Mysore
16
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ರಾಜೀವರ ಬೆರಳಿಗೆ ದಕ್ಕಿದ ರಾಗದ ಪಕಳೆಗಳು

ಸುಮಂಗಲಾ

ಸಂಗೀತದಲ್ಲಿ ಕಲಿಕೆಗಿಂತ ಮೈ ಗೂಡಿಸಿ ಕೊಳ್ಳು ಇರುತ್ತದೆ. ಬಾಯಿ ಮಾತಿನಲ್ಲಿ ಎಷ್ಟೂ ಅಂತ ಹೇಳ ಬಹುದು? ಶಬ್ದಗಳಲ್ಲಿ ಸಂಗೀತವನ್ನು ಹೇಳುವು ದಕ್ಕೆ ಆಗುವುದಿಲ್ಲ. ಗುರು ಗಳ ಗಾಯನ ಅಥವಾ ವಾದನ, ಬೇರೆ ದೊಡ್ಡವರ ಸಂಗೀತವನ್ನು ಕೇಳಿ ಕೇಳಿ ಮೈಗೂಡಿಸಿಕೊಳ್ಳಬೇಕು. ನೀವು ಅದರೊಳಗೇ ಇದ್ದರೆ, ನಿಮ್ಮ ಮೈಮನಸ್ಸೆಲ್ಲವನ್ನೂ ತೆರೆದುಕೊಂಡಿದ್ದರೆ ಬೇಗ ಬರುತ್ತದೆ. ಇಲ್ಲದಿದ್ದರೆ ಗೋಡೆ ಹಾಯ್ದುಕೊಂಡು ಸಂಗೀತ ನಿಮ್ಮನ್ನು ತಲುಪುವುದು ಕಷ್ಟ.

ನಮ್ಮ ಗುರುಗಳು ಮೊದಲು ಹಾಡಿ ತೋರಿಸುತ್ತಿದ್ದರು. ಆಮೇಲೆ ಸರೋದಿನಲ್ಲಿ ನುಡಿಸುವುದು. ಖಾನ್ ಸಾಹೇಬರಿಗೆ ಕಲಿಸುವುದರಲ್ಲಿ ಅಷ್ಟು ಹುರುಪು ಇರುತ್ತಿರಲಿಲ್ಲ. ಅವರಿಗೆ ಸರೋದನ್ನು ಚೆನ್ನಾಗಿ ನುಡಿಸುವುದರಲ್ಲಿ, ಅದರ ಎಲ್ಲ ಸಾಧ್ಯತೆಗಳನ್ನು ಶೋಧಿಸುವುದ ರಲ್ಲಿ ಹೆಚ್ಚು ಆಸಕ್ತಿ. ಅವರು ಆ ಶೋಧನೆಯಲ್ಲಿಯೇ ತನ್ಮಯರಾಗಿಬಿಡು ತಿದ್ದರು. ಅನ್ನಪೂರ್ಣ ದೀದಿ, ರವಿಶಂಕರ್ ಇವರಿಬ್ಬರ ಕಲಿಸುವಿಕೆ ಖಾನ್ ಸಾಹೇಬರ ಕಲಿಸುವ ವಿಧಾನಕ್ಕಿಂತ ತುಸು ಭಿನ್ನ. ಅಂದರೆ ಇವರಿಬ್ಬರಿಗೂ ತಾವು ಹೇಳಿದ್ದನ್ನು ಚಾಚೂತಪ್ಪದೆ ಮಾಡಿ ತೋರಿಸಬೇಕು.

ಗುರುಗಳು ನಮ್ಮ ಮುಂದೆ ದೊಡ್ಡ ಖಜಾನೆಯನ್ನೇ ತೆರೆದು ಇಡಬಹುದು. ಆದರೆ ನಮ್ಮ ಬುಟ್ಟಿ ಆಗ ಸಣ್ಣದಿತ್ತು. ಈಗ ಅದೇ ಬುಟ್ಟಿ ದೊಡ್ಡದಾಗಿದೆ. ಸಮುದ್ರದೆದುರು ಆಗ ನಿಂತಿದ್ದರೂ ನನ್ನ ಬೊಗಸೆ ಚಿಕ್ಕದಿತ್ತು. ಈಗ ಆ ಬೊಗಸೆ ದೊಡ್ಡದಾಗಿದೆ. ಕವನವೊಂದನ್ನು ಮತ್ತೆ ಮತ್ತೆ ಓದಿದಾಗ ಬೇರೆ ಅರ್ಥಗಳನ್ನು ಹೊಳೆಯುತ್ತ ಹೋಗುತ್ತದೆಯಲ್ಲ, ಹಾಗೆ ಈಗ ಬೇರೆ ಬೇರೆ ಅರ್ಥ, ಸಾಧ್ಯತೆಗಳ ಹುಡುಕಾಟ ಸಾಧ್ಯವಾಗುತ್ತದೆ.

ಗಾಯನದಲ್ಲಿ ಔನ್ನತ್ಯವನ್ನು ಸಾಧಿಸಿರುತ್ತೇವೆ, ಆಗ ದೇಹವನ್ನು ಇನ್ನೊಂದಕ್ಕೆ ಸಜ್ಜುಗೊಳಿಸುವುದು ಅಷ್ಟು ಸುಲಭ ಅಲ್ಲ, ಇಲ್ಲಿ ಯಾವುದೇ ಶಾರ್ಟ್ ಕಟ್ ಇಲ್ಲ. ದೇಹ, ಬೆರಳು, ಉಗುರು ಎಲ್ಲವನ್ನು ಇನ್ನೊಂದು ದುಡಿಮೆಗೆ ಹಚ್ಚಬೇಕು. ಈಗ ಸ್ವಲ್ಪ ಪಾಂಡಿತ್ಯವನ್ನು ಗಳಿಸುತ್ತಿದ್ದೇವೆ. ರಾಗದ ನಡೆ, ಓಟ, ತಾಳದ ನಡೆ, ಅದರ ಒಕ್ಕಣೆ ಇಂಥವುಗಳಿಂದ ತೃಪ್ತಿ, ಸುಖ ಒದಗುತ್ತದೆ. ಸೂರ್ಯಾಸ್ತ ನೋಡಿದಾಗ ಆಹಾ ಎನ್ನಿಸುವ ಭಾವನೆ ತುಂಬಿಕೊಳ್ಳುತ್ತದೆಯಲ್ಲ ಹಾಗೆ ದಿನ ಕಳೆದಂತೆ ಒಂದೇ ರಾಗದ ಬೇರೆ ಬೇರೆ ಪದರಗಳು ಪಕಳೆಗಳ ಹಾಗೆ ತೆರೆಯುತ್ತ ಹೋಗುತ್ತದೆ. ಈಗ ಸಿಂಧು ಭೈರವಿ ಸೌಖ್ಯದ ಬೇರೆ ಬೇರೆ ಪಕಳೆಗಳು ಸಿಗುತ್ತಾ ಹೋಗುತ್ತಿದೆ. ಇದು ದೇಹವೂ ಬೆರೆತುಕೊಂಡ ನಾನ್‌ವರ್ಬಲ್ ಸೌಖ್ಯ. ಒಂದಿಷ್ಟು ರಾಗಗಳ ಗುಚ್ಛ ನನ್ನ ಜೊತೆಗೆ ಇರುತ್ತದೆ. ಬೆಳಿಗ್ಗೆ ಏಳುತ್ತಲೇ ಒಂದು ರಾಗ ಗುಣಗುಣಿಸ್ತಾ ಇರುತ್ತೇನೆ.

ಹಲವಾರು ಭಾವನೆಗಳು ಸ್ಕೂಲವಾಗಿ ಕೂಡಿ ಬರುವುದು ಅಡಿಗ, ಎಲಿಯೆಟ್ ಹೇಳಿದಂತೆ, ಅವು ಸಂಕೀರ್ಣ ಭಾವಗಳು, ವಿವರಿಸಲು ಆಗುವುದಿಲ್ಲ. ಇಂಥದ್ದೇ ಕಾರಣ ಅಂತಿಲ್ಲ. ಯಾವುದೋ ಕಾರಣಕ್ಕೆ ಮನಸ್ಸಿನಲ್ಲಿ ಆ ರಾಗ ಬೆಳಿಗ್ಗೆಯೇ ಮೂಡಿರುತ್ತೆ, ಅದನ್ನೇ ಮಾಡು ಅಂತ ಮುಂದೆ ತಳ್ಳುತ್ತಿರುತ್ತದೆ.

ಒಂದು ನದಿ ಉಗಮದಲ್ಲಿ ಚಿಕ್ಕದಾಗಿರುತ್ತದೆ. ಆದರೆ ಮುಂದೆ ಸಾಗುತ್ತಾ ವಿಶಾಲವಾಗುತ್ತದೆ. ಹಾಗೆಯೇ ಒಮ್ಮೊಮ್ಮೆ ಯಾವುದಾದರೂ ರಾಗವನ್ನು ನಾನು ಹಾಡಿಕೊಂಡಾಗ ತೃಪ್ತಿಕರವಾಗಿರುತ್ತದೆ. ಆದರೆ ಧ್ವನಿಗೆ, ಗಂಟಲಿಗೆ ಬಂದಿದ್ದು ಬೆರಳಿಗೆ ಬರುವುದಿಲ್ಲ. ಆವಾಗ ರಾತ್ರಿಯೆಲ್ಲ ಅದೇ ಮನಸ್ಸಿನಲ್ಲಿ ಕೊರೆಯುತ್ತ ಇರುತ್ತದೆ. ಅದೇ ಚರ್ಚೆ ಮನಸೊಳಗೆ ನಡೆಯುತ್ತಿರುತ್ತದೆ. ನಾನು ಮುಂಬೈನಲ್ಲಿದ್ದು ಗುರುಗಳ ಬಳಿ ಕಲಿಯುತ್ತಿದ್ದ ಆರಂಭದ ದಿನಗಳಲ್ಲಿ, ಒಮ್ಮೆ ಚರ್ಚ್ ಗೇಟಿನಲ್ಲಿ ನಮ್ಮ ಗುರುಗಳ ಕಛೇರಿ ಕೇಳಿದೆ. ಒಂದು ಚಲನ್ ಮನಸ್ಸಿನಲ್ಲಿ ತುಂಬ ನಾಟಿಬಿಟ್ಟಿತು. ನನ್ನ ಜೊತೆಗೊಬ್ಬರು ಇದ್ದರು, ಅವರನ್ನು ಒಂದು ಕಡೆ ತಲುಪಿಸಬೇಕಿತ್ತು. ತಲುಪಿಸಿ ನನ್ನ ರೂಮಿಗೆ ಹೋದವನೇ ಅದನ್ನು ಪ್ರಯತ್ನಿಸಿದೆ. ಅಷ್ಟು ಬರಲಿಲ್ಲ, ಆದರೆ ಈಗ ಅಲ್ಪಸ್ವಲ್ಪ ಬರುತ್ತದೆ.

ಈ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ಹೋಗುತ್ತಿದ್ದೇನೆ. ಅದಕ್ಕೆ ತಯಾರಿ, ಮತ್ತೆ ದಿನಾ ಒಂದು-ಒಂದೂವರೆ ಗಂಟೆ ರಿಯಾಜ್ ಶುರು ಮಾಡುತ್ತೇನೆ. ನುಡಿಸಕ್ಕೆ ಬಲಗೈಗೆ ಶಕ್ತಿ ಬೇಕು… ಒಬ್ಬರು ಫಿಸಿಯೋಥೆರಪಿಸ್ಟ್ ಸಹಾಯದಿಂದ ವ್ಯಾಯಾಮ ಮಾಡಿಕೊಳ್ಳುತ್ತೇನೆ. ವಾರ್ಧಕ್ಯ ಶಕ್ತಿ ಹಂಗೇ ಸೋರಿಹೋಗುತ್ತಿರುತ್ತಿರುತ್ತದೆ. (ತೋಳು ತೋರಿಸುತ್ತ) ಇದೆಲ್ಲ ಹಂಗೇ ಕರಗಿ ಹೋಗತ್ತಿರುತ್ತದೆ. ಮಾಂಸಖಂಡಗಳು ಎಲ್ಲ ಕರಗಿಹೋಗುತ್ತದೆ. ಸಂಗೀತ ಅಂದರೆ ದೇಹನೂ ದುಡಿಮೆಗೆ ಹಚ್ಚಬೇಕು. ಅದಕ್ಕೆ ಶಕ್ತಿ ಬೇಕಾಗುತ್ತದೆ.

Tags:
error: Content is protected !!