Mysore
29
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ರಾಜ್ಯದಲ್ಲಿ ಇನ್ನೂ 3 ದಿನ ಮಳೆ

ಬೆಂಗಳೂರು : ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು, ಶುಕ್ರವಾರದವರೆಗೆ ಮಳೆ ಮುಂದು ವರೆಯಲಿದೆ. ಆದರೆ, ಮಳೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಹಿಂಗಾರು ಚೇತರಿಸಿಕೊಂಡಿದ್ದರೂ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಚದುರಿದಂತೆ ಅಲ್ಲಲ್ಲಿ ಮಾತ್ರ ಮಳೆಯಾಗಿದೆ.

ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳ ಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗಿದೆ.

ಸೋಮವಾರಕ್ಕೆ ಹೋಲಿಸಿದರೆ ನಿನ್ನೆ ಮಳೆ ಪ್ರಮಾಣ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಿನ್ನೆ ಮಧ್ಯಾಹ್ನವೇ ಮಳೆ ಆರಂಭಗೊಂಡು ಜನ ಜೀವನ ಅಸ್ತವ್ಯಸ್ತಗೊಳಿಸಿತ್ತು. ಬಹಳಷ್ಟು ಕಡೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಕೆರೆ-ಕಟ್ಟೆಗಳಿಗೂ ನೀರು ಬಂದಿದೆ.

ತೀವ್ರ ಬರಪರಿಸ್ಥಿತಿ ಎದುರಿಸುತ್ತಿದ್ದ ರಾಜ್ಯಕ್ಕೆ ಹಿಂಗಾರು ಚೇತರಿಕೆಯಾಗಿ ಮಳೆಯಾಗುತ್ತಿರುವುದು ಜನರಲ್ಲಿ ಅದರಲ್ಲೂ ರೈತರಿಗೆ ಖುಷಿ ತಂದಿದೆ. ಆದರೆ, ಕೊಯ್ಲಿಗೆ ಬಂದಿದ್ದ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಈ ಮಳೆಯಿಂದ ತೊಂದರೆಯಾಗಿದೆ. ಕೆಲವೆಡೆ ಅಗಾಗ್ಗೆ ಮಳೆ ಬಂದರೆ, ಮತ್ತೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದ್ದು, ಆನಂತರ ಇಳಿಮುಖವಾಗಲಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಟ್ರಪ್‍ನಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಳೆಯ ಅಬ್ಬರ ಕಡಿಮೆಯಾದರೂ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಮುಂದಿನ ಮೂರು ದಿನಗಳ ಅವಯಲ್ಲಿ ದಾವಣಗೆರೆ, ಹರಪನಹಳ್ಳಿ, ಚನ್ನಗಿರಿ, ಹಾವೇರಿ, ಗದಗ, ಹುಬ್ಬಳ್ಳಿ, ಸವದತ್ತಿ, ಬಾಗಲಕೋಟೆ, ಜಮಖಂಡಿ, ವಿಜಯಪುರ, ಇಂಡಿ ಭಾಗದಲ್ಲಿ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ 15ರಿಂದ 20 ಮಿ.ಮೀ., ಉತ್ತರ ಒಳನಾಡಿನಲ್ಲಿ 25ರಿಂದ 40 ಮಿ. ಮೀ. ನಷ್ಟು ಮಳೆಯಾಗುವ ಸೂಚನೆಗಳಿವೆ.

ಅದೇ ರೀತಿ ಮುಂದಿನ ಹತ್ತು ದಿನಗಳ ಅವಯಲ್ಲಿ ದಕ್ಷಿಣ ಒಳನಾಡಿನಲ್ಲಿ 20ರಿಂದ 40 ಮಿ.ಮೀ., ಮಲೆನಾಡಿನಲ್ಲಿ 30ರಿಂದ 60 ಮಿ.ಮೀ., ಕರಾವಳಿಯಲ್ಲಿ 35ರಿಂದ 50 ಮಿ.ಮೀ. ಹಾಗೂ ಉತ್ತರ ಒಳನಾಡಿನಲ್ಲಿ 20ರಿಂದ 50 ಮಿ.ಮೀ.ನಷ್ಟು ಮಳೆಯಾಗಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಅಕ್ಟೋಬರ್‍ನಲ್ಲಿ 131ಮಿ.ಮೀ. ವಾಡಿಕೆ ಮಳೆಗೆ ಕೇವಲ 47 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ.65 ರಷ್ಟು ಮಳೆ ಕೊರತೆ ಉಂಟಾಗಿತ್ತು. ಸೋಮವಾರ ರಾಜ್ಯದಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಮಳೆಯಾಗಿದೆ.

ಕಳೆದೊಂದು ವಾರದಲ್ಲಿ 30 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಆದರೂ ದಕ್ಷಿಣ ಒಳನಾಡಿನಲ್ಲಿ ನವೆಂಬರ್ ಒಂದರಿಂದ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.160ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.29ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಶೇ.132 ಹಾಗೂ ಶೇ.208ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಹಿಂಗಾರು ಹಂಗಾಮಿನ ಅವಯ ಅಕ್ಟೋಬರ್ ಒಂದರಿಂದ ನವೆಂಬರ್ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.47ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಕಂಡುಬಂದಿತ್ತು. ಅದೇ ರೀತಿ ಜೂನ್ ನಿಂದ ಈವರೆಗೆ ಶೇ.28ರಷ್ಟು, ಏಪ್ರಿಲ್‍ನಿಂದ ಇಲ್ಲಿವರೆಗೆ ಶೇ.25ರಷ್ಟು ಹಾಗೂ ಜನವರಿಯಿಂದ ಈತನಕ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!