Mysore
19
overcast clouds
Light
Dark

2 ತಿಂಗಳಲ್ಲಿ ಒಂದೇ ಹುಡುಗನಿಗೆ 9 ಬಾರಿ ಕಚ್ಚಿದ ಹಾವು

ಕಲಬುರಗಿ : ಕಲಬುರಗಿಯ ಬಾಲಕನಿಗೆ ಕಳೆದ ಎರಡು ತಿಂಗಳ ಅವದಿಯಲ್ಲಿ 9 ಬಾರಿ ಹಾವು ಕಚ್ಚಿದೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್‍ಗೆ ಜುಲೈ 3ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಹಾವು ಕಚ್ಚಿದೆ. ಆಗ ಈ ಬಾಲಕನ ಪೋಷಕರು ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಆಗ ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲ ಅಂತಾ ಬಾಲಕ ಹೇಳಿದ್ದಾನೆ. ಕೂಡಲೇ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಬಳಿಕ ನಾಲ್ಕು-ಐದು ದಿನಗಳ ಮಧ್ಯೆದಲ್ಲಿ ಈ ಬಾಲಕನಿಗೆ ನಿರಂತರವಾಗಿ ಇಲ್ಲಿಯವರೆಗೆ ಒಟ್ಟು 9 ಬಾರಿ ಹಾವು ಕಡಿತವಾಗಿರೋದು ಬೆಳಕಿಗೆ ಬಂದಿದೆ.

ಸದ್ಯ ಇಲ್ಲಿಯವರೆಗೆ 9 ಬಾರಿ ಹಾವು ಕಚ್ಚಿರುವ ಗುರುತುಗಳು ಕೂಡ ಆತನ ಕಾಲಿನಲ್ಲಿದೆ. ಅದರಲ್ಲಿ 5 ಬಾರಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರೆ, ಇನ್ನುಳಿದ 4 ಬಾರಿ ಸ್ಥಳೀಯ ನಾಟಿ ವೈದ್ಯರಿಂದ ಔಷಧಿಯನ್ನು ಪೋಷಕರು ಕೊಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆ ಹಾವು ಪ್ರಜ್ವಲ್ ಬಿಟ್ಟು ಯಾರ ಕಣ್ಣಿಗೂ ಸಹ ಕಂಡಿಲ್ಲ. ಹೀಗಾಗಿ ಆತನ ಮನೆ ಸುತ್ತ ಹಾವು ಹುಡುಕುವುದೇ ಸದ್ಯ ನೆರೆಹೊರೆಯವರ ಕೆಲಸವಾಗಿದೆ.

ಪ್ರತಿ ಬಾರಿ ಈ ಬಾಲಕ ಒಬ್ಬನ ಮೇಲೆ ಮಾತ್ರ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಹಲವು ಅನುಮಾನಕ್ಕೂ ಸಹ ಎಡೆಮಾಡಿಕೊಟ್ಟಿದೆ. ಇನ್ನು ಪ್ರತಿ ಬಾರಿ ಹಾವು ಕಚ್ಚಿದೆ ಅಂದಾಗ ಸಾವಿರಾರು ರೂಪಾಯಿ ಖರ್ಚು ಮಾಡಿ ಇತನ ಪೋಷಕರು ಮಗನಿಗೆ ಚಿಕಿತ್ಸೆ ಕೊಡಿಸುತ್ತಾ ಇದೀಗ ದಿಕ್ಕು ಕಾಣದಂತಾಗಿದೆ. ಹೀಗಾಗಿ ಈತನ ಪೋಷಕರು ಸಿಕ್ಕ ಸಿಕ್ಕ ದೇವರುಗಳ ಮೊರೆ ಹೋಗುತ್ತಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ