Mysore
20
overcast clouds
Light
Dark

ಹೆಣ್ಣೊಂದು ಓದಿದರೆ

• ಅನಿತಾ ಹೊನ್ನಪ್ಪ

“ಅಪ್ಪ ನಾನು ಮುಂದೆ ಓದ್ದೇಕು’ʼ ಎಂದು ತಂದೆಯ ಮುಂದೆ ಬೇಡಿಕೊಂಡಳು ಶಾಲಿನಿ. ‘ಆಗಲ್ಲ, ಪಿಯುಸಿ ಓದಿದ್ದು ಸಾಕು. ನಿನ್ನ ಓದಿಸಿ ಏನಿದೆ ಪ್ರಯೋಜನ? ನಾಳೆ ಕೊಟ್ಟ ಮನೆಗೆ ಹೋಗಿ ಆ ಮನೆ ಉದ್ಧಾರ ಮಾಡುವವಳು ನೀನು. ನನ್ನ ಮಗ ಓದ್ದೇಕು, ಒಳ್ಳೆ ಕೆಲಸ ಹಿಡಿಯಬೇಕು’ ಒಂದೇ ಮಾತಿಗೆ ಮಗಳ ಓದಿನ ಆಸೆ ಕೊಂದರು ಗೋಪಾಲ.

ಕೂಲಿ ಕೆಲಸ ಮಾಡಿ ಜೀವನ ಮಾಡುವ ಗೋಪಾಲ ಹಾಗೂ ಮಾಧವಿ ದಂಪತಿಗೆ, ಹತ್ತನೇ ತರಗತಿ ಓದುತ್ತಿರುವ ಮಗನ ಮೇಲೆ ವಿಪರೀತ ವ್ಯಾಮೋಹ. ಅಪ್ಪ ಓದುವುದನ್ನು ನಿರಾಕರಿಸಿದ ನಂತರ ಶಾಲಿನಿಗೆ ದುಃಖವಾಯಿತು. ತಾಯಿಯ ಮುಂದೆ ಪರಿಪರಿಯಾಗಿ ಬೇಡಿದರೂ ಪ್ರಯೋಜನವಾಗಲಿಲ್ಲ. ‘ನಾನು ಮತ್ತೆ ನಿಮ್ಮಪ್ಪ ಕೆಲಸಕ್ಕೆ ಹೋಗ್ತಿವಿ, ಮನೆ ಕಡೆ ನೋಡ್ಕೋ ತಮ್ಮನಿಗೆ ಪಾಠ ಹೇಳಿ ಕೊಡು. ಅವನು ಒಳ್ಳೆ ಕೆಲಸಕ್ಕೆ ಸೇರಿಕೊಂಡು, ದುಡಿದು ನಿನ್ನ ಮದುವೆ ಮಾಡ್ಬೇಕು ನೆನಪಿರಲಿ’ ಎಂದು ಎಚ್ಚರಿಸಿದರು ಮಾಧವಿ.

ಶಾಲಿನಿ ಓದಿನ ಆಸೆ ಕೈಬಿಟ್ಟಳು. ಮನೆಯ ಕೆಲಸ ಹಾಗೂ ತಮ್ಮನ ಓದಿಗೆ ಸಹಾಯ ಮಾಡತೊಡಗಿದಳು. ಆ ದಿನ ಶಮಂತ್, ‘ಅಕ್ಕಾ, ನನ್ನ ನೋಟ್ಸ್ ಬರೆದು ಕೊಡು ಪ್ಲೀಸ್. ಇವತ್ತು ನನ್ನ ಫ್ರೆಂಡ್ ಬರ್ತ್ ಡೇ ಪಾರ್ಟಿ ಇದೆ. ನಾನು ಹೋಗ್ಲೆಬೇಕು’ ಎಂದು ಕೇಳಿಕೊಂಡ. ಶಾಲಿನಿ ಒಪ್ಪಲಿಲ್ಲ. ಆದರೆ ಶಮಂತ್ ತುಂಬಾ ಬೇಡಿದಾಗ ಕೊಂಚ ಭಯದಲ್ಲಿ ಒಪ್ಪಿಕೊಂಡಳು.‌

ಅವನ ಬ್ಯಾಗಿನಿಂದ ಪುಸ್ತಕ ತೆಗೆಯುವಾಗ ಅವಳ ಕಣ್ಣಿಗೆ ಬಿತ್ತು ಗುಟ್ಕಾ ಪ್ಯಾಕೆಟ್. ಬೆಚ್ಚಿದ ಶಾಲಿನಿ, ತಕ್ಷಣ ತಾಯಿಯ ಗಮನಕ್ಕೆ ತಂದಳು. ಮಗನ ಮೇಲೆ ವಿಪರೀತ ಕಾಳಜಿಯಿದ್ದ ಮಾಧವಿ ಮಗಳ ಮಾತು ನಂಬಿರಲಿಲ್ಲ. ಅವನು ಪಾರ್ಟಿ ಎಂದು ಹೇಳಿ ಹೋಗಿದ್ದು ನೆನಪಾಯಿತು. ಕೂಡಲೇ ಅವನ ಫ್ರೆಂಡ್ ಮನೆಗೆ ಹೋದರು. ಅಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಶಮಂತ್. ಆ ದೃಶ್ಯ ಕಂಡು ಮಾಧವಿ ದಿಗಿಲಾದರು. ಮಗ ಸಣ್ಣ ವಯಸ್ಸಿನಲ್ಲಿ ಗುಟ್ಕಾ ಮತ್ತು ಕುಡಿತವನ್ನು ಚಟ ಮಾಡಿಕೊಂಡಿದ್ದ. ಕೂಡಲೇ ಗೋಪಾಲನಿಗೂ ವಿಷಯ ತಿಳಿಸಿದರು. ಮನೆಯಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಕೊನೆಗೂ ಶಮಂತ್ ತನಗೆ ಓದಿನಲ್ಲಿ ಆಸಕ್ತಿಯಿಲ್ಲವೆಂದು ನೇರವಾಗಿ ಹೇಳಿಬಿಟ್ಟ.

“ಓದು ಓದು ಅಂತ ಒತ್ತಾಯ ಮಾಡೇಡಿ. ಕೂಲಿ ಮಾಡಿ ನೀವು ಜೀವನ ಮಾಡ್ತಿಲ್ವ? ಹಾಗೇ ನಾನೂ ಮಾಡ್ತೀನಿ’ ಆ ದಿನ ಶಮಂತ್ ಆಡಿದ ಮಾತು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು. ತಾವು ಬೆವರು ಸುರಿಸಿ ತಂದ ಹಣವನ್ನು ಮಗ ಈ ರೀತಿ ಹಾಳು ಮಾಡಿದ್ದು ಕಂಡು ಕುಗ್ಗಿದರು ದಂಪತಿ. ಸುಧಾರಿಸಿಕೊಳ್ಳಲು ಕೆಲ ಸಮಯ ಹಿಡಿಯಿತು. ಗಂಡನ ಮಾತು ಕೇಳಿ ಮಗಳ ಓದು ನಿಲ್ಲಿಸಿದ್ದ ಮಾಧವಿ ಬದಲಾದಳು.

‘ಶಾಲು, ನಾಳೆಯಿಂದ ನೀನು ಕಾಲೇಜಿಗೆ ಹೋಗು’ ಎಂದು ಪುನಃ ಮಗಳನ್ನು ಓದಲು ಕಳುಹಿಸಿದರು. ಶಾಲಿನಿಯ ಆಸೆ ಮತ್ತೆ ಚಿಗುರೊಡೆಯಿತು. ಹೊಸ ಉತ್ಸಾಹದಲ್ಲಿ ಓದಿನ ಕಡೆ ಗಮನ ಕೊಟ್ಟಳು. ಈಗವಳು ಓದು ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸೋತಿರುವ ತಂದೆ ತಾಯಿಗೆ ಆಸರೆಯಾಗಿದ್ದಾಳೆ. ಮನೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ತಂದಿದ್ದಾಳೆ. ಹೆಣ್ಣಾದರೇನು ಗಂಡಾದರೇನು? ವಿದ್ಯೆಗೆ ಇಬ್ಬರೂ ಸಮಾನ ಹಕ್ಕುಳ್ಳವರು. ಬೇರೆ ಮನೆಗೆ ಹೋಗುವವಳೆಂದು ಓದು ನಿಲ್ಲಿಸಿದರೆ, ಅವರ ಮನೆಗೆ ಬರುವ ಹೆಣ್ಣು ಕೂಡ ಅವಿದ್ಯಾವಂತೆಯಾಗಿ ಬರುವಳೆಂಬ ಸತ್ಯ ಮರೆಯಬಾರದು.