ಬಿಗ್ ಬಾಸ್ ಖ್ಯಾತಿಯ ಮಾತಿನ ಮಲ್ಲ ನಟ ಪ್ರಥಮ್ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಂದು ಮಂಡ್ಯದ ಹುಡುಗಿ ಭಾನುಶ್ರೀ ಜೊತೆ ಹಸೆಮಣೆ ಏರಿದ್ದಾರೆ.
ನೆನ್ನೆ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇಂದು ಬೆಳಗ್ಗೆ ಸರಳವಾಗಿ ಮದುವೆ ನೆರವೇರಿದೆ. ನಟ ಪ್ರಥಮ್ ಅವರು ಮೊದಲಿನಿಂದಲೂ ತಾನು ಹಳ್ಳಿ ಹುಡುಗಿಯನ್ನೇ ಮದುವೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದರು. ಕಳೆದ ಜೂನ್ ನಲ್ಲಿ ಕುಟುಂಬಸ್ಥರು ಹುಡುಕಿದ್ದ ಮಂಡ್ಯ ಮೂಲದ ಭಾನುಶ್ರೀ ಎಂಬ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಪ್ರಥಮ್ ಹಾಗೂ ಭಾನುಶ್ರೀ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಪ್ರಥಮ್ ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಸ್ಟೈಲ್ನಲ್ಲಿ ಮದುವೆ ಬಗೆಗಿನ ಅಪ್ಡೇಟ್ ಹಂಚಿಕೊಂಡಿದ್ದರು. ಮುಂದಿನ ವಾರ ಮದುವೆಯಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೆ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಚಾರಕ್ಕೆ ಕರೆಯೋದಿಲ್ಲ ಈಗ ಎಲ್ಲಿರ್ತಿರೋ ಅಲ್ಲಿಂದಲೇ ಹಾರೈಸಿ. ಅದ್ಧೂರಿಯಾಗಿ ಆಗಬಹುದಿತ್ತು ಆದರೆ ನನಗೆ ಆಸಕ್ತಿ ಇಲ್ಲ, ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಬರೆದುಕೊಂಡಿದ್ದರು.
ಇತ್ತೀಚೆಗೆ ಬೆಂಗಳೂರಿನ ಬಂಡೆ ಮಾಹಾಂಕಾಳಿ ದೇವಸ್ಥಾನದಲ್ಲಿ ಪ್ರಥಮ್ ಅವರು ನಾಯಕನಾಗಿ ನಟಿಸುತ್ತಿರುವ ಫಸ್ಟ್ ನೈಟ್ ವಿಥ್ ದೆವ್ವ ಎಂಬ ಸಿನಿಮಾದ ಮುಹೂರ್ತ ನೆರವೇರಿತ್ತು. ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಪ್ರಥಮ್ ಅವರೇ ಕಥೆ ಬರೆದಿರೋ ಹಾರರ್ ವಿಥ್ ಕಾಮಿಡಿ ಜಾನರ್ ಚಿತ್ರದಲ್ಲಿ ಮಾತಿನ ಮಲ್ಲ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ
ಚಿತ್ರದಲ್ಲಿ ಒಳ್ಳೆ ಹುಡುಗ ಪ್ರಥಮ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ನಿಖಿತ ಅವರು ಬಣ್ಣ ಹಚ್ಚಿದ್ದಾರೆ. ಇನ್ನೂ ಹಿರಿಯ ನಟ ಶ್ರೀನಿವಾಸ ಮೂರ್ತಿ, ಹರೀಶ್ ರಾಜ್,ತನುಜಾ, ಮಾನ್ಯ ಸಿಂಗ್ ಅವರು ತಾರಾ ಬಳಗದಲ್ಲಿದ್ದಾರೆ.





