ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಮೂಲಕ ಯುವ ಜನತೆಗೆ ಉದ್ಯೋಗ ಕಲ್ಪಿಸಬೇಕು ಎಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣನವರು ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರಿಗೆ ಮನವಿ ಮಾಡಿದ್ದಾರೆ ಎಂದು ದಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಸ್ವಾಗತಾರ್ಹ ವಿಚಾರ.
ಹಿಂದುಳಿದ ತಾಲ್ಲೂಕು ಎಂದು ನಂಜುಂಡಪ್ಪನವರ ವರದಿಯಲ್ಲಿ ಗುರುತಿಸಲ್ಪಟ್ಟಿದ್ದರೂ ಅದರ ನಿವಾರಣೆಗೆ ಇಷ್ಟು ವರ್ಷಗಳಾದರೂ ಸರ್ಕಾರದಿಂದ ಯಾವ ಪ್ರಯತ್ನವೂ ನಡೆದಿಲ್ಲ. ತಾಲ್ಲೂಕಿನಲ್ಲಿ ೩ ಪ್ರಮುಖ ಆಣೆಕಟ್ಟೆಗಳಿದ್ದರೂ ಇದರ ಪ್ರಯೋಜನ ದೊರಕುತ್ತಿರುವುದು, ನಂಜನಗೂಡು, ತಿ. ನರಸೀಪುರ, ಕೊಳ್ಳೇಗಾಲ ತಾಲ್ಲೂಕುಗಳಿಗೆ ಮಾತ್ರ. ನೀರಿನ ಲಭ್ಯತೆ ಇದ್ದರೂ ತಾಲ್ಲೂಕಿನಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.
ಕಬಿನಿ ಹಿನ್ನೀರಿನ ಉದ್ದಕ್ಕೂ ಅನೇಕ ರೆಸಾರ್ಟ್ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಮುಂದೆ ಇನ್ನೂ ಅನೇಕ ರೆಸಾರ್ಟ್ಗಳು ತಲೆ ಎತ್ತಬಹುದು. ಹಣವಂತರು, ವಿಲಾಸಿಗಳು ಮೋಜು, ಮಸ್ತಿ ಮಾಡಲು ಬೆಂಗಳೂರು, ಹೊರ ರಾಜ್ಯಗಳಿಂದ ಇಲ್ಲಿಗೆ ಬರುತ್ತಾರೆ. ಆದರೆ ಸ್ಥಳೀಯರಿಗೆ ರೆಸಾರ್ಟ್ಗಳಿಂದ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ಇಂತಹ ರೆಸಾರ್ಟ್ಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ರೆಸಾರ್ಟ್ಗಳು ಮೋಜು ಮಸ್ತಿಯ ಇನ್ನೊಂದು ಮುಖವಷ್ಟೇ. ಇಂತಹ ರೆಸಾರ್ಟ್ಗಳಿಗೆ ಅನುಮತಿ ಕೊಡುವ ಬದಲು ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕು.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





