ನಟ ದರ್ಶನ್ ಮನೆಯ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತಾ ಜಿಂದಾಲ್ ಎಂಬ ಮಹಿಳೆಗೆ ದೂರು ನೀಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಉದ್ದೇಶ ಪೂರ್ವಕವಾಗಿ ನಾಯಿಯನ್ನು ನನ್ನ ಮೇಲೆ ಛೂ ಬಿಡಲಾಗಿದೆ ಎಂದು ಮಹಿಳೆ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಪ್ರಕರಣದಲ್ಲಿ ದರ್ಶನ್ ಪಾತ್ರ ಇಲ್ಲದೇ ಇರುವುದು ತನಿಖೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ, ದೋಷಾರೋಪ ಪಟ್ಟಿಯಲ್ಲಿ ನಟನ ಹೆಸರು ಸೇರಿಸದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ.
ದರ್ಶನ್ ಹಾಗು ಕೇರ್ ಟೇಕರ್ ವಿರುದ್ಧ ನಾಯಿ ಛೂ ಬಿಟ್ಟು ಕಚ್ಚಿಸಿದ್ದಾರೆಂದು ಅಮಿತಾ ದೂರಿನಲ್ಲಿ ಹೇಳಿದ್ದರು. A-2 ಆರೋಪಿಯಾಗಿ ದರ್ಶನ್ ಹೆಸರನ್ನು ಸಹಾ ಉಲ್ಲೇಖಿಸಿದ್ದರು. ಆದರೆ, ಘಟನೆ ನಡೆದಾಗ ನಟ ದರ್ಶನ್ ಸ್ಥಳದಲ್ಲೇ ಇರಲಿಲ್ಲ. ನಟ ದರ್ಶನ್ಗೆ ಘಟನೆಯ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ದರ್ಶನ್ ಹೆಸರು ಕೈ ಬಿಟ್ಟು ಚಾರ್ಚ್ ಶೀಟ್ ಸಲ್ಲಿಸಲು ರಾಜರಾಜೇಶ್ವರಿ ನಗರ ಪೊಲೀಸರು ಮುಂದಾಗಿದ್ದಾರೆ.
ಏನಿದು ಪ್ರಕರಣ? : ದರ್ಶನ್ ಅವರು ಸಾಕಿದ್ದ ಶ್ವಾನಗಳು ಅಮಿತಾ ಜಿಂದಾಲ್ ಎಂಬ ಮಹಿಳೆ ಮೇಲೆ ದಾಳಿ ಮಾಡಿ ಕಚ್ಚಿತ್ತು. ಆದರೆ, ಈ ವೇಳೆ ದರ್ಶನ್ ಮನೆಯಲ್ಲಿ ಇರಲಿಲ್ಲ. ಈ ಸಂಬಂಧ ಅಮಿತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ‘ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಲಾಗಿದೆ’ ಎಂದು ಮಹಿಳೆ ದೂರಿದ್ದರು. ದರ್ಶನ್ ಕೂಡ ವಿಚಾರಣೆಗೆ ಹಾಜರಿ ಹಾಕಿದ್ದರು. ‘ಪ್ರಕರಣ ನಡೆಯೋ ಸಂದರ್ಭದಲ್ಲಿ ನಾನು ಇರಲಿಲ್ಲ. ಇನ್ನು ಹೀಗೆ ಆಗದಂತೆ ನೋಡಿಕೊಳ್ಳುವೆ’ ಎಂದು ಅವರು ತಿಳಿಸಿದ್ದರು.





