ಹೊಸದಿಲ್ಲಿ: ನಾಲ್ಕು ವರ್ಷಗಳ ಹಿಂದೆ ತಾವು ಮೋದಿ ಸಮುದಾಯದ ವಿರುದ್ಧ ನೀಡಿದ್ದ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಸೂರತ್ ನ್ಯಾಯಾಲಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ 2 ವರ್ಷಗಳ ಶಿಕ್ಷೆಯನ್ನು ನೀಡಿದೆ. ಆದರೆ, ಮೋದಿ ಸಮುದಾಯದ ಬಗ್ಗೆ ರಾಹುಲ್ ಗಾಂಧಿ ಟೀಕೆ ಮಾಡಿದ್ದು ಇದೇ ಮೊದಲಲ್ಲ.
ಮತ್ತೊಂದು ಪ್ರಸಂಗದಲ್ಲಿಯೂ ಅವರು ಮೋದಿ ಸಮುದಾಯದ ವಿರುದ್ಧ ಟೀಕೆ ಮಾಡಿದ್ದು ಆದರ ಬಗ್ಗೆಯೂ ಅವರು ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ.
ಈ ಎಲ್ಲಾ ಪ್ರಕರಣಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಅವುಗಳಲ್ಲಿ ಬಹುತೇಕ ಜಾಮೀನುಗಳು 2019ರ ಜುಲೈ ತಿಂಗಳಲ್ಲೇ ಸಿಕ್ಕಿವೆ. ಒಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿಯನ್ನೂ ಹಾಕಿಸಿಕೊಂಡಿದ್ದಾರೆ.ಎಲ್ಲಕ್ಕಿಂತ ಮಿಗಿಲಾಗಿ, 2017ರಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆಯೂ ಅವರು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು ಅದೂ ಸಹ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗೆ, ಒಟ್ಟು 9 ಮಾನನಷ್ಟ ಮೊಕದ್ದಮೆಗಳನ್ನು ರಾಹುಲ್ ಗಾಂಧಿ ಎದುರಿಸುತ್ತಿದ್ದಾರೆ. 2017ರ ಸೆ. 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅವರ ಮನೆಯ ಮುಂದೆ ಹತ್ಯೆಗೈಯ್ಯಲಾಗಿತ್ತು.
ಮುಂಬೈ ನ್ಯಾಯಾಲಯದಿಂದ ಜಾಮೀನು :2017ರಲ್ಲಿ ಇಡೀ ಕರ್ನಾಟಕವನ್ನೇ ತಲ್ಲಣಗೊಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸುವಾಗ ವಿವಾದಾತ್ಮಕ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದರು. ಬಿಜೆಪಿ – ಆರ್ ಎಸ್ ಎಸ್ ಸಿದ್ಧಾಂತಗಳೇ ಗೌರಿಯವರನ್ನು ಕೊಂದಿದ್ದು ಎಂದು ನೇರವಾಗಿ ಆಪಾದಿಸಿದ್ದರು. ಇದರ ವಿರುದ್ಧ ಮುಂಬೈನ ಸ್ಥಳೀಯ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಈ ಪ್ರಕರಣ ದಾಖಲಿಸಿದ್ದರು. 2019ರ ಜು. 4ರಂದು ರಾಹುಲ್ ಅವರು ಆ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು.
ಪಾಟ್ನಾ ನ್ಯಾಯಾಲಯದಿಂದ ಜಾಮೀನು! :2019ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಅಲ್ಲಿಯೂ, ಪ್ರತಿಯೊಬ್ಬ ಕಳ್ಳನೂ ತನ್ನ ಕುಲನಾಮನವನ್ನು (ಸರ್ ನೇಮ್) ಮೋದಿ ಎಂದು ಏಕೆ ಇಟ್ಟುಕೊಂಡಿರುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದರು! ನೀವೇ ನೋಡಿ ಬೇಕಾದ್ರೆ, ನೀರವ್ ಮೋದಿ, ಲಲಿತ್ ಮೋದಿ… ನರೇಂದ್ರ ಮೋದಿ! ಹೀಗೆ… ಇನ್ನೂ ಎಷ್ಟು ಇಂಥ ಮೋದಿಗಳು ಮುಂದೆ ಬರ್ತಾರೋ ಗೊತ್ತಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಮೊಕದ್ದಮೆ ದಾಖಲಾಗಿತ್ತು. 2019ರ, ಜು. 6ರಂದು ರಾಹುಲ್ ಗಾಂಧಿವರಿಗೆ ಈ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ.
ಸುಬ್ರಮಣ್ಯನ್ ಸ್ವಾಮಿ ದಾಖಲಿಸಿದ್ದ ಪ್ರಕರಣ : ಮತ್ತೊಂದು ಮಹತ್ವದ ಪ್ರಕರಣವೊಂದರಲ್ಲಿ ರಾಹುಲ್ ಗಾಂಧಿಯವರು ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ. ಅದು ನ್ಯಾಷನಲ್ ಹೆರಾಲ್ಡ್ ಪ್ರಕರಣ. ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ದಾಖಲಿಸಿದ್ದ ಈ ಪ್ರಕರಣದಲ್ಲಿ ರಾಹುಲ್ ಜೊತೆಗೆ ಅವರ ತಾಯಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರೂ ಆರೋಪಿಯಾಗಿದ್ದರು. ಆ ಪ್ರಕರಣದಲ್ಲಿ ರಾಹುಲ್- ಸೋನಿಯಾ ಅವರಿಗೆ 2015ರ ಡಿಸೆಂಬರ್ ನಲ್ಲಿ ಜಾಮೀನು ಸಿಕ್ಕಿದೆ.
ಅಹಮದಾಬಾದ್ ನ್ಯಾಯಾಲಯದಿಂದ ಜಾಮೀನು : 2019ರಲ್ಲಿ ರಾಹುಲ್ ಗಾಂಧಿಯವರು ಅಹ್ಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ನಲ್ಲಿ ದೊಡ್ಡ ಹಗರಣವಾಗಿದೆ. ನೋಟು ಅಮಾನ್ಯ ಮಾಡಿದ್ದ ಸಂದರ್ಭದಲ್ಲಿ ಆ ಬ್ಯಾಂಕಿನವರು ಸರ್ಕಾರದಿಂದ ಬಿಡುಗಡೆ ಮಾಡಿದ್ದ ಹೊಸ ನೋಟುಗಳನ್ನು ಸಾರ್ವಜನಿಕರಿಗೆ ಹಂಚದೇ ತಮ್ಮಲ್ಲೇ ಇಟ್ಟುಕೊಂಡು ಹಗರಣ ಮಾಡಿದೆ ಎಂದು ಆರೋಪಿಸಿದ್ದರು. ಅದರ ವಿರುದ್ಧ ಅಹ್ಮದಾಬಾದ್ ನ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಜು. 12ರಂದು ಅವರಿಗೆ ಆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ.
ಭಿವಾಂಡಿ ನ್ಯಾಯಾಲಯದಲ್ಲಿ ಪ್ರಕರಣ : ಮಹಾರಾಷ್ಟ್ರದ ಭಿವಾಂಡಿ ಜಿಲ್ಲಾ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಮೊಕದ್ದಮೆಯೊಂದು ದಾಖಲಾಗಿತ್ತು. ಮಹಾತ್ಮಾ ಗಾಂಧಿಯವರನ್ನು ಆರೆಸ್ಸೆಸ್ ನವರೇ ಕೊಂದಿದ್ದು ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಆಧರಿಸಿ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ದಾಖಳಿಸಿದ್ದ ಪ್ರಕರಣವದು. 2016ರ ನವೆಂಬರ್ ನಲ್ಲಿ ಅವರಿಗೆ ಆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ.
ಗುವಾಹಟಿ ನ್ಯಾಯಾಲಯದಲ್ಲಿರುವ ಪ್ರಕರಣ : 2015ರಲ್ಲಿ ಅಸ್ಸಾಂನ ಬಾರ್ಪೇಟಾ ಸತ್ರಾ ಎಂಬಲ್ಲಿಗೆ ಹೋಗುವಾಗ ತಮ್ಮನ್ನು ಆರೆಸ್ಸೆಸ್ ನವರು ತಡೆದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಇದರ ವಿರುದ್ಧ ಆರೆಸ್ಸೆಸ್, ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಗುವಾಹಟಿಯ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಆ ಪ್ರಕರಣದಲ್ಲಿ ರಾಹುಲ್ ಅವರಿಗೆ 50 ಸಾವಿರ ರೂ. ಬಾಂಡ್ ಆಧಾರದ ಮೇಲೆ ಗುವಾಹಟಿ ನ್ಯಾಯಾಲಯ 2016ರ ಸೆಪ್ಟಂಬರ್ ನಲ್ಲಿ ಜಾಮೀನು ನೀಡಿತ್ತು.





