Mysore
26
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಿಂಚಿನ ಓಟದ ವಿಜಯ ರಮೇಶ್‌

• ಕೀರ್ತಿ ಎಸ್. ಬೈಂದೂರು

ಕ್ರೀಡೆಯನ್ನೇ ಉಸಿರಾಗಿಸಿಕೊಂಡು, ಇವತ್ತಿಗೂ ಉತ್ಸಾಹದ ಚಿಲುಮೆಯಾಗಿರುವ ಅಪರೂಪದ ಸಾಧಕಿಯರಲ್ಲಿ ಮೈಸೂರಿನ ವಿಜಯ ರಮೇಶ್ ಅವರೂ ಒಬ್ಬರು. ಮದುವೆಯಾದ ಮೇಲೆ ಸಂಸಾರದ ತಾಪತ್ರಯದೊಳಗೆ ಹವ್ಯಾಸ, ಆಕಾಂಕ್ಷೆಗಳನ್ನು ಪಕ್ಕಕ್ಕಿಡುವ ಅನೇಕ ಮಹಿಳೆಯರಿಗೆ ಇವರು ಮಾದರಿಯಾಗಿದ್ದಾರೆ.

ರಾಜ್ಯಮಟ್ಟ, ರಾಷ್ಟ್ರೀಯ ಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಪದಕಗಳನ್ನು ಗೆದ್ದ ಮೈಸೂರಿನ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಇವರದು. ಮೂಲತಃ ಮಂಡ್ಯದವರಾದ ಇವರು ಕಾನ್ವೆಂಟ್‌ಗೆ ಹೋಗಬೇಕೆಂದರೆ ನಾಲ್ಕು ಕಿಮೀ ದೂರ ಸಾಗಬೇಕಿತ್ತು. ನಡೆಯುವ ಬದಲು ಓಡಿಕೊಂಡೇ ಶಾಲೆಯನ್ನು ತಲುಪುತ್ತಿದ್ದರು. ಮಧ್ಯಾಹ್ನದ ಹೊತ್ತಿನಲ್ಲಿ ಊಟಕ್ಕಾಗಿ ಮನೆಗೆ ಮತ್ತೆ ಓಡುತ್ತಿದ್ದದ್ದರಿಂದ ಈ ಓಟ ಸಹಜ ಭಾಗವೇ
ಆಯಿತು.

ಶಾಲೆಯಲ್ಲಿ ಖೋಖೋ ಆಟಗಳಲ್ಲೂ ವಿಜಯಾ ಅವರು ಗುರುತಿಸಿಕೊಂಡಿದ್ದರು. ಹತ್ತನೇ ತರಗತಿಯ ಪರೀಕ್ಷೆ ಮುಗಿಯುತ್ತಿದ್ದಂತೆ ಯೋಧ ರಮೇಶ್ ಅವರನ್ನು ಮದುವೆಯಾದರು. ಬದುಕಿನ ತಿರುವನ್ನು ತಿಳಿದವರು ಯಾರು ಹೇಳಿ! ಅಲ್ಲಿಯವರೆಗೆ ಮನೆಯವರ ಒತ್ತಾಯಕ್ಕೆ ಓಡುವುದನ್ನು ನಿಲ್ಲಿಸಿ, ಓದುವುದರ ಕಡೆ ಮುಖ ಮಾಡಿದ್ದ ವಿಜಯ್‌ ಅವರ ಬದುಕಿನ ಹೊಸ ಪುಟಗಳು ತೆರೆದವು. ಮ್ಯಾರಥಾನ್ ಓಟಗಾರರಾಗಿದ್ದ ರಮೇಶ್ ಅವರಿಗೆ ಇವರ ಕ್ರೀಡಾಸಕ್ತಿ ತಿಳಿದು, ಪ್ರೋತ್ಸಾಹ ಸಿಕ್ಕಿತು. ಅವರೊಂದಿಗೆ ಪ್ರಾಕ್ಟಿಸ್‌ಗೆ ಹೋಗುತ್ತಿದ್ದ ದಿನಗಳಲ್ಲಿ ಆರಂಭವಾದ ಓಟ ಇಂದಿಗೂ ಇವರ ಬದುಕಿನಲ್ಲಿ ಸಾಗುತ್ತಲೇ ಇದೆ.

ದೆಹಲಿ, ಆಗ್ರಾ, ಪುಣೆಗಳಲ್ಲಿ ನಡೆಯುತ್ತಿದ್ದ ವುಮೆನ್ಸ್ ಮೀಟ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ತರಬೇತುದಾರರಾಗಿ ಯಾರಿದ್ದರು ಎಂದರೆ, ಸ್ವತಃ ರಮೇಶ್ ಅವರೇ. ಆಗ ಹರ್ಡಲ್ಸ್ ಸ್ಟಾಂಡ್ ತೆಗೆದುಕೊಂಡು, ವಿಶ್ವವಿದ್ಯಾನಿಲಯದ ಒಪ್ಪಿಗೆ ಪಡೆದು ಅಭ್ಯಾಸ ಪ್ರಾರಂಭಿಸಬೇಕಿತ್ತು. ಇಷ್ಟೆಲ್ಲ ಹರಸಾಹಸದ ಬದಲು, ಪಾರ್ಕ್‌ಗೆ ಕರೆದುಕೊಂಡು ಹೋಗಿ ಅಲ್ಲೇ ಇದ್ದ ಗಿಡಗಳನ್ನು ಹಾರು ಎಂದು, ಹರ್ಡಲ್ಸ್, ಲಾಂಗ್‌ ಜಂಪ್ ಎಂದು ಅಭ್ಯಾಸ ಮಾಡಿಸುತ್ತಿದ್ದರು. ಇಷ್ಟಕ್ಕೆ ನಿಲ್ಲದೆ, ಚಾಮುಂಡಿ ಬೆಟ್ಟದ ಮೆಟ್ಟಿಲನ್ನು ಹತ್ತಿ ಇಳಿಸುವ ಮೂಲಕ ಅವರ ಮಿಲಿಟರಿ ಪ್ರಯೋಗಗಳೆಲ್ಲ ನನ್ನ ಮೇಲೆ ಆಗುತ್ತಿತ್ತು ಎಂದು ನಗು ಬೀರುತ್ತಾರೆ.

ಇದೆಲ್ಲದರ ಪರಿಣಾಮ ಏನಾಯಿತೆಂದರೆ, 30 ವರ್ಷ ದಾಟಿದ ಮಹಿಳೆಯರಿಗಾಗಿದ್ದ ಮೆಟರ್ನ್ ಗೇಮ್ಸ್‌ನಲ್ಲಿ (ಇದನ್ನೀಗ ಮಾಸ್ಟರ್ ಗೇಮ್ಸ್ ಎಂದು ಕರೆಯುತ್ತಾರೆ) ಭಾಗವಹಿಸುವ ಅವಕಾಶ ದೊರೆಯಿತು. ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ವಿಜೇತರಾಗಿದ್ದ ವಿಜಯ ಅವರಿಗೆ 1995ರಲ್ಲಿ ಥೈಲ್ಯಾಂಡ್‌ಗೆ ತೆರಳಿ, ಸ್ಪರ್ಧಿಸುವ ಯೋಗ. ಇವರಿಗೆ ಹರ್ಡಲ್ಸ್‌ನಲ್ಲಿ ಬೆಳ್ಳಿಯ ಪದಕ ದೊರೆಯಿತು. ಬಹುಶಃ ಇದು ಬದುಕಿನ ಅಸ್ಮಿತೆಯನ್ನು ಕಂಡುಕೊಳ್ಳುವಲ್ಲಿ ನೆರವಾಯಿತು. ಮಕ್ಕಳ ಆರೈಕೆಗಾಗಿ ಒಂದಿಷ್ಟು ಸಮಯ ನೀಡಿದ್ದು ಬಿಟ್ಟರೆ, ತಾಯ್ತನ ಅವರಿಗೆ ತೊಂದರೆಯೆಂದು ಅನಿಸಲೇ ಇಲ್ಲ.

ಮಗುವಿಗೆ 6 ತಿಂಗಳು ತುಂಬುತ್ತಿದ್ದಂತೆ, ಕ್ರೀಡೆಗೆ ಮತ್ತೆ ಹಿಂದಿರುಗಿದರು. ರಮೇಶ್ ಅವರು ಐಸಿಯುನಲ್ಲಿ ಇದ್ದಾಗಲೂ ‘ಓಡೋದನ್ನ ನಿಲ್ಲಿಸ್ಟೇಡ. ಹೋಗು’ ಎಂದು ಸ್ಪರ್ಧೆಗೆ ಕಳಿಸಿದ ನೆನಪು ಇವರ ಬದುಕಿನಲ್ಲಿಂದು ನಿತ್ಯ ಹಸಿರು. ವಿಶೇಷವೆಂದರೆ, ಜೂನ್ ತಿಂಗಳಲ್ಲಿ ಕೆಂಪೇಗೌಡ ಪ್ರಶಸ್ತಿಯನ್ನು ಸ್ವೀಕರಿಸಲು ಇವರು ಲಂಡನ್‌ಗೆ ಹೋಗುವ ಉತ್ಸಾಹದಲ್ಲಿದ್ದಾರೆ. ಭಾರತದ ಹತ್ತು ಸಾಧಕರನ್ನು ಗುರುತಿಸಿ ನೀಡುವ ಈ ಪ್ರಶಸ್ತಿಗೆ ವಿಜಯ್‌ ಅವರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಹಿರಿಯ ಮಹಿಳಾ ಕ್ರೀಡಾಪಟುವಾದ ಇವರ ಬದುಕಿನಲ್ಲಿ ಯೋಗ, ಧ್ಯಾನ, ಪ್ರಾಕ್ಟಿಸ್‌ಗೆಲ್ಲ ಆಹಾರ, ನಿದ್ರೆಗಿರುವಷ್ಟೇ ಪ್ರಾಶಸ್ತ್ರ. ಇವತ್ತಿಗೂ ಮಹಿಳೆಯರಿಗೆ ಉಚಿತ ಯೋಗ ತರಗತಿಗಳನ್ನು ನಡೆಸುತ್ತಾ, ತಮ್ಮಿಂದಾ ದಷ್ಟು ಸಹಾಯವನ್ನು ಕ್ರೀಡಾಸಕ್ತರಿಗೆ ಮಾಡು ತ್ತಿರುವ ಇವರಲ್ಲಿ ಇನ್ನಷ್ಟು ಸಾಧನೆಯ ಕನಸಿದೆ. keerthisba2018@gmail.com

Tags: