಗಳ ಕಾಲ ಗುಂಡು ಹಾಗೂ ಶೆಲ್ ದಾಳಿ ನಡೆಸಿತ್ತು. ಈ ವೇಳೆ ಇಬ್ಬರು ಬಿಎಸ್‍ಎಫ್ ಯೋಧರು ಮತ್ತು ಓರ್ವ ಮಹಿಳೆ ಗಾಯಗೊಂಡಿದ್ದರು. ಅಕ್ಟೋಬರ್ 17 ರಂದು ಅರ್ನಿಯಾ ಸೆಕ್ಟರ್‍ ನಲ್ಲಿ ಪಾಕಿಸ್ತಾನದ ರೇಂಜರ್‍ ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್‍ಎಫ್ ಸಿಬ್ಬಂದಿ ಗಾಯಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!