Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಪಘಾತ ಪ್ರಕರಣ : ಉದಯೋನ್ಮುಖ ತುಳು ಕಾಮಿಡಿಯನ್ ಅರ್ಪಿತ್ ಅರೆಸ್ಟ್‌ 

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ-ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಇಬ್ಬರನ್ನು ಬಲಿ ಪಡೆದ ಕಾರು ಅಪಘಾತ  ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.‌‌

ಆರೋಪಿ ಕಾರು ಚಾಲಕನನ್ನು “ಮ್ಯಾಡ್ ಇನ್ ಕುಡ್ಲ” ಹೆಸರಿನ ಯೂ-ಟ್ಯೂಬರ್ ಹಳೆಯಂಗಡಿ ಇಂದಿರಾನಗರ ನಿವಾಸಿ ಅರ್ಪಿತ್(35) ಎಂದು ಗುರುತಿಸಲಾಗಿದೆ.ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಅಪಘಾತಕ್ಕೆ ಕಾರಣವಾದ ಆರೋಪಿಯ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶದಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿಯ ಟೈರ್ ಪಂಕ್ಚರ್ ಆಗಿತ್ತು. ಲಾರಿಯನ್ನು  ಪಡುಪಣಂಬೂರು ಬಳಿ ಹೆದ್ದಾರಿ ಬದಿ ನಿಲ್ಲಿಸಿ ಚಾಲಕ ಹಾಗೂ ಸಿಬ್ಬಂದಿ ಅದನ್ನು ದುರಸ್ತಿ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.  ಕಾರು ಚಾಲಕ ಅರ್ಪಿತ್ ಅವರು ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರು ಹೆದ್ದಾರಿಯ  ಎಡಗಡೆಗೆ ರಭಸವಾಗಿ ನುಗ್ಗಿ  ಡಿಕ್ಕಿ ಹೊಡೆದಿತ್ತು. ಚಾಲಕ ಅರ್ಪಿತ್ ಕಾರನ್ನು ನಿಲ್ಲಿಸದೇ  ಪರಾರಿಯಾಗಿದ್ದರು.  ಬಬುಲು (23), ಆಚಲ್ ಸಿಂಗ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದು ಅವರ ಶವದ ಭಾಗಗಳು ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಘಟನೆಯಲ್ಲಿ  ಕೇರಳ ನಿವಾಸಿ ಅನೀಶ್(42) ಗಂಭೀರ ಗಾಯಗೊಂಡಿದ್ದರು. ಕಾರು ಅಪಘಾತ ಸಂಭವಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಯಕ್ಷಗಾನ ನಡೆಯುತ್ತಿತ್ತು. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಹಾಗೂ ಸಿ.ಸಿ.ಟಿ.ವಿ. ಕ್ಯಾಮೆರಾದ ಲ್ಲಿ ದಾಖಲಾದ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿಯನ್ಬು ಜಾಮೀನಿನ‌ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು  ಮಾಹಿತಿ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ