ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ರಾಜ್ಯ ಸರ್ಕಾರ ತಾತ್ಸಾರ ಮನೋಭಾವನೆಯನ್ನು ಅನುಸರಿಸುತ್ತಿರುವುದು ವಿಷಾದನೀಯ. ೨-೩ ವರ್ಷಗಳಿಂದ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನೂ ನಡೆಸದೆ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಲ್ಲಿ ಭವಿಷ್ಯದ ಬಗ್ಗೆ ಆತಂಕವನ್ನು ಸೃಷ್ಟಿಸಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಮಾಧ್ಯಮಗಳ ಮುಂದೆ ಸರ್ಕಾರವನ್ನು ಪ್ರತಿನಿಧಿಸುವ ಸಚಿವರುಗಳು ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅವುಗಳನ್ನು ಭರ್ತಿ ಮಾಡಲು ಆದೇಶ ಮಾಡಲಿದ್ದೇವೆ ಎಂಬ ಭರವಸೆಗಳನ್ನು ನೀಡುವುದರಲ್ಲೇ ಸಮಯ ಕಳೆದು ಹುದ್ದೆಗಳನ್ನು ಭರ್ತಿ ಮಾಡುವುದನ್ನೇ ಮರೆತಿದ್ದಾರೆ.
ನೇಮಕಾತಿಗಳು ನಿಧಾನವಾದಷ್ಟು ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳ ಬದುಕಿನಲ್ಲಿ ಕತ್ತಲು ಕವಿಯಲು ಪ್ರಾರಂಭವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ರಾಜ್ಯ ಸರ್ಕಾರ ತಕ್ಷಣ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕಿದೆ. ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಮೋಸವಾಗದ ರೀತಿಯಲ್ಲಿ ಸರ್ಕಾರ ಪಾರದರ್ಶಕವಾಗಿ ನೇಮಕಾತಿಯನ್ನು ನಡೆಸಬೇಕಾಗಿದೆ.
-ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗರ




