Mysore
20
overcast clouds
Light
Dark

ನಾಳೆ ಮಂತ್ರ ಮಾಂಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಡಲಿದ್ದಾರೆ ಪೂಜಾ ಗಾಂಧಿ

ನಟಿ ಪೂಜಾ ಗಾಂಧಿಯವರು ಕವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮೂಲಕ ಉದ್ಯಮಿ ವಿಜಯ್‌ ಘೋರ್ಪಡೆ ಜೊತೆ ನಾಳೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ಮಂತ್ರ ಮಾಂಗಲ್ಯದ ಮೂಲಕ ಮಳೆ ಹುಡುಗಿ ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲಿಕ ವಿಜಯ್‌ ಜೊತೆ ಹೊಸ ಜೀವನ ಆರಂಭಿಸಲಿದ್ದಾರೆ.

ಉತ್ತರ ಪ್ರದೇಶ ಮೂಲದವರಾದ ಪೂಜಾ ಗಾಂಧಿಯವರಿಗೆ ಸ್ಯಾಂಡಲ್ವುಡ್‌ ಗೆ ಕಾಲಿಟ್ಟಾಗ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ ಆಗ ವಿಜಯ್‌ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದರು. ಇದೀಗ ಮುಂಗಾರು ಮಳೆ ಬೆಡಗಿ ಕನ್ನಡ ಕಲಿಸಿದ ಗುರುವನ್ನೇ ವರಿಸಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿರುವ ಪೂಜಾ ಗಾಂಧಿ ತಮ್ಮ ಮಾತೃ ಭಾಷೆ ಹಿಂದಿ ಆದರೂ ಕೂಡ ಅವರು ಕನ್ನಡ ಭಾಷೆಯ ಮೇಲೆ ಅಪಾರವಾದ ಒಲವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಇರುವ ಪರ ಭಾಷಿಕರೂ ಕೂಡ ಕನ್ನಡವನ್ನು ಕಲಿಯಬೇಕು ಎಂದು ಹೇಳುವ ಪೂಜಾ ಗಾಂಧಿ ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ. ಇದೀಗ ಸ್ಪಷ್ಟವಾಗಿ ಕನ್ನಡ ಕಲಿತಿರುವ ಪೂಜಾಗಾಂಧಿ ತಮ್ಮ ಕೈಯಾರೆ ಮದುವೆ ಆಮಂತ್ರಣ ಪತ್ರಿಕೆಯನ್ನು ಬರೆದಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲೇನಿದೆ ? : ಪ್ರೀತಿಯ ಮಾಧ್ಯಮ ಮಿತ್ರರಿಗೆ, ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಯಾಗಿದ್ದೀರಿ. ನವೆಂಬರ್‌ 29-11- 2023 ನೇ ತಾರೀಕು ಸಂಜೆ ಕವೆಂಪು ಆಶಯದ ” ಮಂತ್ರ ಮಾಂಗಲ್ಯದ” ಮೂಲಕ ವಿಜಯ್‌ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ, ಆಶಿರ್ವದಿಸಿ. ಎಂದು ಮದುವೆಯ ಆಮಂತ್ರಣ ನೀಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಮನವಿಯೊಂದನ್ನು ಮಾಡಿರುವ ನಟಿ ತಮ್ಮಲ್ಲಿ ಸವಿನಯ ಮನವಿ ಮದುವೆಯ ಸಮಯದಲ್ಲಿ ಯಾವುದೇ ಕ್ಯಾಮೆರಾಗಳಿಗೆ ಅವಕಾಶವಿರುವುದಿಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಫೋಟೋಗಳನ್ನು ಮತ್ತು ದೃಶ್ಯಾವಳಿಗಳನ್ನು ತಲುಪಿಸುತ್ತೇವೆ. ಮದುವೆಯ ಸಮಯವನ್ನು ನಾಳೆ 29-11-2023 ರ ಬೆಳಗ್ಗೆ ನಮ್ಮ ಪಿ.ಆರ್.ಓ ಸುಧೀಂದ್ರ ವೆಂಕಟೇಶ್‌ ಅವರು ತಿಳಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು ನಿಮ್ಮ ಮನೆ ಮಗಳು ಪೂಜಾ ಗಾಂಧಿ ಎಂದು ಬರೆದಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ