ಇಂದಿನ ತಂತ್ರಜ್ಞಾನ ಯುಗದಲ್ಲಿ ಬ್ಯಾಂಕಿಂಗ್, ವ್ಯಾಪಾರ, ಶಿಕ್ಷಣ ಎಲ್ಲವೂ ಡಿಜಿಟಲ್ ಆಗುತ್ತಿವೆ. ಈ ಅಭಿವೃದ್ಧಿಯ ಜತೆಗೆ ‘ ಸೋಶಿಯಲ್ ಎಂಜಿನಿಯರಿಂಗ್’ ಎಂಬ ಹೊಸ ರೀತಿಯ ಆನ್ಲೆ ನ್ ಮೋಸಗಳು ಅಪಾಯಕಾರಿಯಾಗಿ ಬೆಳೆಯುತ್ತಿವೆ. ಜನರ ವಿಶ್ವಾಸ, ಭಾವನೆ ಮತ್ತು ಅಗತ್ಯತೆಗಳನ್ನು ಬಂಡವಾಳ ಮಾಡಿಕೊಂಡು ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರಂತೆ ನಟಿಸಿ ಹಣ ಹಾಗೂ ವೈಯಕ್ತಿಕ ಮಾಹಿತಿಯನ್ನು ಕಸಿದುಕೊಳ್ಳುತ್ತಿದ್ದಾರೆ.
ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ. ಮಾನವ ಮನಸ್ಸಿನ ಭದ್ರತೆಯ ಪರೀಕ್ಷೆ. ಶಿಕ್ಷಣ ಪಡೆದವರೂ ಈ ಬಲೆಗೆ ಬೀಳುತ್ತಿರುವುದು ಆತಂಕಕಾರಿ. ಹೀಗಾಗಿ ತಾಂತ್ರಿಕ ಭದ್ರತೆಯಷ್ಟೇ ಅಲ್ಲ, ಜಾಗೃತಿಯೇ ನಿಜವಾದ ರಕ್ಷಣೆಯಾಗಿದೆ. ಸರ್ಕಾರವು ಶಾಲೆ-ಕಾಲೇಜುಗಳಲ್ಲಿ ‘ಡಿಜಿಟಲ್ ಸುರಕ್ಷತೆ’ ಕುರಿತ ಪಾಠವನ್ನು ಅಳವಡಿಸಬೇಕು, ಸೈಬರ್ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಹೊಸ ಮೋಸದ ವಿಧಾನಗಳ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಬೇಕು. ಜೊತೆಗೆ ಜನರಿಗೆ ನಕಲಿ ಕರೆಗಳು, ಇ -ಮೇಲ್ಗಳು ಮತ್ತು ಸಂದೇಶಗಳನ್ನು ಗುರುತಿಸುವ ತರಬೇತಿಯನ್ನು ನೀಡುವ ಕಾರ್ಯಕ್ರಮಗಳನ್ನು ಕೂಡ ಪ್ರಾರಂಭಿಸಬೇಕು.
-ಡಾ. ಎಚ್. ಕೆ.ವಿಜಯಕುಮಾರ್, ಬೆಂಗಳೂರು





